ಮಳೆಗಾಲದ ಮುನ್ನೆಚ್ಚರಿಕೆ ; ಚಾರ್ಮಾಡಿಗೆ ಡಿಸಿ ಭೇಟಿ; ತಂಡ ರಚನೆಗೆ ಸೂಚನೆ
Team Udayavani, Jun 10, 2020, 9:52 AM IST
ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮಂಗಳವಾರ ಪ್ರಕೃತಿ ವಿಕೋಪಕ್ಕೊಳಗಾದ ಚಾರ್ಮಾಡಿ ಪ್ರದೇಶಕ್ಕೆ ಭೇಟಿ ನೀಡಿದರು.
ಬೆಳ್ತಂಗಡಿ/ ಮುಂಡಾಜೆ: ಕಳೆದ ವರ್ಷ ಪ್ರಕೃತಿ ವಿಕೋಪಕ್ಕೆ ಈಡಾದ ಪ್ರದೇಶಗಳ ಸ್ಥಿತಿಗತಿ ವೀಕ್ಷಣೆ ಹಾಗೂ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮಂಗಳವಾರ ಚಾರ್ಮಾಡಿಗೆ ಭೇಟಿ ನೀಡಿ ಬಳಿಕ ಮಿನಿವಿಧಾನ ಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಮಳೆಗಾಲ ಸಮೀಪಿಸುತ್ತಿದ್ದು, ಕಳೆದ ವರ್ಷ ಪ್ರಕೃತಿ ವಿಕೋಪ ಉಂಟಾದ ಚಾರ್ಮಾಡಿ, ಮಿತ್ತಬಾಗಿಲು ಪ್ರದೇಶದ ಕೃಷಿ ಭೂಮಿಯಲ್ಲಿ ಮರಳು ತೆರವಿಗೆ ಅವಕಾಶ ನೀಡಲಾಗಿದೆ. ಈ ವರ್ಷ ಮುನ್ನೆಚ್ಚರಿಕೆಯಾಗಿ ಅಧಿಕಾರಿಗಳ ತಂಡ ರಚಿಸುವಂತೆ ತಹಶೀಲ್ದಾರ್ಗೆ ಜಿಲ್ಲಾಧಿಕಾರಿ ಸೂಚಿಸಿದರು.
ರಸ್ತೆ ದುರಸ್ತಿ
ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಫರ್ಲಾಣಿಯಲ್ಲಿ ಮೃತ್ಯುಂಜಯ ನದಿಯ ಮರಳುಗಾರಿಕೆಯಿಂದಾಗಿ ಚಾರ್ಮಾಡಿ – ಫರ್ಲಾಣಿ ರಸ್ತೆ ಹದಗೆಟ್ಟಿ ರುವ ಬಗ್ಗೆ ಊರವರು ಇದೇ ಸಂದರ್ಭ ಲಾರಿಗಳನ್ನು ತಡೆಹಿಡಿದು ಪ್ರತಿಭಟನೆಗಿಳಿದಿದ್ದರು. ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಪರಿಶೀಲಿಸಿ ಕೂಡಲೇ ರಸ್ತೆ ದುರಸ್ತಿಪಡಿಸಿ ಮರಳುಗಾರಿಕೆ ಮುಂದು ವರಿಸುವಂತೆ ಆದೇಶಿಸಿದರು. ಮರಳು ಸಾಗಾಟಗಾರರು ಕೂಡಲೇ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ. ಬಳಿಕ ಜಿಲ್ಲಾಧಿಕಾರಿಗಳು ಚಾರ್ಮಾಡಿ ಸರಕಾರಿ ಕ್ವಾರಂಟೈನ್ ಪ್ರದೇಶವನ್ನು, ಚಾರ್ಮಾಡಿಯಿಂದ ಮಲಯ ಮಾರುತವರೆಗೆ ಘಾಟಿ ರಸ್ತೆಗೆ ನಿರ್ಮಾಣವಾದ ತಡೆಗೋಡೆಯನ್ನು, ಫರ್ಲಾಣಿ ಹಾಗೂ ಕಳೆದ ವರ್ಷ ಮಳೆಗೆ ಕೊಚ್ಚಿಹೋಗಿದ್ದ ಅನಾರು ಸೇತುವೆ ಪ್ರದೇಶವನ್ನು, ಅನಾರು ಬಳಿ ನೂತನ ರಸ್ತೆ ಕಾಮಗಾರಿಯನ್ನು ವೀಕ್ಷಿಸಿದರು. ಡಿಸಿ ಭೇಟಿ ಸಂದರ್ಭ ಮತ್ತು ಸಭೆಯಲ್ಲಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಪಿಡಬ್ಲ್ಯೂಡಿ ಸಹಾಯಕ ಅಭಿಯಂತ ಶಿವಪ್ರಸಾದ್ ಅಜಿಲ, ಚಾರ್ಮಾಡಿ ಗ್ರಾ.ಪಂ. ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ತಾ.ಪಂ. ಇಒ ಕೆ.ಇ. ಜಯರಾಮ್, ಟಿಎಚ್ಒ ಡಾ| ಕಲಾಮಧು, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಮೊದಲಾದ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ವಾರಂಟೈನ್ ನಿಗಾ
ಕೋವಿಡ್ ಸೋಂಕು ಹೊರ ರಾಜ್ಯಗಳಿಂದ ಬರುವವರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಕ್ವಾರಂಟೈನ್ನಲ್ಲಿರುವ ವ್ಯಕ್ತಿಗಳು ಹೊರಗೆಲ್ಲೂ ಸುತ್ತಾಡದಂತೆ ಸಂಪೂರ್ಣ ನಿಗಾ ವಹಿಸಬೇಕು ಎಂದು ಡಿಸಿ ಸೂಚಿಸಿದರು.