“ದಾಸ, ವ್ಯಾಸ ಕೂಟದ ತವರೂರು ಉಡುಪಿ’
Team Udayavani, Jun 1, 2019, 9:44 AM IST
ಉಡುಪಿ: ದಾಸ ಹಾಗೂ ವ್ಯಾಸ ಕೂಟದ ತವರೂರಾಗಿ ಉಡುಪಿ ಗುರುತಿಸಿಕೊಂಡಿದೆ ಎಂದು ವಿದ್ವಾಂಸ ಡಾ| ಕಬ್ಬಿನಾಲೆ ವಸಂತ ಭಾರದ್ವಾಜ ತಿಳಿಸಿದ್ದಾರೆ.
ಶ್ರೀ ಕೃಷ್ಣ ಮಠ ಸುವರ್ಣಗೋಪುರ ಶಿಖರ ಪ್ರತಿಷ್ಠಾ, ಬ್ರಹ್ಮಕಲಶಾಭಿಷೇಕ ಮಹೋತ್ಸವದ ಅಂಗವಾಗಿ ಶುಕ್ರ ವಾರ ರಾಜಾಂಗಣದಲ್ಲಿ ಹಮ್ಮಿಕೊಂಡ “ದಾಸ ಸಾಹಿತ್ಯ ಗೋಪುರಮ್’ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಾಮಾನ್ಯರಿಗೆ ಅಧ್ಯಾತ್ಮವನ್ನು ಸರಳವಾಗಿ ಅರ್ಥೈಸುವ ಕೆಲಸ ದಾಸ ಸಾಹಿತ್ಯದಿಂದ ನಡೆದಿದೆ. ಆದರೆ ಇತರ ಪ್ರಕಾರ ಗಳ ಸಾಹಿತ್ಯದಲ್ಲಿ ಈ ಆಯಾಮ ಇಷ್ಟು ಪ್ರಮಾಣದಲ್ಲಿ ಕಂಡು ಬರುವುದಿಲ್ಲ ಎಂದರು. ದಾಸ ಸಾಹಿತ್ಯ ಬದುಕಿಗೆ ಹೊಸ ಸಂಹಿತೆ ನೀಡಿದೆ. ಯುವಕರು ಮುಂದೆ ಬಂದು ಕೀರ್ತನೆ, ದಾಸ ಸಾಹಿತ್ಯಗಳ ಹಸ್ತ ಪ್ರತಿ ಸಂಗ್ರಹಿಸುವಲ್ಲಿ ಆಸಕ್ತಿ ವಹಿಸಬೇಕಾ ಗಿದೆ. ಸಾಹಿತ್ಯದ ಸಂಶೋಧನೆಗೆ ಮಠ, ಉದ್ಯಮಿಗಳು ಸಹಾಯ ಮಾಡಬೇಕು ಎಂದರು.
ಹಸ್ತಪ್ರತಿಗಳ ಸಂಗ್ರಹ ಅಗತ್ಯ
ದಾಸ ಸಾಹಿತ್ಯದಲ್ಲಿ ಅಧ್ಯಯನದ ಕೊರತೆ ಕಾಡುತ್ತಿದೆ. ಇಂದಿಗೂ ಕೆಲವೊಂದು ಮನೆಗಳಲ್ಲಿ ದಾಸ ಸಾಹಿತ್ಯ ಸಂಬಂಧಿಸಿದ ತಾಳೆ ಗರಿಗಳಿವೆ. ಅವುಗಳಿಗೆ ನಿರಂತರವಾಗಿ ಪೂಜೆ ಮಾಡುತ್ತಿದ್ದಾರೆ. ಆ ಹಸ್ತ ಪ್ರತಿಗಳನ್ನು ಸಂಗ್ರಹಿಸುವ ಕೆಲಸವಾಗಬೇಕು. ಮಠಗಳು ಮುಂದೆ ಬಂದು ದಾಸ ಸಾಹಿತ್ಯ ಉಳಿಸುವಲ್ಲಿ ಶ್ರಮಿಸಬೇಕಾಗಿದೆ ಎಂದು ಸಂಶೋಧಕ, ವಿದ್ವಾಂಸ ಪ್ರೊ| ಎ.ವಿ. ನಾವಡ ಮನವಿ ಮಾಡಿದರು.
