ಇಂದು ದೇಯಿ ಬೈದ್ಯೆತಿ ದರ್ಶನ, ಮಾತೆ-ಮಕ್ಕಳ ಸಮಾಗಮ
ಗೆಜ್ಜೆಗಿರಿ ನಂದನಬಿತ್ತ್ಲ್ನಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಭ್ರಮ
Team Udayavani, Mar 1, 2020, 4:25 AM IST
ಪುತ್ತೂರು: ದೇಯಿ ಬೈದ್ಯೆತಿ, ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತ್ಲ್ನಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸದ ಬಳಿಕ ಮೂಲಸ್ಥಾನ ಗರಡಿ ನೇಮ ನಡೆಯುತ್ತಿದೆ. ಮಾ. 1ರಂದು ರವಿವಾರ ಬೆಳಗ್ಗೆ ಭಜನ ಮಹೋತ್ಸವ, ಸಂಜೆ ಮೂಲಸ್ಥಾನ ಗರಡಿಯಲ್ಲಿ ಕಲಶ ಹೋಮ, ರಾತ್ರಿ ಮೂಲಸ್ಥಾನ ಗರಡಿಯಲ್ಲಿ ಕೋಟಿ- ಚೆನ್ನಯರ ದರ್ಶನ, ಬೆರ್ಮೆರ್ ಗುಂಡದಲ್ಲಿ ಫಲ ಸಮರ್ಪಣೆ, ವೀರಪಥದಲ್ಲಿ ಕೋಟಿ-ಚೆನ್ನಯರ ಆಗಮನ, ಸತ್ಯಧರ್ಮ ಚಾವಡಿಯಲ್ಲಿ ಮಾತೆ ದೇಯಿ ಬೈದ್ಯೆತಿ ದರ್ಶನ, ಮಾತೆ-ಮಕ್ಕಳ ಪುನೀತ ಸಮಾಗಮ, ಕೋಟಿ ಚೆನ್ನಯರ ಮೂಲಸ್ಥಾನ ನೇಮ, ದರ್ಶನ ಸೇವೆ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮ
ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕೇರಳ ಶಿವಗಿರಿ ಮಠಾಧೀಶ ಶ್ರೀ ವಿಶುದ್ಧಾನಂದ ಸ್ವಾಮೀಜಿ, ಬಲೊಟ್ಟು ಗುರುಕೃಪಾ ಸೇವಾಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ದೇಯಿ ಬೈದ್ಯೆತಿ, ಕೋಟಿ-ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಗೌರವಾಧ್ಯಕ್ಷ ಜಯ ಸಿ. ಸುವರ್ಣ ಉದ್ಘಾಟನೆ ನೆರವೇರಿಸಲಿದ್ದಾರೆ. ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಷೇತ್ರದ ಆನುವಂಶಿಕ ಮೊಕ್ತೇಸರೆ ಮಾತೃಶ್ರೀ ಲೀಲಾವತಿ ಅಮ್ಮ ಉಪಸ್ಥಿತರಿರಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸೊರಬ ಶಾಸಕ ಕುಮಾರ್ ಬಂಗಾರಪ್ಪ, ಶಾಸಕರಾದ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಯು.ಟಿ. ಖಾದರ್, ಮಾಜಿ ಶಾಸಕ ಕೆ. ವಸಂತ ಬಂಗೇರ, ರಾಜ್ಯ ಯುವ ನಾಯಕ ಬಿ.ವೈ. ವಿಜಯೇಂದ್ರ, ಉದ್ಯಮಿ ಗಂಗಾಧರ ಪೂಜಾರಿ, ಪಂಚಭಾಷಾ ಚಲನಚಿತ್ರ ನಟ ಸುಮನ್ ತಲ್ವಾರ್, ನಟ ವಿಜಯ ರಾಘವೇಂದ್ರ ಭಾಗವಹಿಸಲಿದ್ದಾರೆ.
ಗೌರವಾರ್ಪಣೆ
ಪ್ರಶ್ನಾಚಿಂತನೆ ದೈವಜ್ಞ ಶಶಿಧರ್ ಮಾಂಗಾಡ್, ಮರದ ಕೆತ್ತನೆ ವಿನ್ಯಾಸಗಾರ ಉಮೇಶ್ ಪೂಜಾರಿ ಬಳ್ಪ ಅವರಿಗೆ ಗೌರವಾರ್ಪಣೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ
ಅಪರಾಹ್ನ ಬೆಂಗಳೂರಿನ ಸೃಷ್ಟಿ ಉಮೇಶ್ ತಂಡದವರಿಂದ ಗೆಜ್ಜೆಗಿರಿಯಲ್ಲಿ ಡಾ| ರಾಜ್ (ಡಾ| ರಾಜ್ಕುಮಾರ್ ಹಳೆಯ ನೆನಪು) ಕಾರ್ಯಕ್ರಮ ನಡೆಯಲಿದೆ.
