ಕನಸಾಗಿಯೇ ಉಳಿದ ಸರ್ವಋತು ರಸ್ತೆ
Team Udayavani, Aug 17, 2021, 3:30 AM IST
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಅಭಿವೃದ್ಧಿಗೊಳ್ಳುತ್ತಿದ್ದರೂ ಇನ್ನೂ ಅನೇಕ ಬೇಡಿಕೆಗಳು ಈಡೇರಿಲ್ಲ. ಅಸಮರ್ಪಕ ರಸ್ತೆಯಿಂದ ಇಲ್ಲಿನ ಜನರು ಹೈರಾಣಾಗಿದ್ದಾರೆ. ಮಳೆಗಾಲದಲ್ಲಿ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಜತೆಗೆ ನೆಟ್ವರ್ಕ್ ಸಮರ್ಪಕವಾಗಿರದೆ ತೊಂದರೆಯಾಗಿದೆ. ಇಲ್ಲಿನ ಸಮಸ್ಯೆಗಳ ಚಿತ್ರ ಒಂದು ಊರು; ಹಲವು ದೂರು ಅಂಕಣದಲ್ಲಿ.
ಸುಬ್ರಹ್ಮಣ್ಯ: ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ಪ್ರದೇಶವಾದರೂ ಒಳ ಹೋದಂತೆ ಹಲವು ಸಮಸ್ಯೆಗಳು ಕಾಣ ಸಿಗುತ್ತವೆ. ಪ್ರಮುಖವಾಗಿ ರಸ್ತೆ ಅಭಿ ವೃದ್ಧಿಯಾಗದೇ ಇರುವುದು ಸಂಕಷ್ಟದ ಕೊಂಡಿಯಾಗಿದೆ. ಇದು ನೂಜಿಬಾಳ್ತಿಲ ಗ್ರಾಮದ ಚಿತ್ರಣ.
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯ ನೂಜಿಬಾಳ್ತಿಲ ಹಾಗೂ ರೆಂಜಿಲಾಡಿ ಗ್ರಾಮದ ಒಳ ರಸ್ತೆಗಳ ಅಭಿವೃದ್ಧಿ ಆಗಬೇಕೆಂಬ ಆಗ್ರಹ ಹೆಚ್ಚಿದೆ. ಕಡಬ ತಾಲೂಕು ಕೇಂದ್ರದಿಂದ 10 ಕಿ.ಮೀ. ದೂರದಲ್ಲಿರುವ ನೂಜಿಬಾಳ್ತಿಲ ಗ್ರಾಮ ಪ್ರಸ್ತುತ ಅಭಿವೃದ್ಧಿ ಹೊಂದುತ್ತಿದ್ದರೂ ಸ್ಥಳೀಯವಾಗಿ ಹಲವು ಸಮಸ್ಯೆಗಳ ದೂರುಗಳು ಕೇಳಿ ಬರುತ್ತಿವೆ. ಅದರಲ್ಲಿ ರಸ್ತೆ ಸಮಸ್ಯೆ ಪ್ರಮುಖವಾದುದು.
ಕಡಬ-ಕಲ್ಲುಗುಡ್ಡೆ ಸಂಪರ್ಕ ರಸ್ತೆಯ ಪೇರಡ್ಕ ಜಂಕ್ಷನ್ನಿಂದ ನೂಜಿಬಾಳ್ತಿಲದ ಕುಬಲಾಡಿ ಸಂಪರ್ಕಿಸುವ ರಸ್ತೆವರೆಗೆ ಅಭಿವೃದ್ಧಿ ಭಾಗ್ಯ ಇನ್ನೂ ಕೂಡಿ ಬಂದಿಲ್ಲ. ಈ ರಸ್ತೆ ಇಂದಿಗೂ ಮಣ್ಣಿನ ರಸ್ತೆಯಾಗಿಯೇ ಉಳಿದಿದೆ. ಮಳೆಗಾಲದಲ್ಲಿ ರಸ್ತೆಯ ಗುಂಡಿಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರು ಕಷ್ಟಪಡಬೇಕಾಗುತ್ತದೆ. ಕುಬಲಾಡಿ ಕಾಲನಿ ಸಂಪರ್ಕಿಸುವ ಈ ರಸ್ತೆ ಸುಮಾರು 1 ಕಿ.ಮೀ. ವರೆಗಿನ ಅಭಿವೃದ್ಧಿ ಆಗಬೇಕೆಂಬ ಬೇಡಿಕೆ ಸ್ಥಳೀಯರದ್ದು.
