ಸರಕಾರಿ ಆಸ್ಪತ್ರೆ ದುರಸ್ತಿಗೆ ಮಂಜೂರಾಯ್ತು ಅನುದಾನ
Team Udayavani, Aug 30, 2021, 3:20 AM IST
ಕುಂದಾಪುರ: ಆಡಳಿತ ವೈದ್ಯಾಧಿಕಾರಿ ಕಚೇರಿ ಕೋಣೆ ಸಹಿತ ತುರ್ತು ಚಿಕಿತ್ಸೆ ವಿಭಾಗ ಮೊದಲಾದೆಡೆ ಸೋರುತ್ತಿದ್ದ ಸರಕಾರಿ ಆಸ್ಪತ್ರೆ ಕಟ್ಟಡಕ್ಕೆ ಕೊನೆಗೂ ದುರಸ್ತಿ ಭಾಗ್ಯ ಬಂದಿದೆ. ತತ್ಕಾಲದ ಮಟ್ಟಿಗೆ ಸಮಸ್ಯೆಗೆ ಪರಿಹಾರ ದೊರೆತಿದೆ.
ಚಿಕಿತ್ಸೆಗೆ…
ಕುಂದಾಪುರ ಉಪ ವಿಭಾಗ ಸರಕಾರಿ ಆಸ್ಪತ್ರೆಗೆ ಬರಿದೆ ಕುಂದಾಪುರ ತಾಲೂಕಷ್ಟೇ ಅಲ್ಲದೆ ಭಟ್ಕಳ, ಸಾಗರ, ಬೈಂದೂರು, ಹೊಸಂಗಡಿ ಮೊದಲಾದ ಕಡೆ ಗ ಳಿಂದ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಬಹುತೇಕ ಎಲ್ಲ ಚಿಕಿತ್ಸೆಯೂ ಇಲ್ಲಿ ದೊರೆಯುವ ಕಾರಣ ಇದರ ಹೊರತಾಗಿ ಖಾಸಗಿ ಆಸ್ಪತ್ರೆಗೆ ಹೋಗ ಬೇಕಾದ ಪ್ರಮೇಯ ಬರುವುದಿಲ್ಲ.
ಆಗಮಿಸಿದ ವೈದ್ಯರು:
ಕಳೆದ ವರ್ಷ ಕೋವಿಡ್ ಸಂದರ್ಭ ಸರಕಾರವೇ ದಂತ ಚಿಕಿತ್ಸಾಲಯಗಳನ್ನು ಮುಚ್ಚಲು ನಿರ್ಧರಿಸಿತ್ತು. ಕೋವಿಡ್ ಹರಡುವ ಸಂದರ್ಭ ದಂತ ಚಿಕಿತ್ಸೆ ಕಟ್ಟುನಿಟ್ಟಾಗಿ ನಡೆಸಲ್ಪಡುತ್ತದೆ. ಆದ್ದರಿಂದ ಎಲ್ಲ ಕಡೆ ದಂತ ಚಿಕಿತ್ಸೆಗಾಗಿ ಹುಡುಕುತ್ತಾ ಕೂರುವ ಬದಲು ಸರಕಾರಿ ಆಸ್ಪತ್ರೆಯಲ್ಲಿ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿ ಜನ ಆಗಮಿಸುತ್ತಾರೆ. ಹಾಗೆ ಆಗಮಿಸಿದಾಗ ಅವರಿಗೆ ಸುಸಜ್ಜಿತ ದಂತ ಚಿಕಿತ್ಸೆ ವಿಭಾಗ ಕಾಣಿಸುತ್ತದೆ. ಆಧುನಿಕ ಪರಿಕರಗಳು ಕಾಣಿಸುತ್ತವೆ. ಆದರೆ ದಂತವೈದ್ಯರು ಇಲ್ಲ. ಕೇಳಿದರೆ ಜಿಲ್ಲಾ ಕಾಲ್ ಸೆಂಟರ್ಗೆ ಅವರನ್ನು ನಿಯೋಜಿಸಲಾಗಿದೆ ಎಂಬ ಉತ್ತರ ಬರುತ್ತಿತ್ತು. ಈ ಕುರಿತು “ಉದಯವಾಣಿ’ “ಸುದಿನ’ ಆ.7ರಂದು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ದಂತವೈದ್ಯರಿಲ್ಲ! ಎಂದು ವಿಶೇಷ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ ದಂತವೈದ್ಯರನ್ನು ಚಿಕಿತ್ಸೆಗೆ ಕಳುಹಿಸಿಕೊಡುವುದಾಗಿ ಹೇಳಿದ್ದರು. ಅದರಂತೆ ಅವರು ಕಾಲ್ಸೆಂಟರ್ನಿಂದ ನಿವೃತ್ತಿ ಮಾಡಿದ್ದು ದಂತವೈದ್ಯರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ದಂತಚಿಕಿತ್ಸೆಗೆ ಲಭ್ಯರಿರುತ್ತಾರೆ. ಇವರು ತಜ್ಞ ದಂತವೈದ್ಯರು.
