ಅರಂತೋಡು: ಮನೆಯ ಬೀಗ ಒಡೆದು ನಗ ನಗದು ಕಳವು
Team Udayavani, May 5, 2023, 6:00 AM IST
ಅರಂತೋಡು: ಸುಳ್ಯ ನ.ಪಂ. ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್ ಅವರ ಆಲೆಟ್ಟಿ ಗ್ರಾಮದ ಅರಂಬೂರಿನ ಮನೆಗೆ ಬುಧವಾರ ರಾತ್ರಿ ಕಳ್ಳರು ನುಗ್ಗಿ ಸುಮಾರು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವುಗೈದಿರುವುದಾಗಿ ವರದಿಯಾಗಿದೆ.
ಸಂಶುದ್ದೀನ್ ಕುಟುಂಬ ಬುಧವಾರ ಮಂಗಳೂರಿಗೆ ಕಾರ್ಯ ಕ್ರಮಕ್ಕೆಂದು ಹೋಗಿದ್ದರು. ರಾತ್ರಿ 9.45ರ ಸುಮಾರಿಗೆ ಅರಂಬೂರಿನ ಮನೆಗೆ ವಾಪಸಾದರು. ಈ ವೇಳೆ ಮನೆಯ ಎದುರಿನ ಬಾಗಿಲು ಒಡೆದಿರುವುದು ಕಂಡು ಬಂತು. ಒಳ ಹೋಗಿ ನೋಡಿದಾಗ ಕಪಾಟುಗಳ ಬಾಗಿಲು ಒಡೆಯಲಾಗಿತ್ತು. ಕಳ್ಳರು ನುಗ್ಗಿ ಈ ಕೃತ್ಯ ಎಸಗಿರುವುದು ಧೃಡಪಡಿಸಿದ ಅವರು ಪೋಲೀಸರಿಗೆ ಮಾಹಿತಿ ನೀಡಿದರು.
ಮನೆಯಿಂದ ಬೆಲೆಬಾಳುವ 14 ಬ್ರ್ಯಾಂಡೆಡ್ ವಾಚ್, 20 ಚಿನ್ನದ ಉಂಗುರ, 3 ಪೆಂಡೆಂಟ್, ಡೈಮಂಡ್ ಬ್ರಾಸ್ಲೈಟ್ 2, 1 ಡೈಮಂಡ್ ಸರ ಸಹಿತ 55 ಸಾವಿರ ನಗದು ಸೇರಿ ಒಟ್ಟು 20 ಲಕ್ಷ ರೂ. ಮೌಲ್ಯದ ಆಭರಣ ಕಳವಾಗಿರುವುದಾಗಿ ತಿಳಿದು ಬಂದಿದೆ. ಶ್ವಾನ ದಳ, ಬೆರಳಚ್ಚು ತಂಡದವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.