ಸೇತುವೆ ಕುಸಿದು 3 ತಿಂಗಳು ಕಳೆದರೂ ಸ್ಪಂದನೆಯಿಲ್ಲ
ಕಕ್ಕುಂಜೆ - ವಂಡಾರು ಸಂಪರ್ಕ ರಸ್ತೆ ; ಕುಸಿದ ಸೇತುವೆಯಲ್ಲೇ ನಿತ್ಯ ವಾಹನ ಸಂಚಾರ
Team Udayavani, Dec 20, 2021, 5:55 PM IST
ವಿಶೇಷ ವರದಿ-ಕುಂದಾಪುರ: ಗಾವಳಿ ಹಾಗೂ ಕಕ್ಕುಂಜೆ ಕಡೆಯಿಂದ ವಂಡಾರು ಕಡೆಗೆ ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯತ್ ರಸ್ತೆಯ ಹರ್ಕಾಡಿ ಮಕ್ಕಿಮನೆ ಬಳಿಯ ಸೇತುವೆ ಕುಸಿದು 3 ತಿಂಗಳು ಕಳೆದಿದೆ. ಆದರೂ ಇನ್ನು ಯಾರೂ ಕೂಡ ಇದರ ದುರಸ್ತಿ ಸಂಬಂಧ ಯಾವುದೇ ಕೈಗೊಳ್ಳಲು ಮುಂದಾಗಿಲ್ಲ. ಕುಸಿದ ಸೇತುವೆಯಲ್ಲೇ ಈಗಲೂ ಘನ ವಾಹನಗಳ ಸಹಿತ ನಿತ್ಯ ವಾಹನ ಸಂಚಾರ ಮಾತ್ರ ಸಾಗುತ್ತಿದೆ.
ಕ್ಕುಂಜೆ – ವಂಡಾರು ರಸ್ತೆಯ, ಗಾವಳಿ ಗ್ರಾಸ್ ಬಳಿಯಿಂದ ಸುಮಾರು 2 ಕಿ.ಮೀ. ದೂರದ ಹರ್ಕಾಡಿ ಮಕ್ಕಿಮನೆ ಸಮೀಪವಿರುವ ಈ ಸೇತುವೆಯು ಭಾರೀ ಮಳೆಗೆ ಎರಡೆರಡು ಕಡೆಗಳಲ್ಲಿ ಕುಸಿದಿದೆ. ಎರಡೂ ಬದಿಯಲ್ಲೂ ದೊಡ್ಡ – ದೊಡ್ಡ ಕಂದಕ ಸೃಷ್ಟಿಯಾಗಿದ್ದು, ಘನ ವಾಹನಗಳು ಸಂಚರಿಸುವುದು ಅಪಾಯ ಕಾರಿಯಾಗಿದೆ. ಸ್ಥಳೀಯರೆಲ್ಲ ಸೇರಿ ಅನಾಹುತ ಸಂಭವಿಸದಂತೆ ಕುಸಿದ ಎರಡು ಕಡೆಗಳ ಹೊಂಡಕ್ಕೆ ಅಡ್ಡಲಾಗಿ ಮರದ ತುಂಡು ಹಾಗೂ ಗೋಣಿ ಚೀಲ ಇಟ್ಟು, ಎಚ್ಚರಿಕೆಯಿಂದ ಸಂಚರಿಸಲು ಕ್ರಮಕೈಗೊಳ್ಳಲಾಗಿದೆ.
ಪ್ರಮುಖ ರಸ್ತೆ
ಈ ಸೇತುವೆಯು ಉಡುಪಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದ್ದು, ಕುಂದಾಪುರ ವಿಧಾನಸಭೆ ಕ್ಷೇತ್ರದ ಸಾವಿರಾರು ಮಂದಿ ಇದೇ ಮಾರ್ಗವನ್ನು ಆಶ್ರಯಿಸಿದ್ದಾರೆ. ಕಕ್ಕುಂಜೆ ಭಾಗದವರು ವಂಡಾರು ಕಡೆಗೆ ಸಂಚರಿಸಲು, ವಂಡಾರು ಭಾಗದವರು ಗಾವಳಿ, ಶಿರಿಯಾರ, ಸ್ಯಾಬ್ರಕಟ್ಟೆ ಕಡೆಗೆ ತೆರಳಲು ಈ ರಸ್ತೆಯನ್ನೇ ನೆಚ್ಚಿಕೊಂಡಿದ್ದಾರೆ.