ಸೋರುವಿಕೆ:
ಸದ್ಯ ಕಾರ್ಯಾಚರಿಸುತ್ತಿರುವ ಉಪವಿಭಾಗ ಸರಕಾರಿ ಆಸ್ಪತ್ರೆ ಕಟ್ಟಡ 20 ವರ್ಷಗಳಷ್ಟು ಹಳೆಯದು. ತುರ್ತು ಚಿಕಿತ್ಸೆ ವಿಭಾಗದ ಬಳಿ, ಆಡಳಿತ ವೈದ್ಯಾಧಿಕಾರಿ ಕಚೇರಿ, ಇಷ್ಟಲ್ಲದೇ ಆಸ್ಪತ್ರೆಯ ಪ್ರವೇಶ ದ್ವಾರದಿಂದ ತೊಡಗಿ ಒಳಗೆಲ್ಲ ಅಲ್ಲಲ್ಲಿ ನೀರು ಸೋರುತ್ತಿದೆ. ಕೆಲವೆಡೆ ಛಾವಣಿಯ ಸಿಮೆಂಟ್ ಹೋಗಿ ಒಳಗಿನ ಕಬ್ಬಿಣದ ಸರಳು ಕಾಣುತ್ತಿದೆ. ಮಳೆನೀರಿನ ತೇವದಿಂದ ಗೋಡೆ ಹಸಿ ಯಾಗಿದ್ದು ಬಣ್ಣ ಮಾಸಿದೆ. ಎರಡು ವರ್ಷಗಳ ಹಿಂದೆ ಲಕ್ಷಾಂತರ ರೂ. ವೆಚ್ಚದಲ್ಲಿ ಲೀಕ್ ಪ್ರೂಫ್ ಕಾಮಗಾರಿ ಮಾಡಿಸಲಾಗಿತ್ತು. ಆದರೆ ಈ ವರ್ಷ ಮತ್ತೆ ಸೋರಿಕೆ ಆರಂಭವಾಗಿದೆ. ಒಂದು ಬಾರಿ ಇಡೀ ಆಸ್ಪತ್ರೆ ಮಳೆ ನೀರಿಗೆ ಸೋರದಂತೆ 20 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಮಾಡುವುದು ಎಂದು ಕ್ರಿಯಾ ಯೋಜನೆ ಮಾಡಲಾಗಿತ್ತು. ಆದರೆ ಮಂಜೂರಾತಿ ಆಗಿಲ್ಲ. ಛಾವಣಿಯ ಕಬ್ಬಿಣ ಕಾಣಿಸುವಷ್ಟು ಸಿಮೆಂಟ್ ಕಿತ್ತು ಹೋದ ಕಾರಣ ಮಿಂಚು ಹಾಗೂ ವಿದ್ಯುತ್ ಶಾರ್ಟ್ ಸರ್ಕ್ನೂಟ್ನ ಭಯವೂ ಇದೆ.
ಸುದಿನ ವರದಿ :
ಕಟ್ಟಡ ಸೋರುತ್ತಿರುವ ಕುರಿತು “ಉದಯವಾಣಿ’ “ಸುದಿನ’ ಜು. 17ರಂದು “ಕುಂದಾಪುರ: ಸೋರುತಿ ಹುದು ಸರಕಾರಿ ಆಸ್ಪತ್ರೆ’ ಎಂದು ವಿಶೇಷ ವರದಿ ಮಾಡಿತ್ತು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಆರೋಗ್ಯ ಸಚಿವ ಡಾ| ಸುಧಾಕರ್ ಅವರಿಗೆ ಪತ್ರ ಬರೆದು ಸರಕಾರಿ ಆಸ್ಪತ್ರೆ ಸೋರದಂತೆ ತಡೆಯಲು ಕಾಮಗಾರಿಗೆ ಅನುದಾನ ಮಂಜೂರು ಮಾಡುವಂತೆ ಕೇಳಿದ್ದಾರೆ. ಆರೋಗ್ಯ ಇಲಾಖೆಯ ಎಂಜಿನಿಯರಿಂಗ್ ವಿಭಾಗಕ್ಕೆ ಕಾಮಗಾರಿ ಕ್ರಿಯಾಯೋಜನೆ ಸಿದ್ಧವಾಗಿದ್ದರೂ ಅನುದಾನ ಮಂಜೂರಾಗಿರಲಿಲ್ಲ. ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಈ ಕುರಿತು ಮುತುವರ್ಜಿ ವಹಿಸಿ ಪ್ರಕೃತಿ ವಿಕೋಪ ನಿಧಿಯಿಂದ ತುರ್ತು ದುರಸ್ತಿಗೆ ಬೇಡಿಕೆಯಿದ್ದ 16.5 ಲಕ್ಷ ರೂ. ಗಳನ್ನು ಮಂಜೂರು ಮಾಡಿದ್ದಾರೆ. ಕಾಮಗಾರಿ ನಡೆಯಲಿದೆ.
ಕಾಲ್ಸೆಂಟರ್ನಲ್ಲಿ ಕರ್ತವ್ಯ ನಿಯೋಜನೆಗೆ ಒಳ ಗಾಗಿದ್ದ ತಜ್ಞ ದಂತವೈದ್ಯರು ಸಾರ್ವಜನಿಕ ಸೇವೆಗೆ ಲಭ್ಯರಿದ್ದಾರೆ. ಕಟ್ಟಡ ಸೋರುವಿಕೆ ತಡೆಗೆ ಜಿಲ್ಲಾಧಿಕಾರಿ ಅನುದಾನ ಮಂಜೂರು ಮಾಡುವುದಾಗಿ ಹೇಳಿದ್ದಾರೆ. –ಡಾ| ರಾಬರ್ಟ್ ರೆಬೆಲ್ಲೋ, ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ, ಕುಂದಾಪುರ ಉಪವಿಭಾಗ ಆಸ್ಪತ್ರೆ