ಕೋವಿಡ್ ಪೀಡಿತ ಕ್ಯಾನ್ಸರ್ ರೋಗಿಗೆ ಚಿಕಿತ್ಸೆ ಹಾಗೂ KMC ಆಸ್ಪತ್ರೆ ಕುರಿತಾಗಿ ಡಿಸಿ ಹೇಳಿಕೆ
Team Udayavani, May 19, 2020, 5:42 PM IST
ಉಡುಪಿ: ಜಿಲ್ಲೆಯಲ್ಲಿ ಇಂದು ಪತ್ತೆಯಾಗಿರುವ ಒಟ್ಟು 5 ಕೋವಿಡ್ ಪ್ರಕರಣಗಳಲ್ಲಿ 4 ಪ್ರಕರಣಗಳು ಮುಂಬಯಿಯಿಂದ ಜಿಲ್ಲೆಗೆ ಆಗಮಿಸಿದವರಲ್ಲಿ ಕಂಡುಬಂದಿದೆ.
ಈ ನಾಲ್ವರು ಈಗಾಗಲೇ ಕ್ವಾರೆಂಟೈನ್ ನಲ್ಲಿದ್ದುದರಿಂದ ಅವರ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದ ತಕ್ಷಣ ಅವರನ್ನು ಉಡುಪಿಯ ಕೋವಿಡ್ ಆಸ್ಪತ್ರೆಯ ಐಸೊಲೇಷನ್ ವಾರ್ಡ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇವರಲ್ಲಿ 53 ವರ್ಷದ ಪುರುಷ, 8 ವರ್ಷದ ಬಾಲಕ, 29 ವರ್ಷದ ಮಹಿಳೆ ಹಾಗೂ 24 ವರ್ಷದ ಯುವಕ ಸೇರಿದಂತೆ ಒಟ್ಟು ನಾಲ್ಕು ಜನರಲ್ಲಿ ಇಂದು ಕೋವಿಡ್ ಸೋಂಕು ಪತ್ತೆಯಾಗಿದೆ.
ಹಾಗೂ ಇನ್ನೊಂದು ಪ್ರಕರಣ ಚಿತ್ರದುರ್ಗದಿಂದ ಮಣಿಪಾಲ ಆಸ್ಪತ್ರೆಗೆ ಕ್ಯಾನ್ಸರ್ ಚಿಕಿತ್ಸೆಗೆಂದು ಬಂದಿರುವ 17 ವರ್ಷದ ಬಾಲಕಿಗೆ ಕೋವಿಡ್ ಸೋಂಕು ಇರುವುದು ಪತ್ತೆಯಾಗಿದೆ.
ಇದೀಗ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಕಿಯ ಕೋವಿಡ್ ಸೋಂಕಿಗೆ ಚಿಕಿತ್ಸೆ ನೀಡುವುದ ಸವಾಲಿನ ಕೆಲಸವಾಗಿದ್ದು ಈ ಸಂಬಂಧ ತಜ್ಞ ವೈದ್ಯರ ತಂಡದ ಜೊತೆ ಸಮಾಲೋಚನೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮತ್ತು ಈ ಬಾಲಕಿಗೆ ಕೋವಿಡ್ ಸಂಬಂಧಿ ಯಾವುದೇ ಲಕ್ಷಣಗಳಿರಲಿಲ್ಲ ಬದಲಿಗೆ ಕ್ಯಾನ್ಸರ್ ಚಿಕಿತ್ಸೆಗಾಗಿಯೇ ಮಣಿಪಾಲದ ಆಸ್ಪತ್ರೆಗೆ ಬಂದಿದ್ದರು. ಆಕೆಯ ಸಂಪರ್ಕ ಮಾಹಿತಿ ವಿವರಗಳನ್ನು ಚಿತ್ರದುರ್ಗ ಜಿಲ್ಲಾಧಿಕಾರಿಗಳ ಮೂಲಕ ಪಡೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿಯನ್ನೂ ಜಗದೀಶ್ ಅವರು ಇದೇ ಸಂದರ್ಭದಲ್ಲಿ ನೀಡಿದರು.
ಹಾಗೂ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಈಗಾಗಲೇ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಗಳು ಸುರಕ್ಷತಾ ಕ್ರಮಗಳನ್ನು ಅನುಸರಿಯೇ ರೋಗಿಗಳನ್ನು ಅಟೆಂಡ್ ಮಾಡುತ್ತಿರುವುದರಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡುವ ಅಥವಾ ಬಾಲಕಿಯನ್ನು ಅಟೆಂಡ್ ಮಾಡಿದ ವೈದ್ಯರನ್ನು ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನು ಕ್ವಾರೆಂಟೈನ್ ಗೊಳಪಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಣಿಪಾಲದ ಕೆ.ಎಂ.ಸಿ.ಯಲ್ಲಿ ಕೋವಿಡ್ ಸೋಂಕು ಪತ್ತೆ ಪ್ರಯೋಗಾಲಯ ಪ್ರಾರಂಭಗೊಂಡು ಪರೀಕ್ಷೆ ಪ್ರಾರಂಭಿಸಿದೆ. ಬಹಳಷ್ಟು ಜನರು ಹೊರ ರಾಜ್ಯಗಳಿಂದ ಜಿಲ್ಲೆಗೆ ಬಂದಿರುವುದರಿಂದ ಅವರೆಲ್ಲರ ಗಂಟಲ ದ್ರವದ ಮಾದರಿಯನ್ನು ಪರೀಕ್ಷಿಸುವುದು ಅನಿವಾರ್ಯವಾಗಿರುವುದರಿಂದ ಮೂರು ಶಿಫ್ಟ್ ಗಳಲ್ಲಿ ಮಾದರಿ ಪರೀಕ್ಷೆಗಳನ್ನು ನಡೆಸುವಂತೆ ಈಗಾಗಲೇ ಆಸ್ಪತ್ರೆಯವರನ್ನು ಕೇಳಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಇದೇ ಸಂದರ್ಭದಲ್ಲಿ ಹೇಳಿದರು.
ಇನ್ನು ಉಡುಪಿ ಜಿಲ್ಲಾಸ್ಪತ್ರೆಯಲ್ಲೂ ಕೋವಿಡ್ ಸೋಂಕು ಪತ್ತೆ ಪ್ರಯೋಗಾಲಯ ಪ್ರಾರಂಭಿಸುವ ನಿಟ್ಟಿನಲ್ಲಿ ಪ್ರಾಥಮಿಕ ಹಂತದ ಕಾರ್ಯಗಳು ಪ್ರಗತಿಯಲ್ಲಿದೆ ಹಾಗೂ ಇನ್ನು 15-20 ದಿನಗಳ ಒಳಗಾಗಿ 1.5 ಕೋಟಿ ರೂಪಾಯಿ ವೆಚ್ಚದ ಸುಸಜ್ಜಿತ ಕೋವಿಡ್ ಲ್ಯಾಬ್ ಜಿಲ್ಲಾಸ್ಪತ್ರೆಯಲ್ಲಿ ಸಿದ್ಧಗೊಳ್ಳಲಿದೆ ಎಂಬ ಮಾಹಿತಿಯನ್ನೂ ಸಹ ಜಿಲ್ಲಾಧಿಕಾರಿಯವರು ಇದೇ ಸಂದರ್ಭದಲ್ಲಿ ನೀಡಿದರು.