ಗ್ರಾ.ಪಂ. ಸಿಬಂದಿ ಕೊರತೆ: ಸಾಮಾನ್ಯರಿಗೆ ಸೇವೆ ಅಲಭ್ಯ
ಖಾಲಿ ಇವೆ 217 ಹುದ್ದೆಗಳು; 75 ಹುದ್ದೆಗಳ ಭರ್ತಿಗಾದರೂ ಅವಕಾಶ ನೀಡುವಂತೆ ಪ್ರಸ್ತಾವನೆ
Team Udayavani, Jan 5, 2022, 6:39 PM IST
ಉಡುಪಿ: ಆಡಳಿತ ವಿಕೇಂದ್ರೀಕರಣ ಕೊನೆಯ ಕೊಂಡಿ, ಜನ ಸಾಮಾನ್ಯರಿಗೆ ಸರಕಾರದ ಸೇವೆಯನ್ನು ಸುಲಭವಾಗಿ ಮುಟ್ಟಿಸುವ ಗ್ರಾಮ ಪಂಚಾಯತ್ಗಳಲ್ಲಿ ಸಿಬಂದಿ ಕೊರತೆಯಿಂದ ಸಮರ್ಪಕ ಆಡಳಿತಕ್ಕೆ ಹಿನ್ನಡೆಯಾಗುತ್ತಿದೆ.
ಕುಂದಾಪುರ ತಾಲೂಕಿನಲ್ಲಿ 45, ಬ್ರಹ್ಮಾವರ ತಾಲೂಕಿನಲ್ಲಿ 27, ಕಾಪು ತಾಲೂಕಿನಲ್ಲಿ 16, ಬೈಂದೂರು ತಾಲೂಕಿನಲ್ಲಿ 15, ಕಾರ್ಕಳ ತಾಲೂಕಿನಲ್ಲಿ 27, ಉಡುಪಿ ತಾಲೂಕಿನಲ್ಲಿ 16 ಹಾಗೂ ಹೆಬ್ರಿ ತಾಲೂಕಿನ 9 ಗ್ರಾ. ಪಂ. ಸೇರಿ ಜಿಲ್ಲೆಯಲ್ಲಿ 155 ಗ್ರಾ.ಪಂ.ಗಳಿವೆ. ಬಿಲ್ ಕಲೆಕ್ಟರ್, ಕ್ಲರ್ಕ್ ಅಥವಾ ಡಾಟಾ ಎಂಟ್ರಿ ಆಪರೇಟರ್, ಪಂಪು ಚಾಲಕ, ಜವಾನ ಹಾಗೂ ಸ್ವಚ್ಛತಾಗಾರರಲ್ಲಿ 217 ಹುದ್ದೆ ಖಾಲಿಯಿದೆ.
ವಿವಿಧ ಹುದ್ದೆ ಖಾಲಿ ಇರುವುದರಿಂದ ಜನ ಸಾಮಾನ್ಯರಿಗೆ ಗ್ರಾ.ಪಂ. ಮೂಲಕ ನಿತ್ಯದ ಸೇವೆಯನ್ನು ಸಮರ್ಪಕವಾಗಿ ನೀಡಲು ಸಾಧ್ಯವಾಗುತ್ತಿಲ್ಲ. ಈ ಎಲ್ಲ ಹುದ್ದೆಗಳು ಗ್ರಾಮದ ಜನರಿಗೆ ಅಗತ್ಯ ಸೇವೆ ಒದಗಿಸಲು ಅವಶ್ಯಕವಾಗಿದೆ. ಸದ್ಯ ಖಾಲಿ ಇರುವ 217 ಹುದ್ದೆಗಳಲ್ಲಿ ಕನಿಷ್ಠ 75 ಹುದ್ದೆಗಳ ಭರ್ತಿಗಾದರೂ ಅವಕಾಶ ನೀಡುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಆದರೆ, ರಾಜ್ಯದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಯೋಜನೆಗಳ ಅನುಷ್ಠಾನ ಸಾಧ್ಯವಾಗುತ್ತಿಲ್ಲ
