ಮುಕ್ರುಂಪಾಡಿ: 2 ಲಕ್ಷ ರೂ. ಮೌಲ್ಯದ ಅಡಿಕೆ ಕಳವು
Team Udayavani, Aug 4, 2022, 7:19 PM IST
ಪುತ್ತೂರು: ಗೋದಾಮಿನಲ್ಲಿದ್ದ ಅಡಿಕೆ ಚೀಲಗಳಿಂದ ಸುಮಾರು 2 ಲಕ್ಷ ರೂ. ಮೌಲ್ಯದ ಅಡಿಕೆ ಕಳವಾಗಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಕ್ರಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ರಿದ್ದಿ ಸಿದ್ದಿ ಲಾಜಿಸ್ಟಿಕ್ ಸಂಸ್ಥೆ ಪುತ್ತೂರಿನ ವ್ಯಾಪಾರಿಗಳ ಅಡಿಕೆಯನ್ನು ಗುಜರಾತ್ಗೆ ಹಾಗೂ ಇತರ ಕಡೆಗಳಿಗೆ ಸಾಗಾಟ ಮಾಡುತ್ತಿದ್ದು, ಈ ಸಂಸ್ಥೆಯಲ್ಲಿ ಜು. 27 ಸಂಜೆಯಿಂದ ಮತ್ತು 28ರ ಬೆಳಗ್ಗಿನ ಅವಧಿಯಲ್ಲಿ ತಲಾ 65 ಕೆ.ಜಿ. ತೂಕದ 4 ಚೀಲ ಅಡಿಕೆ ಮತ್ತು ಜು. 30ರ ರಾತ್ರಿಯಿಂದ ಆ. 1ರ ಬೆಳಗಿನ ಅವಧಿಯಲ್ಲಿ ತಲಾ 65 ಕೆ.ಜಿ. ತೂಕದ 5 ಚೀಲ ಅಡಿಕೆ ಕಾಣೆಯಾಗಿದೆ.
ಈ ಕುರಿತು ಸಂಸ್ಥೆಯ ಮ್ಯಾನೇಜರ್ ಮಹೇಶ್ ಅವರು ಸಂಸ್ಥೆಯ ಮಾಲಕ ಧೀರನ್ ದಿಲೀಪ್ ಷಾ ಅವರಿಗೆ ತಿಳಿಸಿದ್ದಾರೆ. ಈ ಕುರಿತು ಧೀರನ್ ದಿಲೀಪ್ ಷಾ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಇಲ್ಲಿ ಕಳವಾದ ಗೋದಾಮಿನ ಕಟ್ಟಡಕ್ಕೆ ಹಾನಿ ಆಗಿಲ್ಲ. ಕಟ್ಟಡದ ಶಟರ್ ಬೀಗವೂ ಒಡೆದಿಲ್ಲ. ಆದರೂ ಕಳವಾಗಿರುವ ಹಿನ್ನೆಲೆಯಲ್ಲಿ ಅನುಮಾನಗಳು ವ್ಯಕ್ತವಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.