ಕ್ಷೇಮ ಆಸ್ಪತ್ರೆಗೆ ಸಚಿವ ಡಾ| ಸುಧಾಕರ್ ಶ್ಲಾಘನೆ
Team Udayavani, Jun 8, 2020, 12:23 PM IST
ಜ| ಕೆ.ಎಸ್. ಹೆಗ್ಡೆ ಚಾರಿಟೆಬಲ್ ಆಸ್ಪತ್ರೆಗೆ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್ ಅವರನ್ನು ಸ್ವಾಗತಿಸಲಾಯಿತು.
ಉಳ್ಳಾಲ: ಕೋವಿಡ್ 19ರ ತುರ್ತು ಸಂದರ್ಭದಲ್ಲಿ ಟಾಸ್ಕ್ಪೋರ್ಸ್ ರಚನೆಯೊಂದಿಗೆ, ಟೆಲಿಮೆಡಿಸಿನ್ ಸೇವೆಯನ್ನು ಆರಂಭಿಸುವ ಮೂಲಕ ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೆಬಲ್ ಆಸ್ಪತ್ರೆ (ಕ್ಷೇಮ) ಸಮುದಾಯದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೈಗೊಂಡ ತ್ವರಿತ ನಿರ್ಧಾರಗಳು ಶ್ಲಾಘನೀಯ. ಸಂಸ್ಥೆಯು ಕೋವಿಡ್ ಪರೀಕ್ಷೆಗೆ ಪ್ರಯೋಗಾಲಯ ಸ್ಥಾಪನೆಯೊಂದಿಗೆ ಕೋವಿಡ್ ಮುಕ್ತ ಹೋರಾಟಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್ ಅಭಿಪ್ರಾಯಪಟ್ಟರು.
ದೇರಳಕಟ್ಟೆಯ ನಿಟ್ಟೆ (ಪರಿಗಣಿತ)ವಿಶ್ವವಿದ್ಯಾನಿಲಯದ ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೆಬಲ್ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ವಿ.ವಿ. ಅಧಿಕಾರಿಗಳೊಂದಿಗೆ ಮತ್ತು ವೈದ್ಯಕೀಯ ವಿಭಾಗದೊಂದಿಗೆ ಚರ್ಚೆ ನಡೆಸಿ ಆಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪಿಸಿದ ಕೋವಿಡ್ ಪರೀಕ್ಷಾ ಲ್ಯಾಬೊರೇಟರಿಯನ್ನು ಪರಿಶೀಲಿಸಿ ಮಾತನಾಡಿದರು. ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾ| ಶಾಂತಾರಾಮ ಶೆಟ್ಟಿ, ಆಡಳಿತ ವಿಭಾಗದ ಸಹ ಕುಲಾಧಿಪತಿ ಎನ್. ವಿಶಾಲ್ ಹೆಗ್ಡೆ, ಕುಲಪತಿ ಡಾ| ಸತೀಶ್ ಭಂಡಾರಿ, ಸಹ ಕುಲಪತಿ ಡಾ| ಎಂ.ಎಸ್. ಮೂಡಿತ್ತಾಯ, ಕುಲಸಚಿವೆ ಅಲ್ಕಾ ಕುಲಕರ್ಣಿ, ವೈದ್ಯಕೀಯ ಅಧೀಕ್ಷಕ ಮೇಜರ್ ಡಾ| ಶಿವಕುಮಾರ್ ಹಿರೇಮs…, ಕ್ಷೇಮ ಡೀನ್ ಡಾ| ಪಿ.ಎಸ್. ಪ್ರಕಾಶ್, ವೈಸ್ ಡೀನ್ಗಳಾದ ಡಾ| ಜಯಪ್ರಕಾಶ್ ಶೆಟ್ಟಿ, ಡಾ| ಅಮೃತ್ ಮಿರಾಜ್ಕರ್, ಎ.ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಯು.ಎಸ್. ಕೃಷ್ಣ ನಾಯಕ್ ಉಪಸ್ಥಿತರಿದ್ದರು.