ಬಂಗೇರಕಟ್ಟ ಸಹಿತ ಎಲ್ಲ ಕೆರೆ, ಕೊಳಗಳ ಪುನಶ್ಚೇತನಕ್ಕೆ ಸಕಾಲ
ತೀವ್ರ ನೀರಿನ ಕೊರತೆ, ಅಂತರ್ಜಲ ಮಟ್ಟ ಕುಸಿಯುವ ಭೀತಿ
Team Udayavani, Dec 17, 2020, 10:31 PM IST
ಪುನಶ್ಚೇತನಕ್ಕೆ ಕಾದಿರುವ ಪಾರೆಂಕಿ ಗ್ರಾಮದ ಬಂಗೇರಕಟ್ಟ ಕೆರೆ.
ಬೆಳ್ತಂಗಡಿ: ನೀರಿನ ಹಕ್ಕು ಭಾರತದ ಸಂವಿಧಾನದ 21ನೇ ಅನುಚ್ಛೇದದ ಮೂಲಕ ಖಾತರಿ ನೀಡಲಾದ ಜೀವ ಸಂರಕ್ಷಣೆ ಹಕ್ಕಿನ ಒಂದು ಭಾಗವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವೇ ತೀರ್ಪು ನೀಡಿದೆ. ಆದರೆ ತೀವ್ರ ನಗರೀಕರಣ, ಕೈಗಾರೀಕರಣ ಮತ್ತು ಜನಸಂಖ್ಯಾ ಸ್ಫೋಟದಿಂದಾಗಿ ಕೆರೆಗಳು ಮತ್ತು ಕೊಳಗಳಂಥ ಜಲಮೂಲಗಳ ಒಡ್ಡುಗಳು ಇಂದು ನಾಶದ ಅಂಚಿನಲ್ಲಿವೆ ಎಂಬುದು ವಿಷಾದನೀಯ.
ಮಡಂತ್ಯಾರು ಗ್ರಾ.ಪಂ.ಗೆ ಒಳಪಟ್ಟ ಪಾರೆಂಕಿ ಗ್ರಾಮದ ಸರ್ವೇ ನಂ. 54/3ರಲ್ಲಿ 3 ಎಕರೆ ಪ್ರದೇಶ ದಲ್ಲಿ ಇರುವ ಬಂಗೇರಕಟ್ಟ ಕೆರೆ ಸಹಿತ ತಾಲೂಕಿನ ಹಲವು ಕೆರೆಗಳು ಅಭಿವೃದ್ಧಿಗಾಗಿ ಕಾಯುತ್ತಿವೆೆ. ಬಂಗೇರಕಟ್ಟ ಕೆರೆಗೂ ಬಳ್ಳಮಂಜ ಅನಂತೇಶ್ವರ ದೇವಸ್ಥಾನಕ್ಕೂ ಐತಿಹಾಸಿಕ ಸಂಬಂಧವಿದೆ.
ಶೇಷನಾಗ ದೇವರಕಂಬಳಕ್ಕೆ ಇದೇ ನೀರು
ಪಾರೆಂಕಿ ಗ್ರಾಮದ ಬಂಗೇರಕಟ್ಟ ಕೆರೆಗೂ ಮಚ್ಚಿನ ಗ್ರಾಮದಲ್ಲಿರುವ ಅನಂತೇಶ್ವರ ದೇವಸ್ಥಾನದಲ್ಲಿ ನಡೆಯುವ ಶೇಷನಾಗ ದೇವರಕಂಬಳಕ್ಕೆ ಬಹಳ ಸಂಬಂಧ ಇದೆ. ದೇವರ ಕಂಬಳಕ್ಕೆ 30 ವರ್ಷಗಳ ಹಿಂದೆ ಬಂಗೇರಕಟ್ಟ ಕೆರೆಯಿಂದ ನಾಲೆಗಳ ಮೂಲಕ ನೀರು ಹಾಯಿಸಲಾಗುತ್ತಿತ್ತು. ಕ್ರಮೇಣ ನಾಲೆಗಳ ನಿರ್ವಹಣೆ ಇಲ್ಲದೆ ಶಿಥಿಲಗೊಂಡು ನೀರು ಹಾಯಿಸುವ ಪ್ರಕ್ರಿಯೆ ನಿಲ್ಲಿಸಲಾಗಿದೆ. ಮತ್ತೂಂದೆಡೆ ಕೊಳವೆಬಾವಿ ಜನಪ್ರಿಯಗೊಂಡ ಬಳಿಕ ಕೆರೆಗಳ ಅಭಿ ವೃದ್ಧಿಯೂ ಕಡಿಮೆಯಾಗಿದೆ. ಮಡಂತ್ಯಾರು ಪೇಟೆ ಸಮೀಪದ ಅಂಕರಕಟ್ಟ ಕೆರೆ, ಅತ್ತಾಜೆ ಕೆರೆ, ಅಜಿಲ ಕೆರೆ, ಮುಂಡಾಜೆ, ಕಳಿಯ ಹೀಗೆ ತಾಲೂಕಿನೆಲ್ಲೆಡೆಯ ಕೆರೆ ದುರಸ್ತಿಗೂ ಇದು ಸಕಾಲ.
