ಮೇವಿನ ಬರ ನೀಗಿಸಲು ಗೋಮಾಳದಲ್ಲಿ ಹುಲ್ಲು ನಾಟಿ
Team Udayavani, Dec 31, 2021, 4:06 AM IST
ಪುತ್ತೂರು: ಪಶುಗಳಿಗೆ ಮೇವು ಬರ ತಪ್ಪಿಸುವ ಸಲುವಾಗಿ ಗೋಮಾಳದಲ್ಲಿ ಹುಲ್ಲು ನಾಟಿಯ ಚಿಂತನೆಯೊಂದು ಪುತ್ತೂರಿನಲ್ಲಿ ಮೊಳಕೆಯೊಡೆದಿದೆ.
ಬಂಜರು ಭೂಮಿಯಂತಿರುವ ಪುತ್ತೂರಿನ ನೂರಾರು ಎಕ್ರೆ ಗೋಮಾಳದಲ್ಲಿ ಗೋವುಗಳಿಗಾಗಿ ಹುಲ್ಲು ನಾಟಿ ಮಾಡುವ ಮಹತ್ತರ ಯೋಜನೆಗೆ ಶಾಸಕ ಸಂಜೀವ ಮಠಂದೂರು ಅವರಿಂದ ಯೋಜನಾ ಪ್ರಸ್ತಾವನೆ ಸಿದ್ಧಗೊಂಡಿದೆ.
734 ಎಕ್ರೆ ಗೋಮಾಳ ಜಮೀನು :
ಕಂದಾಯ ಇಲಾಖೆ ನೀಡಿದ ಸರಕಾರಿ ದಾಖಲೆ ಪ್ರಕಾರ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 734 ಎಕ್ರೆ ಗೋಮಾಳ ಜಮೀನು ಇದೆ. ಇವುಗಳ ಪೈಕಿ ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳ ಬಳಕೆಗೆ ನೀಡಲಾಗಿದೆ. ಉಳಿದ ಗೋಮಾಳ ಭೂಮಿಯಲ್ಲಿ ಗೋವುಗಳಿಗೆ ಮೇವು ಪೂರೈಕೆಗೆ ಹುಲ್ಲು ಬೆಳೆಯಲು ಯೋಜನಾ ವರದಿ ಸಿದ್ಧಪಡಿಸಲಾಗಿದೆ.
ಕಂದಾಯ ಇಲಾಖೆ ನೀಡಿದ ಸರಕಾರಿ ದಾಖಲೆ ಪ್ರಕಾರ ಲಭ್ಯವಿರುವ ಒಟ್ಟು 34 ಎಕ್ರೆ ಗೋಮಾಳ ಸರ್ವೇವೆಗೆ ಸಿದ್ಧತೆ ನಡೆಸ ಲಾಗಿದೆ. ಅತಿಕ್ರಮಣಗೊಂಡ ಗೋಮಾಳ ಭೂಮಿ ಯಾರು, ಯಾವ ಉದ್ದೇಶಕ್ಕೆ ಬಳಸುತ್ತಿದ್ದಾರೆ ಎಂಬುದರ ಬಗ್ಗೆಯೂ ವರದಿ ನೀಡುವಂತೆ ತಾ.ಪಂ. ಕೆಡಿಪಿ ಸಭೆಯಲ್ಲಿ ಸೂಚಿಸಲಾಗಿದೆ.
ಗೋಶಾಲೆ ನಿರ್ಮಾಣ :
ಇದರ ಪೂರ್ವಭಾವಿಯಾಗಿ ಮುಂಡೂರು ಗ್ರಾಮದ ಗೋಮಾಳದಲ್ಲಿ 8.63 ಎಕ್ರೆ ಭೂಮಿಯನ್ನು ಗುರುತಿಸಿ ಜಿಲ್ಲೆಯಲ್ಲೇ ಸುಸಜ್ಜಿತ ಹಾಗೂ ವಿಶಾಲ ಗೋಶಾಲೆ ನಿರ್ಮಾಣಕ್ಕೆ ಕಾಯ್ದಿರಿಸುವಂತೆ ಸೂಚಿಸಲಾಗಿದೆ. ಮುಂಡೂರು ಗ್ರಾಮದ ಸರ್ವೆ ನಂ.151/2ರ ಗೋಮಾಳದಲ್ಲಿ 8.63 ಎಕ್ರೆಯನ್ನು ಗುರುತಿಸಿ ಜಿಲ್ಲೆಯಲ್ಲೇ ಸುಸಜ್ಜಿತ ಹಾಗೂ ವಿಶಾಲ ಗೋಶಾಲೆ ನಿರ್ಮಾಣಕ್ಕೆ ಕಾಯ್ದಿರಿಸುವಂತೆ ಸೂಚಿಸ ಲಾಗಿದ್ದು, ತಹಶೀಲ್ದಾರ್ ರಮೇಶ್ ಬಾಬು ಹಾಗೂ ಕಂದಾಯ ಅಧಿಕಾರಿ ಮಹೇಶ್ ನೇತೃತ್ವದಲ್ಲಿ ಪರಿಶೀಲನೆಯ ಹಂತದಲ್ಲಿದೆ.
ಹಾಲು ಸೊಸೈಟಿಗೆ ಗೋಮಾಳ :
ಕೆಎಂಎಫ್ ಹಾಗೂ ಸ್ಥಳೀಯ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಗೋಮಾಳ ಭೂಮಿಯನ್ನು ಹಸ್ತಾಂತರಿಸಿ ಅಲ್ಲಿ ಗೋವಿಗೆ ಬೇಕಾಗಿರುವ ಆಹಾರ/ಹುಲ್ಲು ಬೆಳೆಸಲು ಕ್ರಮ ಕೈಗೊಳ್ಳುವ ಚಿಂತನೆ ನಡೆದಿದೆ. ಕೆಎಂಎಫ್ನ ಜತೆಗಿರುವ ಪ್ರತಿಯೊಂದು ಹಾಲು ಉತ್ಪಾದಕ ಸಹಕಾರಿ ಸಂಘದ ಮೂಲಕ ಪಶು ಆಹಾರ ಸಿದ್ಧಗೊಳಿಸಲು ಆರ್ಥಿಕ ಸಹಕಾರ ನೀಡಿದಲ್ಲಿ ಗೋಮಾಳದಲ್ಲಿ ಹುಲ್ಲು ಬೆಳೆಯುವ ಯೋಜನೆ ಯಶಸ್ವಿಯಾಗಬಹುದು.
ಗೋಮಾಳದಲ್ಲಿ ಹುಲ್ಲು ಬೆಳೆದರೆ ಪಶುಗಳಿಗೆ ಮೇವು ಒದಗಿಸಲು ಸಾಧ್ಯವಾಗಬಹುದು ಎನ್ನುವ ಕಾರಣಕ್ಕಾಗಿ ಈ ಯೋಜನೆ ರೂಪಿಸಲಾಗಿದೆ. ಜತೆಗೆ ಗೋಮಾಳ ಜಮೀನಿನಲ್ಲಿ ಗೋಶಾಲೆ ನಿರ್ಮಾಣದ ಚಿಂತನೆಯೂ ಇದೆ. –ಸಂಜೀವ ಮಠಂದೂರು, ಪುತ್ತೂರು ಶಾಸಕರು