Belthangady ನೆರಿಯ: ಚಿರತೆ ದಾಳಿಗೆ ಕಡವೆ ಬಲಿ
Team Udayavani, Jan 17, 2024, 10:13 PM IST
ಬೆಳ್ತಂಗಡಿ: ನೆರಿಯದ ಬಯಲು ಮಲ್ಲ ಎಂಬಲ್ಲಿ ಚಿರತೆ ದಾಳಿ ನಡೆಸಿ ಕಡವೆಯನ್ನು ಬಲಿ ಪಡೆದಿರುವ ಘಟನೆ ನಡೆದಿದೆ. ಇಲ್ಲಿನ ಸರಕಾರಿ ಅರಣ್ಯ ಪ್ರದೇಶದ ಬದಿಯಲ್ಲಿ ಜ. 17ರಂದು ಸುಮಾರು 3 ವರ್ಷ ಪ್ರಾಯದ ಕಡವೆಯ ಕಳೇಬರ ಕಂಡು ಬಂದಿದ್ದು ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಕಡವೆಯ ಕುತ್ತಿಗೆ ಭಾಗದಲ್ಲಿ ಆಳವಾದ ಗಾಯವಾಗಿದ್ದು, ಚಿರತೆ ದಾಳಿಯಿಂದ ಉಂಟಾಗಿರುವ ಶಂಕೆ ವ್ಯಕ್ತವಾಗಿದೆ. ಸಮೀಪದ ತೋಟತ್ತಾಡಿ, ಚಿಬಿದ್ರೆ ಗ್ರಾಮಗಳಲ್ಲಿ ಕೂಡ ಆಗಾಗ ಚಿರತೆ ದಾಳಿ ನಡೆಯುತ್ತಿದ್ದು ಜಾನುವಾರು, ಸಾಕು ನಾಯಿಗಳು ಬಲಿಯಾಗುತ್ತಿವೆ.
ಅರಣ್ಯ ಇಲಾಖೆಯ ಡಿಆರ್ಎಫ್ಒಗಳಾದ ಅಧಿಕಾರಿ ಯತೀಂದ್ರ, ಭವಾನಿ ಶಂಕರ, ಪಾಂಡುರಂಗ ಕಮತಿ, ಸಿಬಂದಿ ಕಿಟ್ಟು ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಶು ಸಂಗೋಪನ ಇಲಾಖೆ ನೆರಿಯದ ವೈದ್ಯಾಧಿಕಾರಿ ಡಾ| ಯತೀಶ್ ಕುಮಾರ್ ಮರಣೋತ್ತರ ಪರೀಕ್ಷೆ ನಡೆಸಿದರು. ಕಕ್ಕಿಂಜೆಯ ಸ್ನೇಕ್ ಅನಿಲ್ ಸಹಕರಿಸಿದರು. ಬಳಿಕ ಕಡವೆಯ ಮೃತದೇಹವನ್ನು ದಹನ ಮಾಡಲಾಯಿತು.