ಬಜಿರೆ: ಕೊರಗಜ್ಜನ ಗುಡಿಯ ಚಪ್ಪರಕ್ಕೆ ಬೆಂಕಿಕೊಟ್ಟ ಪ್ರಕರಣ: ಪ್ರತಿದೂರು ದಾಖಲು
Team Udayavani, Jul 17, 2023, 6:15 AM IST
ಬೆಳ್ತಂಗಡಿ: ವೇಣೂರಿನ ಬಜಿರೆ ಗ್ರಾಮದ ಬಾಡಾರು ಎಂಬಲ್ಲಿ ಜು. 11ರಂದು ಕೊರಗಕಲ್ಲು ಸ್ವಾಮಿ ಕೊರಗಜ್ಜನ ಗುಡಿಯ ಚಪ್ಪರಕ್ಕೆ ಬೆಂಕಿ ಕೊಟ್ಟು ಆರಾಧನ ಕೇಂದ್ರಕ್ಕೆ ಹಾನಿ ಉಂಟು ಮಾಡಿದ ಘಟನೆಗೆ ಸಂಬಂಧಿಸಿ ಈಗಾಗಲೆ ಪ್ರಕರಣ ದಾಖಲಾಗಿ ಓರ್ವನನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ಪ್ರತಿದೂರು ದಾಖಲಾಗಿದೆ.
ಶ್ರೀ ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಡಾ| ರಾಜೇಶ್ ನೀಡಿದ ದೂರಿನಂತೆ, ಕುಟುಂಬದವರು ಬಾಡಾರು ಎಂಬಲ್ಲಿ ಮನೆಯ ಸಮೀಪ ಹಿಂದಿನಿಂದಲೂ ಆರಾಧಿಸಿಕೊಂಡು ಬರುತ್ತಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಕ್ಕೆ ಪ್ರದೀಪ್ ಕುಮಾರ್ ಹೆಗ್ಡೆ ತನ್ನ ಸಂಗಡಿಗರೊಂದಿಗೆ ಸೇರಿ ಅನಧಿಕೃತ ಟ್ರಸ್ಟ್ ರಚಿಸಿಕೊಂಡು ಸಾರ್ವಜನಿಕ ಹಣ ಸಂಗ್ರಹಣೆ ಹಾಗೂ ಮೋಸ ವಂಚನೆ ಮಾಡುವ ದುರುದ್ದೇಶದಿಂದ ತನ್ನ ಮೇಲೆ ಹಾಗೂ ಕುಟುಂಬದ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ.
ಧಾರ್ಮಿಕ ಶ್ರದ್ಧಾ ಕೇಂದ್ರದ ವಿಷಯಕ್ಕೆ ಸಂಬಂಧಿಸಿ ಡಾ| ರಾಜೇಶ್ ಹಾಗೂ ಕುಟುಂಬಸ್ಥರಿಗೆ ಜೀವ ಬೆದರಿಕೆ ಒಡ್ಡುತ್ತ ಬಂದಿದ್ದು, ಜು.11ರಂದು ಆರೋಪಿತ ಹರೀಶ್ ಪೂಜಾರಿ ಉಳಿದ ಆರೋಪಿಗಳ ಕುಮ್ಮಕ್ಕು ಹಾಗೂ ಸಹಾಯದಿಂದ ಧಾರ್ಮಿಕ ಶ್ರದ್ಧಾ ಕೇಂದ್ರದ ಚಪ್ಪರಕ್ಕೆ ಬೆಂಕಿಹಚ್ಚಿ ಅಪವಿತ್ರಗೊಳಿಸಿ ಫಿರ್ಯಾದಿದಾರರು ಮತ್ತು ಕುಟುಂಬಸ್ಥರ ನಂಬಿಕೆಗೆ ದ್ರೋಹ ಉಂಟು ಮಾಡಿದ್ದಾರೆ ಎಂಬುದಾಗಿ ಒಟ್ಟು 13 ಜನರ ವಿರುದ್ಧ ನೀಡಿದ ದೂರಿನ ಮೇರೆಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.