ಗ್ರಾ.ಪಂ. ಮೂಲಕ ರಾಜ್ಯ ಸರಕಾದ ವಿವಿಧ ಯೋಜನೆಗಳನ್ನು ಮನೆ ಮನೆಗೆ ತಲುಪಿಸಲು ಸರಕಾರ ಯೋಜನೆಯನ್ನು ಈಗಾಗಲೇ ರೂಪಿಸಿದೆ. ಆದರೆ, ಸಿಬಂದಿ ಕೊರತೆ ಹಾಗೂ ಆರ್ಥಿಕ ಕಾರಣಕ್ಕೆ ಅದರ ಅನುಷ್ಠಾನ ಸಾಧ್ಯವಾಗುತ್ತಿಲ್ಲ. ಈಗ ಇರುವ ಸಿಬಂದಿಯಿಂದಲೇ ಹೆಚ್ಚು ಕಾರ್ಯ ಮಾಡಿಸಿಕೊಳ್ಳುವುದು ಕಷ್ಟಸಾಧ್ಯ. ಕಾರಣ, ಅನೇಕ ಸಿಬಂದಿ ಎರಡು ಅಥವಾ ಮೂರು ಪಂಚಾ ಯ ತ್ಗಳ ಸೇವೆ ಮಾಡುತ್ತಿದ್ದಾರೆ. ಪಂಪು ಚಾಲಕ, ಬಿಲ್ ಕಲೆಕ್ಟರ್, ಕ್ಲರ್ಕ್ ಮೊದಲಾದ ಹುದ್ದೆ ಆಯಾ ಗ್ರಾ.ಪಂ.ಗಳಲ್ಲಿ ಪ್ರತೀ ಹುದ್ದೆಗೆ ಪ್ರತ್ಯೇಕ ನೇಮಕಾತಿ ಮಾಡಬೇಕು. ಇಲ್ಲವಾದರೆ ಜನ ಸಾಮಾನ್ಯರಿಗೆ ನಿರ್ದಿಷ್ಟ ಕಾಲಮಿತಿಯಲ್ಲಿ ಸೇವೆ ನೀಡುವುದು ಕಷ್ಟವಾಗುತ್ತದೆ ಎಂದು ಸಿಬಂದಿ ವರ್ಗ ಆರೋಪಿಸಿದೆ.
ಮಾದರಿ ಪ್ರಸ್ತಾವನೆ
ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತ್ಗಳಲ್ಲಿ ಇರುವ ಸಿಬಂದಿ ಕೊರತೆ ನಿವಾರಣೆ ದೃಷ್ಟಿಯಿಂದ ಹೊಸ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಲಾಗಿದೆ. ಸಂಜೀವಿನಿ ಸಂಘಗಳು (ಸ್ವಸಹಾಯ ಸಂಘ) ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲೂ ಇವೆ. ಜತೆಗೆ ಒಕ್ಕೂಟ ವ್ಯವಸ್ಥೆಯಲ್ಲಿ ಇವುಗಳ ಸೇವೆಯೂ ಪರಿಗಣಿಸಬಹುದಾಗಿರುತ್ತದೆ. ಈ ನಿಟ್ಟಿನಲ್ಲಿ ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸಂಜೀವಿನಿ ಸಂಘಗಳ ಸದಸ್ಯರ ಸೇವೆಯನ್ನು ಬಳಸಿಕೊಳ್ಳಲು ಅನುಮತಿ ಕೋರಿ ರಾಜ್ಯಕ್ಕೆ ಮುಂದಿನ ವಾರದಲ್ಲಿ ಪ್ರಸ್ತಾವನೆ ಸಲ್ಲಿಸಲಿದ್ದೇವೆ. ಇದೊಂದು ಮಾದರಿ ವ್ಯವಸ್ಥೆಯಾಗಿದ್ದು, ಸರಕಾರ ಅನುಮತಿ ನೀಡಿದಲ್ಲಿ, ಉತ್ತಮ ರೀತಿಯಲ್ಲಿ ಅನುಷ್ಠಾನ ಮಾಡಲಿದ್ದೇವೆ ಎಂದು ಜಿ.ಪಂ. ಸಿಇಒ ಡಾ| ವೈ.ನವೀನ್ ಭಟ್ “ಉದಯವಾಣಿ’ಗೆ ಮಾಹಿತಿ ನೀಡಿದರು.