ನೂಜಿಬಾಳ್ತಿಲ ಗ್ರಾಮದ ಬದಿಬಾಗಿಲು-ಒರುಂಬಾಲು ಸಂಪರ್ಕ ರಸ್ತೆಯ ಕೆಲವೆಡೆ ಕಾಂಕ್ರಿಟ್ ಕಾಮಗಾರಿ ನಡೆದಿದ್ದರೂ ಪೂರ್ಣ ಪ್ರಮಾಣದ ರಸ್ತೆ ಅಭಿವೃದ್ಧಿ ಆಗಬೇಕಿದೆ. ಮಂಜೋಳಿಮಲೆ ಎಂಬ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಮಣ್ಣಿನ ರಸ್ತೆಯಾಗಿದ್ದು, ಜನತೆ ಕಷ್ಟಪಟ್ಟು ಸಂಚರಿಸುತ್ತಿದ್ದಾರೆ. ಇಲ್ಲಿನ ರಸ್ತೆ ಅಭಿವೃದ್ಧಿ ನಡೆಸುವಂತೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಪೂರ್ಣ ಪ್ರಮಾಣದಲ್ಲಿ ಇನ್ನೂ ಅಭಿವೃದ್ಧಿ ಹೊಂದಿಲ್ಲ. ಅಡೆಂಜ ಸಂಪರ್ಕ ರಸ್ತೆಯೂ ಅಭಿವೃದ್ಧಿಗೊಳ್ಳಬೇಕಿದೆ.
ಗೋಳಿಯಡ್ಕ-ಬಾಂತಾಜೆ-ಕಾನೋಳಿ ಮಣ್ಣಿನ ರಸ್ತೆಯಾಗಿದ್ದು, ಒಂದು ಕಡೆ ಮಾತ್ರ ಕಾಂಕ್ರೀಟ್ ಕಾಮಗಾರಿ ನಡೆದಿದೆ. ಉಳಿದಂತೆ ಸುಮಾರು 3 ಕಿ.ಮೀ. ರಸ್ತೆ ಅಭಿವೃದ್ಧಿ ಆಗಬೇಕಿದೆ. ಪೇರಡ್ಕ-ಪೆಲತ್ರಾಣೆ ಸಂಪರ್ಕ ರಸ್ತೆ, ಪೇರಡ್ಕ-ಓಟಿಮಾರ್-ಗೌಡಿಗೆ ಸಂಪರ್ಕ ರಸ್ತೆಯೂ ಅಭಿವೃದ್ಧಿ ಹೊಂದಿಲ್ಲ. ನಿತ್ಯ ನೂರಾರು ಜನ ಮಣ್ಣಿನ ರಸ್ತೆಯಲ್ಲೇ ಸಂಚರಿಸುತ್ತಿದ್ದಾರೆ.
ಸಾರ್ವಜನಿಕ ಸಾರಿಗೆ ಸಮಸ್ಯೆ :
ನೂಜಿಬಾಳ್ತಿಲದ ಕೇಂದ್ರ ಕಲ್ಲುಗುಡ್ಡೆಗೆ ಇನ್ನೂ ಸಮರ್ಪಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕೂಡಿ ಬಂದಿಲ್ಲ. ಕಡಬದಿಂದ ಕಲ್ಲುಗುಡ್ಡೆಗೆ ದಿನದ ಮೂರು ಹೊತ್ತು ಸರಕಾರಿ ಬಸ್ ಸಂಚರಿಸಬೇಕೆಂಬ ಇಲ್ಲಿನ ಜನತೆಯ ದಶಕಗಳ ಬೇಡಿಕೆ ಇನ್ನೂ ಈಡೇರಿಲ್ಲ. ಕಡಬ ತಾಲೂಕು ಕೇಂದ್ರಕ್ಕೆ ನಿತ್ಯ ನೂರಾರು ಜನರು ತೆರಳುವವರು ಖಾಸಗಿ ವಾಹನಗಳಲ್ಲೇ ಪ್ರಯಾಣಿಸುತ್ತಿದ್ದಾರೆ.