ರಾಜ್ಯದೆಲ್ಲೆಡೆ ಇಂತಹ ಅಸಂಖ್ಯಾತ ಕೆರೆ ಗಳನ್ನು ಕೃಷಿ, ಕುಡಿಯುವ ನೀರು ಮತ್ತು ಗ್ರಾಮೀಣ ಕೈಗಾರಿಕೆಗಳ ಮುಖ್ಯ ಮೂಲವಾಗಿಸ ಬಹುದಾಗಿದ್ದರೂ ಜನ ಪ್ರತಿನಿಧಿಗಳ ನಿರಾ ಸಕ್ತಿಯಿಂದ ಕೆರೆಗಳು ಸೊರಗಿವೆ. ಸರಕಾರದ ವಿವಿಧ ಇಲಾಖೆಗಳಾದ ಸಣ್ಣ ನೀರಾವರಿ, ಗ್ರಾಮೀಣಾಭಿ ವೃದ್ಧಿ, ಪಂಚಾಯತ್ ರಾಜ್, ಅರಣ್ಯ ಇತ್ಯಾದಿ ಇಲಾಖೆಗಳ ಮೂಲಕ ಕೆರೆಗಳನ್ನು ಸಂರಕ್ಷಿಸಿ, ಜೀರ್ಣೋದ್ಧಾರಗೊಳಿಸಬೇಕಾಗಿತ್ತು. ಆದರೆ ಇಲಾಖೆಗಳ ನಿರ್ಲಕ್ಷ್ಯದಿಂದಾಗಿ ಅವುಗಳ ಅವಸಾನಕ್ಕೆ ಕಾರಣವಾಗಿದೆ.
ಬರಿದಾಗುತ್ತಿದೆ ಅಂತರ್ಜಲ
ಕೆರೆಗಳ ನಾಶದಿಂದಾಗಿ ತೀವ್ರ ನೀರಿನ ಕೊರತೆ ಮತ್ತು ಅಂತರ್ಜಲ ಬರಿದಾಗಲು ಕಾರಣವಾಗುತ್ತಿದೆ. ನೀರಾವರಿಗೆ, ಕುಡಿಯುವುದಕ್ಕೆ ನೀರು ಮತ್ತು ಜಾನುವಾರುಗಳ ಬಳಕೆಗೆ ನೀರಿನ ಲಭ್ಯತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಜಲಮೂಲಗಳ ರಕ್ಷಣೆ, ಸಂರಕ್ಷಣೆ ಮತ್ತು ಪುನಶ್ಚೇತನ ಗೊಳಿಸುವೆಡೆಗೆ ತುರ್ತಾಗಿ ಚಿಂತಿಸುವ ಅಗತ್ಯವಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಮಾದರಿ
ಅಂತರ್ಜಲ ಮಟ್ಟ ಕುಸಿತದ ಸಮಸ್ಯೆಯನ್ನು ಮನಗಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ 2016ರಲ್ಲಿ ನಮ್ಮೂರ ನಮ್ಮ ಕೆರೆ ಯೋಜನೆಯನ್ನು ಪ್ರಾರಂಭಿಸಿದ್ದು, 4 ವರ್ಷಗಳಲ್ಲಿ ರಾಜ್ಯಾದ್ಯಂತ 274 ಕೆರೆಗಳ ಪುನಶ್ಚೇತನ ಕಾಮಗಾರಿ ಅಚ್ಚುಕಟ್ಟಾಗಿ ನಡೆ ದಿದೆ. ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 36 ಸಾವಿರಕ್ಕೂ ಅಧಿಕ ಕೆರೆಗಳು ಇವೆ.