ನೂರಾರು ವಾಹನ ಸಂಚಾರ
ಈ ಮಾರ್ಗವಾಗಿ ನಿತ್ಯ 200ಕ್ಕೂ ಅಧಿಕ ವಾಹನಗಳು ಸಂಚರಿಸುತ್ತಿದ್ದು, ಅದರಲ್ಲೂ ಪ್ರತೀ ದಿನ ಒಂದು ಬಸ್ ಸಹ ಈ ಮಾರ್ಗದಲ್ಲೇ ಸಂಚರಿಸುತ್ತಿದೆ. ಇದಲ್ಲದೆ ಕೆಂಪು ಕಲ್ಲು, ಶಿಲೆಕಲ್ಲು, ಡಾಮರು ತುಂಬಿದ ಘನ ವಾಹನಗಳು ಸಹ ಈ ಕುಸಿದ ಸೇತುವೆಯಲ್ಲೇ ಸಂಚರಿಸುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಆವಶ್ಯಕತೆಯಿದೆ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
40 ವರ್ಷ
ಹಿಂದಿನ ಸೇತುವೆ
ಕಕ್ಕುಂಜೆ- ವಂಡಾರು ರಸ್ತೆ ಹಾದುಹೋಗುವ ಹರ್ಕಾಡಿ ಮಕ್ಕಿಮನೆ ಬಳಿಯ ಈ ಸೇತುವೆ ನಿರ್ಮಾಣಗೊಂಡು ಸರಿ ಸುಮಾರು 40 ವರ್ಷಗಳೇ ಕಳೆದಿವೆ. ಈಗ ಮಳೆಗೆ ಎರಡೆರಡು ಕಡೆಗಳಲ್ಲಿ ಕುಸಿದಿದ್ದು, ಮುಂಬರುವ ಮಳೆಗಾಲಕ್ಕೂ ಮುನ್ನ ಅಭಿವೃದ್ಧಿಪಡಿಸದಿದ್ದರೆ, ಇನ್ನಷ್ಟು ಕುಸಿದು ಬೀಳುವ ಸಾಧ್ಯತೆ ಇಲ್ಲದಿಲ್ಲ.
ಆಕ್ರೋಶ
ಈ ಸೇತುವೆ ಕುಸಿದು 3 ತಿಂಗಳುಗಳೇ ಕಳೆದಿವೆ. ಆದರೂ ಈವರೆಗೆ ಇಲ್ಲಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ದುರಸ್ತಿಗೆ ಅಗತ್ಯ ಕ್ರಮಕೈಗೊಳ್ಳಲು ಯಾರೂ ಸಹ ಮುಂದಾಗಿಲ್ಲ. ಇದರ ದುರಸ್ತಿಗೆ ಇನ್ನೆಷ್ಟು ತಿಂಗಳು ಕಾಯಬೇಕು. ಸಂಪೂರ್ಣ ಕುಸಿದು ಬೀಳುವವರೆಗೆ ಇಲ್ಲಿಗೆ ಬಂದು ನೋಡುವ ಅಥವಾ ದುರಸ್ತಿಗೆ ಮುಂದಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದುರಸ್ತಿಗೆ ಪ್ರಯತ್ನ
ಸದ್ಯಕ್ಕೆ ಯಾವುದೇ ಅನುದಾನವಿಲ್ಲ. ಆದರೆ ಮುಂದಿನ ದಿನಗಳಲ್ಲಿ ಅನುದಾನ ಬಂದಾಗ ಈ ಸೇತುವೆ ಅಭಿವೃದ್ಧಿಗೆ ವಿನಿಯೋಗಿ ಸಲಾಗುವುದು. ಶಾಸಕರ ಗಮನಕ್ಕೂ ತರಲಾಗುವುದು. ಇನ್ನು ತಾತ್ಕಾಲಿಕ ದುರಸ್ತಿ ಬಗ್ಗೆ ಭೇಟಿ ನೀಡಿ, ಪರಿಶೀಲಿಸಲಾಗುವುದು.
– ನಾಗಶಯನ, ಎಂಜಿನಿಯರ್
ಜಿ.ಪಂ. ಉಡುಪಿ