ಲಂಚ ಸ್ವೀಕಾರ; ಬೀಜಾಡಿ ಗ್ರಾಮಕರಣಿಕ ಆರೋಪ ಮುಕ್ತ
Team Udayavani, Oct 5, 2018, 11:09 AM IST
ಕುಂದಾಪುರ:ಖಾತೆ ಬದಲಾವಣೆಗಾಗಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಬೀಜಾಡಿ ಗ್ರಾಮದ ಗ್ರಾಮಕರಣಿಕ ಅಬ್ದುಲ್ ರೆಹಮಾನ್ ಬ್ಯಾರಿಯನ್ನು ಕುಂದಾಪುರದ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಬೀಜಾಡಿ ಗ್ರಾಮಕರಣಿಕರಾಗಿ ಕಾರ್ಯನಿರ್ವಹಿಸುತ್ತಿದ್ದ ರೆಹಮಾನ್ ಅವರು ಲಂಚ ಸ್ವೀಕರಿಸಿರುವುದಾಗಿ ಆರೋಪಿಸಿ ಲಂಚ ವಿರೋಧ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿತ್ತು. ಲೋಕಾಯುಕ್ತ ನಿರೀಕ್ಷಕರಾಗಿದ್ದ ಬಿಪಿ ದಿನೇಶ್ ಕುಮಾರ್ ಆರೋಪಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಆರೋಪಿ ಲಂಚ ಕೇಳಿದ ಬಗ್ಗೆ ಧ್ವನಿ ಸುರುಳಿಯನ್ನು ಹಾಜರುಪಡಿಸಿದ್ದರು.
ಕುಂದಾಪುರದ ಅಂದಿನ ತಹಶೀಲ್ದಾರ್ ರಾಜು ಮೊಗವೀರ ಹಾಗೂ ಉಡುಪಿಯ ಜಿಲ್ಲಾಧಿಕಾರಿ ಹೇಮಲತಾ ಸೇರಿದಂತೆ ಒಟ್ಟು 8 ಮಂದಿ ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಪ್ರಕಾಶ ಖಂಡೇರಿ ಆರೋಪಿಯನ್ನು ನಿರ್ದೋಷಿ ಎಂದು ತೀರ್ಪು ನೀಡಿ ಬಿಡುಗಡೆ ಮಾಡಿದ್ದಾರೆ. ಆರೋಪಿಯ ಪರವಾಗಿ ಕುಂದಾಪುರದ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.