ಕೆಲವು ಚರ್ಚ್ಗಳಲ್ಲಿ ಪ್ರಾರ್ಥನೆ ಪುನರಾರಂಭ
ಮಂಗಳೂರು ಧರ್ಮಪ್ರಾಂತ
Team Udayavani, Jun 14, 2020, 5:27 AM IST
ಮಹಾನಗರ: ಕೋವಿಡ್-19 ಲಾಕ್ಡೌನ್ ಕಾರಣ ಚರ್ಚ್ಗಳಲ್ಲಿ ಸ್ಥಗಿತಗೊಳಿಸಲಾಗಿದ್ದ ಸಾಮೂಹಿಕ ಪ್ರಾರ್ಥನೆ ಮಂಗಳೂರಿನ ರೊಜಾರಿಯೊ ಕೆಥೆಡ್ರಲ್ ಸಹಿತ ಕೆಲವು ಕೆಥೋಲಿಕ್ ಕ್ರೈಸ್ತರ ಚರ್ಚ್ಗಳಲ್ಲಿ ಶನಿವಾರ ಪುನರಾ ರಂಭಗೊಂಡಿತು.
ಮಂಗಳೂರು ಧರ್ಮಪ್ರಾಂತದ ಚರ್ಚ್ಗಳಲ್ಲಿ ಕೋವಿಡ್ ಸುರಕ್ಷಾ ಮಾರ್ಗಸೂಚಿಯನ್ನು ಅನುಸರಿಸಿ ಕೊಂಡು ಜೂ. 13ರಿಂದ ಸಾಮೂಹಿಕ ಪ್ರಾರ್ಥನೆ ಪುನರಾರಂಭ ಮಾಡ ಲಾಗುವುದು ಎಂದು ಜೂ. 6ರಂದು ಬಿಷಪ್ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಪ್ರಕಟಿಸಿದ್ದರು.
ಕೋವಿಡ್-19 ಹರಡದಂತೆ ಸರಕಾರ ಸೂಚಿಸಿದ ನಿರ್ದೇಶನಗಳು ಹಾಗೂ ಕರ್ನಾಟಕ ಪ್ರಾದೇಶಿಕ ಕೆಥೋಲಿಕ್ ಬಿಷಪರ ಪರಿಷತ್ತು ರಚಿಸಿದ ಮಾರ್ಗ ದರ್ಶನಗಳನ್ವಯ ಸೂಕ್ತ ಸಿದ್ಧತೆ ಮಾಡಿ ಕೊಳ್ಳುವಂತೆ ಬಿಷಪ್ ಅವರು ದ.ಕ. ಜಿಲ್ಲೆ ಮತ್ತು ಕಾಸರಗೋಡು ತಾಲೂಕು ವ್ಯಾಪ್ತಿಯನ್ನು ಒಳಗೊಂಡ ಮಂಗಳೂರು ಧರ್ಮಪ್ರಾಂತದ ಎಲ್ಲ 124 ಚರ್ಚ್ಗಳ ಧರ್ಮಗುರುಗಳಿಗೆ ಸೂಚಿಸಿದ್ದರು. ಅದರಂತೆ ಕೆಲವು ಚರ್ಚ್ಗಳು ಶನಿವಾರ ಸಂಜೆ ಬಲಿ ಪೂಜೆ ನಡೆಸಿದವು.
ಸೂಕ್ತ ಮುನ್ನೆಚ್ಚರಿಕೆ
ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಚರ್ಚ್ಗೆ ಬರುವ ವಿಶ್ವಾಸಿಗಳ ಕೈ ತೊಳೆಯಲು ವ್ಯವಸ್ಥೆ, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸೇಶನ್, ಬೆಂಚುಗಳಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ, ಪರಮ ಪ್ರಸಾದ ಸ್ವೀಕಾರ, ನಿರ್ಗಮನ- ಹೀಗೆ ಪ್ರತಿಯೊಂದು ಹಂತದಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಂಡು ಬರಲಾಯಿತು.
ವಾರ್ಡ್ವಾರು ಅವಕಾಶ
ರೊಜಾರಿಯೊ ಕೆಥೆಡ್ರಲ್ನಲ್ಲಿ ಬಲಿ ಪೂಜೆಯಲ್ಲಿ ಪಾಲ್ಗೊಳ್ಳಲು ವಿಶ್ವಾಸಿಗಳಿಗೆ ವಾರ್ಡ್ವಾರು ವ್ಯವಸ್ಥೆ ಮಾಡಲಾಗಿದೆ. ಒಟ್ಟು 14 ವಾರ್ಡ್ಗಳಿದ್ದು, ಶನಿವಾರ 1 ಬಲಿ ಪೂಜೆಗೆ 3 ವಾರ್ಡ್ಗಳ ಜನರಿಗೆ ಹಾಗೂ ರವಿವಾರ 3 ಬಲಿ ಪೂಜೆಗಳಲ್ಲಿ ತಲಾ 4 ವಾರ್ಡ್ಗಳ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಆನ್ಲೈನ್ ಮುಖಾಂತರ ಗೂಗಲ್ ಫಾರಂನಲ್ಲಿ ಪ್ರವೇಶವನ್ನು ಆಹ್ವಾನಿಸಲಾಗಿತ್ತು. 60-70 ಜನ ಎಂಟ್ರಿ ಸಲ್ಲಿಸಿದಾಗ ಫಾರಂ ಕ್ಲೋಸ್ ಮಾಡುವ ವ್ಯವಸ್ಥೆಯನ್ನು ಅನುಸರಿಸಲಾಗಿತ್ತು ಎಂದು ಕೆಥೆಡ್ರಲ್ನ ಮುಖ್ಯ ಗುರು ವಂ| ಜೆ.ಬಿ. ಕ್ರಾಸ್ತಾ ಅವರು ತಿಳಿಸಿದ್ದಾರೆ.