ಭಕ್ತಿ ಹರಿವು ಕಡಿಮೆಯಾಗಿದೆ
ವಿದ್ವಾಂಸ ಡಾ| ಧನಂಜಯ ಕುಂಬ್ಳೆ ಮಾತನಾಡಿ, ಇಂದು ಭಜನೆಗಳು ಮೂಲೆ ಗುಂಪಾಗಿವೆ. ಮಧ್ಯಕಾಲೀನ ಕೀರ್ತನೆಗಳ ಪರಂಪರೆ ಸಂಪೂರ್ಣವಾಗಿ ಮರೆಯಾಗಿದೆ. ಇಂದು ಧಾರ್ಮಿಕ ಆಸಕ್ತಿ ಹೆಚ್ಚಾಗುತ್ತಿದೆ. ಯಾವುದೇ ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಉತ್ಸವದ ಹರಿವಿನ ಜತೆಗೆ ಭಕ್ತಿಯ ಹರಿವು ಅಗತ್ಯವಾಗಿಬೇಕಾಗಿದೆ. ಈ ನಿಟ್ಟಿನಲ್ಲಿ ಭಜನೆ ಕೀರ್ತನೆಗಳು ಸಹಾಯಕ ಎಂದು ನೀತಿ ಬೋಧನೆ ಬಗ್ಗೆ ಪ್ರಬಂಧ ಮಂಡಿಸಿದರು. ಶ್ರೀ ಕೃಷ್ಣ ಭಕ್ತಿಯ ಕುರಿತು ವಿದ್ವಾಂಸ ಡಾ| ಮುರಳೀಧರ ಎಚ್.ಎನ್. ಬೆಂಗಳೂರು, ಪುರಾಣ ಪ್ರಪಂಚದ ಕುರಿತು ಡಾ| ಎನ್.ಕೆ. ರಾಮಶೇಷನ್ ಮೈಸೂರು, ಅಧ್ಯಾತ್ಮದ ಕುರಿತು ಡಾ| ಮಾನಕರಿ ಶ್ರೀನಿವಾಸಾಚಾರ್ಯ ಪ್ರಬಂಧ ಮಂಡಿಸಿದರು.
ಶ್ರೀ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಮಾತನಾಡಿ, ದಾಸ ಸಾಹಿತ್ಯದ ಉಳಿವಿಗೆ ಅಗತ್ಯವಿರುವ ಸಹಾಯವನ್ನು ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ, ಶ್ರೀವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಕನಕರ ಹಾಡಿಗೆ ವೈಚಾರಿಕರ ಸಾಥ್!
ಆತ್ಮ ಇಲ್ಲ ಎನ್ನುವ ನೈರಾತ್ಮವಾದಿಗಳು, ವೈಚಾರಿಕರು ಕನಕದಾಸರ “ಕುಲಕುಲವೆಂದು ಹೊಡೆದಾಡದಿರಿ ಕುಲದ ನೆಲೆಯನೇನಾದರೂ ಬಲ್ಲಿರಾ’ ಎಂಬ ಹಾಡು ಒಪ್ಪಿಕೊಳ್ಳು ವುದು ಹಾಸ್ಯಾಸ್ಪದ. ಈ ಹಾಡಿನಲ್ಲಿ ಕನಕದಾಸರು ಆತ್ಮ ಯಾವ ಕುಲ? ಜೀವ ಯಾವ ಕುಲವೆಂಬುವುದನ್ನು ಹೇಳಿದ್ದಾರೆ. ವಿಜಯನಗರದ ವೈಭವ ಉತ್ತುಂಗ ಕಾಲದಲ್ಲಿ ಪುರಂದರದಾಸರು “ಉತ್ತಮ ಪ್ರಜಾಪ್ರಭುತ್ವ ಲೊಳಲೊಟ್ಟೆ’ ಎಂಬುದಾಗಿ ಹಾಡಿರುವುದು ವೈರಾಗ್ಯದ ಸಂಕೇತವಾಗಿದೆ ಎಂದು ಡಾ| ವಸಂತ ಭಾರದ್ವಾಜ್ ಹೇಳಿದರು.