ಹರಪ್ಪಾಡಿ ತೋಟದಲ್ಲಿ ಪ್ರಾತ್ಯಕ್ಷಿಕೆ; ಡಾ| ಹೆಗ್ಗಡೆ ಪ್ರಶಂಸೆ
ಅಡಿಕೆ ಕೊಯ್ಲು, ಬೋರ್ಡೊ ಸಿಂಪಡಣೆಗೆ ಸುಧಾರಿತ ದೋಟಿ
Team Udayavani, Jan 3, 2020, 8:47 PM IST
ಬೆಳ್ತಂಗಡಿ: ಅಡಿಕೆ ಕೊಯ್ಲು / ಬೋರ್ಡೊ ದ್ರಾವಣ ಸಿಂಪಡಣೆಗೆ ಸುಧಾರಿತ ಹೈಟೆಕ್ ದೋಟಿ ಸಂಶೋಧಿ ಸಿದ ಹಾಸನ ಮೂಲದ ಪ್ರಸಕ್ತ ಅಮೆರಿಕಾ ದಲ್ಲಿರುವ ಎಂಜಿನಿಯರ್ ಬಾಲಸುಬ್ರಹ್ಮಣ್ಯ ಅವರಿಂದ ಧರ್ಮಸ್ಥಳದ ಹರಪ್ಪಾಡಿ ತೋಟ ದಲ್ಲಿ ಶುಕ್ರವಾರ ಪ್ರಾತ್ಯಕ್ಷಿಕೆ ನಡೆಯಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಸುಧಾರಿತ ದೋಟಿ ಪ್ರಾತ್ಯಕ್ಷಿಕೆ ವೀಕ್ಷಿಸಿ, ಈವರೆಗೆ ಬಂದ ಕೊಯ್ಲು ದೋಟಿಗಳಿಂದ ವಿಭಿನ್ನವಾಗಿದ್ದು, ವಿದ್ಯುತ್, ಇಂಧನ ಇಲ್ಲದೆ ಬಳಸಬಹುದಾ ಗಿದೆ. ಹಗುರ, ಅತಿ ಕಡಿಮೆ ಶ್ರಮ ಹಾಗೂ ಅತಿ ಹೆಚ್ಚು ಸಮಯ ಉಳಿಸುವ ರೀತಿ ದೋಟಿಯನ್ನು ಬಾಲಸುಬ್ರಹ್ಮಣ್ಯ ಅನ್ವೇಷಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅರೆಕಾನಟ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಫೌಂಡೇಶನ್ ಸಭೆಯಲ್ಲಿ ಸುಧಾರಿತ ದೋಟಿ ಬಳಕೆಗೆ ಪ್ರೊತ್ಸಾಹ ನೀಡುವಂತೆ ರೈತರಿಗೆ ಸಲಹೆ ನೀಡಲಾಗುವುದು. ಕೃಷಿ ಯಂತ್ರಧಾರೆ ಮುಖೇನ ಬಾಡಿಗೆಯೂ ನೀಡಬಹುದಾ ಗಿದೆ. ಇಂತಹ ಅನ್ವೇಷಣೆಗಳಿಂದ ಗ್ರಾಮೀಣ ಕೃಷಿಕರಿಗೆ ವರವಾಗಲಿದೆ ಎಂದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್, ಧರ್ಮಸ್ಥಳ ಕೃಷಿ ವಿಭಾಗ ಮುಖ್ಯಸ್ಥ ಬಾಲಕೃಷ್ಣ ಪೂಜಾರಿ, ಕೃಷಿ ಆಸಕ್ತರು ಭಾಗವಹಿಸಿದರು.
ದೋಟಿ ಸಂಶೋಧಕ ಬಾಲಸುಬ್ರಹ್ಮಣ್ಯ ಪ್ರಾತ್ಯಕ್ಷಿಕೆ ನೀಡಿ, ಸ್ವಯಂ ಉದ್ಯೋಗ ಬಯಸುವ ಯುವಕರಿಗೆ ವರದಾನವಾ ಗಿದೆ. ಮಲೆನಾಡು ಪ್ರದೇಶಗಳಲ್ಲಿ 20ಕ್ಕೂ ಹೆಚ್ಚು ದೋಟಿ ಬಳಕೆಯಲ್ಲಿದೆ. ಯುವ ಕರು ಬಾಡಿಗೆ ರೂಪದಲ್ಲಿ ಕೆಲಸ ನಿರ್ವ ಹಿಸುತ್ತಿದ್ದಾರೆ. ಯಾರೂ ಸ್ವಂತ ಬಳಕೆಗೆ ವಿನಿಯೋಗಿಸಬಹುದಾಗಿದೆ.
ಇದರಿಂದ ಕಾರ್ಮಿಕರ ಸಮಸ್ಯೆ ತಪ್ಪುವುದಲ್ಲದೆ ಮಾಸಿಕ 60ರಿಂದ 70 ಸಾವಿರ ರೂ. ಉಳಿತಾಯ ಮಾಡಬಹುದು ಎಂದು ತಿಳಿಸಿದರು. ಪ್ರಸಕ್ತ ಬೆಲೆ 30ರಿಂದ 80 ಸಾವಿರ ರೂ. ಇದ್ದು, ಮುಂದಿನ ದಿನಗಳಲ್ಲಿ 10 ಸಾವಿರ ರೂ. ಬೆಲೆಯಲ್ಲಿ ವಿತರಿಸುವ ನಿಟ್ಟಿನಲ್ಲಿ ದೋಟಿ ತಯಾರಾಗುತ್ತಿದೆ. ಸರ್ವೀಸ್ ಹಾಗೂ ಬಿಡಿಭಾಗ ಒಂದೇ ದಿನದಲ್ಲಿ ಗ್ರಾಹಕರಿಗೆ ಒದಗಿಸುವಂತ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.
ಅಡಿಕೆ ಮರ ಏರದೆ ಔಷಧ ಸಿಂಪಡಣೆ.
ಕೊಯ್ಲು, ಮದ್ದು ಸಿಂಪಡಣೆಗೆ 60ರಿಂದ 80 ಅಡಿ ಉದ್ದದ ದೋಟಿ.
ಟ್ರೈಪೋಡ್ ಮಾದರಿ
ಅವಶ್ಯಕ್ಕೆ ತಕ್ಕಷ್ಟು ಎತ್ತರಿಸಿ ಲಾಕ್ ಮಾಡುವ ವ್ಯವಸ್ಥೆ.
ನಿಂತಲ್ಲೇ 360 ಡಿಗ್ರಿ ಸುತ್ತಮುತ್ತ 10 ಮರಗಳಿಗೆ ಸಿಂಪಡನೆ ಸಾಧ್ಯ.
60 ಅಡಿಗೆ 4 ಕೆ.ಜಿ., 80 ಅಡಿಗೆ 6 ಕೆ.ಜಿ. ತೂಗುತ್ತದೆ.
ಫೈಬರ್ ಟೆಕ್ನಾಲಜಿ,
10ರಿಂದ 20 ವರ್ಷ ಬಾಳಿಕೆ.
ಅಡಿಕೆ, ತೆಂಗಿನಕಾಯಿ,
ಕಾಳುಮೆಣಸಿಗಾಗಿ ಮರ ಏರುವ ಬದಲು ದೋಟಿ ಬಳಕೆ ಅನುಕೂಲ.
ಪ್ರತಿಯೊಂದು ಅಡಿಕೆಗೂ ಸಿಂಪಡಣೆಯಾಗುವುದರಿಂದ ಕೊಳೆರೋಗ ಸಂಪೂರ್ಣ ಹತೋಟಿ.