ಅರ್ಧದಲ್ಲೇ ಸಭಾಂಗಣ ಕಾಮಗಾರಿ :
6 ವರ್ಷಗಳ ಹಿಂದೆ ಗ್ರಾಮ ವಿಕಾಸ ಯೋಜನೆಗೆ ಆಯ್ಕೆಯಾದ ನೂಜಿಬಾಳ್ತಿಲ ಗ್ರಾಮಕ್ಕೆ 75 ಲಕ್ಷ ರೂ. ಅನು ದಾನ ಮಂಜೂರಾಗಿ ವಿವಿಧ ಅಭಿವೃದ್ಧಿ ಕೆಲಸ ನಡೆಸ ಲಾಗಿತ್ತು. ಅದರಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ಗ್ರಾ.ಪಂ. ಕಚೇರಿ ಮೇಲ್ಛಾವಣಿಯಲ್ಲಿ ಸಭಾಂಗಣ ಕಾಮಗಾರಿ ಆರಂಭಿಸಿ 6 ವರ್ಷಗಳಾಗುತ್ತಾ ಬಂದರೂ ಪೂರ್ಣಗೊಂಡಿಲ್ಲ. ರೆಂಜಿಲಾಡಿ ಗ್ರಾಮದಲ್ಲಿ ರಸ್ತೆ ಜತೆ ನೆಟ್ವರ್ಕ್ ಸಮಸ್ಯೆ ಇನ್ನೂ ಜೀವಂತವಾಗಿದೆ.
ಅಂಬೆಡ್ಕರ್ ಭವನದ ಬೇಡಿಕೆ :
ನೂಜಿಬಾಳ್ತಿಲದಲ್ಲಿ ಸಭೆ ಸಮಾರಂಭಗಳು ಶಾಲೆ ಕೊಠಡಿಯಲ್ಲಿ ನಡೆಯಬೇಕಿದೆ. ಕಲ್ಲುಗುಡ್ಡೆಯಲ್ಲಿ ಮೀಸಲಿಡಲಾಗಿದೆ ಎನ್ನಲಾಗಿರುವ ಜಮೀನಿನಲ್ಲಿ ಅಂಬೇಡ್ಕರ್ ಭವನ ನಿರ್ಮಿಸಿದ್ದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗಲಿದೆ. ಕಲ್ಲುಗುಡ್ಡೆಯಲ್ಲಿ ಅಂಬೇಡ್ಕರ್ ಭವನ ನಿರ್ಮಿಸುವಂತೆ ಈ ಹಿಂದೆಯೂ ಹಲವು ಬಾರಿ ಆಗ್ರಹಗಳು ಕೇಳಿಬಂದಿದ್ದವು.
ಇತರ ಸಮಸ್ಯೆ :
- ಅಸಮರ್ಪಕ ನೆಟ್ವರ್ಕ್
- ರಾಷ್ಟ್ರೀಕೃತ ಬ್ಯಾಂಕ್ ಇದ್ದರೂ ಎಟಿಎಂ ಸೌಲಭ್ಯವಿಲ್ಲ
- ಅಸಮರ್ಪಕ ಚರಂಡಿ
- ರೆಂಜಿಲಾಡಿ ಆರೋಗ್ಯ ಉಪಕೇಂದ್ರಕ್ಕೆ ಜಮೀನು ಇದ್ದರೂ ಕಟ್ಟಡವಿಲ್ಲ
- ಘನತ್ಯಾಜ್ಯ ಘಟಕ ಕೊರತೆ
- ಅಸಮರ್ಪಕ ಸಾರ್ವಜನಿಕ ಶೌಚಾಲಯ
- ರೆಂಜಿಲಾಡಿ ಗ್ರಾಮದ ನೂಜಿಶ್ರೀ ಉಳ್ಳಾಲ್ತಿ ದೈವಸ್ಥಾನದ ಬಳಿ ತೋಡಿಗೆ ಸೇತುವೆ ನಿರ್ಮಾಣವಾಗಬೇಕಿದೆ
-ದಯಾನಂದ ಕಲ್ನಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್
Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್
Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ
Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!
Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