ಧುಂಬೆಟ್ಟು: ಒಂಟಿ ಸಲಗದಿಂದ ಕೃಷಿ ಹಾನಿ
Team Udayavani, Apr 10, 2023, 7:42 AM IST
ಬೆಳ್ತಂಗಡಿ: ಮುಂಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಧುಂಬೆಟ್ಟು ಪರಿಸರದ ತೋಟಗಳಿಗೆ ಶನಿವಾರ ತಡರಾತ್ರಿ ಒಂಟಿ ಸಲಗ ವೊಂದು ಅಪಾರ ಕೃಷಿ ಹಾನಿ ಮಾಡಿದೆ.
ಸ್ಥಳೀಯರಾದ ಸುಧಾಕರ ಗೌಡ, ವಿಶ್ವನಾಥ ಗೌಡ, ರುಕ್ಮಯ್ಯ ಗೌಡ, ಜಯಪ್ರಕಾಶ್ ಭಟ್, ಶ್ರೀಕೃಷ್ಣ ಭಟ್ ಮೊದಲಾದವರ ತೋಟಗಳಲ್ಲಿ 50ಕ್ಕಿಂತ ಅಧಿಕ ಬಾಳೆ ಹಾಗೂ ಅಡಿಕೆ ಗಿಡಗಳನ್ನು ಧ್ವಂಸಗೈದಿದೆ. ನೀರಿನ ಪೈಪ್ಗ್ಳಿಗೆ ಹಾನಿ ಮಾಡಿದೆ. ಕೆಲವು ಮನೆಗಳ ಸಮೀಪದಲ್ಲೂ ಒಂಟಿ ಸಲಗ ಓಡಾಡಿದೆ.
ಚಾಮುಂಡಿ ನಗರ, ಕಜೆ ನಳಿಲು ಭಾಗ ದಿಂದ ಆಗಮಿಸಿದ ಒಂಟಿ ಸಲಗ ದುಂಬೆಟ್ಟು ಬಳಿಯಲ್ಲಿರುವ ಆನೆ ಕಂದಕದ ಮೂಲಕವೇ ಕೃಷಿ ಪ್ರದೇಶಕ್ಕೆ ನುಗ್ಗಿದೆ. ಸುಮಾರು ಮೂರು ತಿಂಗಳುಗಳಿಂದ ಆನೆ ಹಾವಳಿಯಿಲ್ಲದೆ ನಿರಾಳರಾಗಿದ್ದ ಸ್ಥಳೀಯರು ಮತ್ತೆ ಆತಂಕಕ್ಕೀಡಾಗಿದ್ದಾರೆ.