ಬೆಳಾಲು ಸಹಿತ ಕೊಯ್ಯೂರು ಅರಣ್ಯದಲ್ಲಿ ಬೆಂಕಿ
Team Udayavani, Apr 4, 2023, 6:38 AM IST
ಬೆಳ್ತಂಗಡಿ: ಬೆಳಾಲು ಗ್ರಾಮದ ಕೊಯ್ಯೂರು ಅರಣ್ಯದ ಪೆರಿಯಡ್ಕ ಪ್ರದೇಶದಲ್ಲಿ ರವಿವಾರ ಬೆಂಕಿ ಪ್ರಕರಣ ಉಂಟಾಗಿದ್ದು, ಸುಮಾರು ಎರಡು ಎಕ್ರೆ ಪ್ರದೇಶದ ವನ್ಯ ಸಂಪತ್ತಿಗೆ ಹಾನಿ ಉಂಟಾಗಿದೆ.
ಅರಣ್ಯ ಇಲಾಖೆಯ ಉಪ್ಪಿನಂಗಡಿ ವಲಯದ ಕಣಿಯೂರು ಉಪ ವಲಯ ವ್ಯಾಪ್ತಿಯ ಈ ಕಾಡಿನಲ್ಲಿ ಯಾವ ಕಾರಣದಿಂದ ಬೆಂಕಿ ಉಂಟಾ ಗಿದೆ ಎಂದು ತಿಳಿದುಬಂದಿಲ್ಲ. ಡಿ.ಆರ್.ಎಫ್.ಒ ಲೋಕೇಶ್, ಗಸ್ತು ಅರಣ್ಯ ಪಾಲಕ ವಿನಯ ಚಂದ್ರ, ಶೌರ್ಯ ವಿಪತ್ತು ತಂಡಗಳ ಸದಸ್ಯರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಬೆಂಕಿ ನಂದಿಸಿದರು.
ಮುಂಡಾಜೆ- ಧರ್ಮಸ್ಥಳ ಮೀಸಲು ಅರಣ್ಯದ ನೇರ್ತನೆ, ಎಕ್ಕೆಲ, ಕೋಟಿ ಹಿತ್ತಿಲು ಮೊದಲಾದೆಡೆ ಅರಣ್ಯದಲ್ಲಿ ಬೆಂಕಿ ಉಂಟಾಗಿದ್ದು, ಒಂದಿಷ್ಟು ಹತೋಟಿಗೆ ಬರುತ್ತಿದ್ದಂತೆ ಮುಂಡ್ರುಪಾಡಿ, ಫಿಲತಡ್ಕ ಮೊದಲಾದೆಡೆ ಬೆಂಕಿ ಹರಡುತ್ತಿದೆ. ಅರಣ್ಯ ಇಲಾಖೆ ಸಿಬಂದಿ ಹಾಗೂ ಸ್ಥಳೀಯ ಅನೇಕ ಮಂದಿ ಸೇರಿ ಬೆಂಕಿಯನ್ನು ಹತೋಟಿಗೆ ತರಲು ಪ್ರಯತ್ನ ನಡೆಸುತ್ತಿದ್ದಾರೆ.