ಸಿಬಂದಿ ನೇಮಕಾತಿಗೆ ಅವಕಾಶವೇ ಇಲ್ಲ
ಉಡುಪಿ ಹೊರತುಪಡಿಸಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗ್ರಾ.ಪಂ. ಸಿಬಂದಿಗೆ ವೇತನ ಸರಿಯಾಗಿ ನೀಡಲಾಗುತ್ತಿಲ್ಲ. ಹಲವು ತಿಂಗಳ ವೇತನ ಪಾವತಿಗೆ ಬಾಕಿಯಿದೆ. ಹೀಗಾಗಿ 2017-18ರಿಂದ ಈಚೇಗೆ ಹೊಸ ನೇಮಕಾತಿಗೆ ಸರಕಾರ ಅನುಮತಿ ನೀಡುತ್ತಿಲ್ಲ. ಕೋವಿಡ್ ಅನಂತರವಂತೂ ಹೊಸ ನೇಮಕಾತಿಗೆ ಅವಕಾಶವೇ ಇಲ್ಲದಾಗಿದೆ. ನಿವೃತ್ತಿ, ರಾಜೀನಾಮೆ ಸಹಿತವಾಗಿ ವಿವಿಧ ಕಾರಣಕ್ಕೆ ತೆರವಾಗುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಜಿ.ಪಂ. ಸಿಇಒ ಅನುಮತಿ ಪಡೆಯಬೇಕು. ರಾಜ್ಯಮಟ್ಟದಲ್ಲಿ ನಿಯಮ ಸಡಿಲಿಕೆಯಾಗದೆ ಸಿಇಒ ಅನುಮತಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಉಡುಪಿ ಜಿಲ್ಲೆಯೊಂದನ್ನೇ ಪ್ರತ್ಯೇಕವಾಗಿ ಪರಿಗಣಿಸಿ (ಸಿಬಂದಿ ವೇತನ ಸಮಸ್ಯೆ ಇಲ್ಲದಿರುವುದರಿಂದ) ಹೊಸ ಸಿಬಂದಿ ನೇಮಕಕ್ಕೆ ಅವಕಾಶ ನೀಡಬೇಕು ಎಂಬ ಪ್ರಸ್ತಾವನೆಯನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಇಲಾಖೆಗೆ ಜಿಲ್ಲೆಯಿಂದ ಸಲ್ಲಿಸಲಾಗಿದೆ ಎಂದು ಜಿಲ್ಲೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಸರಕಾರಕ್ಕೆ ಪ್ರಸ್ತಾವನೆ
ಜಿಲ್ಲೆಯ ಗ್ರಾ.ಪಂ.ಗಳಲ್ಲಿ ಸಿಬಂದಿ ಕೊರತೆ ಇರುವುದು ನಿಜ. ಈಗ ಸರಕಾರ ಗ್ರಾಮ-1 ಮೂಲಕ ವಿವಿಧ ಸೇವೆಯನ್ನು ಗ್ರಾ.ಪಂ. ಮೂಲಕ ಜನ ಸಾಮಾನ್ಯರಿಗೆ ನೀಡಲು ಮುಂದಾಗಿದೆ. ಸಿಬಂದಿ ನೇಮಕಾತಿ ಆಗದೆ ಕಾರ್ಯಕ್ರಮ ಅನುಷ್ಠಾನ ಕಷ್ಟವಾಗಲಿದೆ. ಬಹುತೇಕ ಗ್ರಾ.ಪಂ.ಗಳಲ್ಲಿ ಸಿಬಂದಿ ನಿಯೋಜನೆ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರಕಾರಕ್ಕೂ ಪ್ರಸ್ತಾವನೆ ಸಲ್ಲಿಸಿದ್ದೇವೆ.
-ಡಾ| ವೈ.ನವೀನ್ ಭಟ್,
ಜಿ.ಪಂ. ಸಿಇಒ
– ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