ನೇಮ ಆರಂಭ
ಪುತ್ತೂರು: ದೇಯಿ ಬೈದ್ಯೆತಿ, ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲ್ನಲ್ಲಿ ಶನಿವಾರದಿಂದ ನೇಮ ಆರಂಭಗೊಂಡಿತು. ಬೆಳಗ್ಗೆ ಮಹಾಮಾತೆ ದೇಯಿ ಬೈದ್ಯೆತಿ ಮಹಾ ಸಮಾಧಿಯಲ್ಲಿ ಆರಾಧನ ಮಹೋತ್ಸವ, ಅನಂತರ ಧೂಮಾವತಿ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಕುಪ್ಪೆ ಪಂಜುರ್ಲಿ ಸಾನ್ನಿಧ್ಯದಲ್ಲಿ ಕಲಶ ಹೋಮ, ರಾತ್ರಿ ಕುಪ್ಪೆ ಪಂಜುರ್ಲಿ ನೇಮ, ಕಲ್ಲಾಲ್ದಾಯ ಕೋಲ, ರವಿವಾರ ಮುಂಜಾನೆ ಕೊರತಿ ದೈವದ ಕೋಲ ನಡೆಯಿತು.
ಕೇಂದ್ರ ಸಚಿವರ ಭೇಟಿ
ಸಾವಿರಾರು ಸಂಖ್ಯೆಯ ಭಕ್ತರು ಪಾಲ್ಗೊಂಡರು. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಶನಿವಾರ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಹಲವು ಮಂದಿ ಗಣ್ಯರು ಭೇಟಿ ನೀಡಿದರು. ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ, ಕ್ಷೇತ್ರದ ಆನುವಂಶಿಕ ಮೊಕ್ತೇಸರರಾದ ಲೀಲಾವತಿ ಅಮ್ಮ, ಪದ್ಮನಾಭ ಸುವರ್ಣ, ರವೀಂದ್ರ ಸುವರ್ಣ, ಮಹಾಬಲ ಪೂಜಾರಿ, ದೇಯಿ ಬೈದ್ಯೆತಿ, ಕೋಟಿ-ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಕಾರ್ಯದರ್ಶಿ ಸುಧಾಕರ ಸುವರ್ಣ ಹಾಗೂ ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪೀತಾಂಬರ ಹೇರಾಜೆ, ಕಾರ್ಯಾಧ್ಯಕ್ಷ ನಾರಾಯಣ ಪೂಜಾರಿ ಮಡ್ಯಂಗಳ, ನರೇಶ್ ಕುಮಾರ್ ಸಸಿಹಿತ್ಲು, ಪ್ರಧಾನ ಕಾರ್ಯದರ್ಶಿ ಯಶವಂತ ದೇರಾಜೆಗುತ್ತು, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಡಾ| ರಾಜಶೇಖರ ಕೋಟ್ಯಾನ್, ಪಾಲ್ಗೊಂಡರು.
ಸಾಂಸ್ಕೃತಿಕ ವೈವಿಧ್ಯ
ಅಪರಾಹ್ನ ಜಗದೀಶ್ ಆಚಾರ್ಯ ಪುತ್ತೂರು ಬಳಗದವರಿಂದ ಭಕ್ತಿ ರಸಮಂಜರಿ, ಮಂಗಳೂರು ಮಂತ್ರ ನಾಟ್ಯಕಲಾ ಗುರುಕುಲ ಪ್ರಸ್ತುತಪಡಿಸುವ ನಾಟ್ಯಮಂತ್ರಂ (ಶಾಸ್ತ್ರೀಯ ಮತ್ತು ಜನಪದ ನೃತ್ಯ ವೈಭವ), ರಾತ್ರಿ ಗೆಜ್ಜೆಗಿರಿತ ಬೊಲ್ಪು – ತುಳು ನೃತ್ಯ ರೂಪಕ ಪ್ರದರ್ಶನಗೊಂಡಿತು.
ಆಯುರ್ವೇದ ನೀರು ವಿತರಣೆ
ಕ್ಷೇತ್ರದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ದಿನ ಕಾವೂರಿನ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ವತಿಯಿಂದ ಸುಮಾರು 1 ಲಕ್ಷ ಮಂದಿಗೆ ಔಷಧ ಗುಣವನ್ನು ಹೊಂದಿರುವ ಆಯುರ್ವೇದ ನೀರನ್ನು ವಿತರಣೆ ಮಾಡಲಾಯಿತು.