ಕುಂದಾಪುರ- ಬೈಂದೂರು: 82 ಕೆರೆ ಅಭಿವೃದ್ಧಿ
ನರೇಗಾದಡಿ ಜಲಮೂಲಗಳ ಪುನಶ್ಚೇತನ ; ಹಕ್ಲಾಡಿ ಗ್ರಾ.ಪಂ. ಗರಿಷ್ಠ - 12, ಆಲೂರು ಗ್ರಾ.ಪಂ. 9 ಕೆರೆಗೆ ಮರುಜೀವ
Team Udayavani, Feb 5, 2022, 4:40 PM IST
ಕುಂದಾಪುರ: ನರೇಗಾ ಯೋಜನೆ ವೈಯಕ್ತಿಕ ಕೆಲಸ ಅಥವಾ ಕೇವಲ ಕೂಲಿಗಾಗಿ ಕೆಲಸ ಮಾಡುವ ಯೋಜನೆಯಾಗದೇ, ಜಲಮೂಲಗಳ ಪುನಶ್ಚೇತನಕ್ಕೂ ವರದಾನವಾಗುತ್ತಿದೆ. ನರೇಗಾದಡಿ ಪ್ರತಿ ಗ್ರಾಮದಲ್ಲೊಂದು ಕೆರೆ ಅಭಿವೃದ್ಧಿಗೆ ಮುಂದಾಗಿದ್ದು, ಇದರಿಂದ ಅಂತರ್ಜಲ ಮಟ್ಟ ಸುಧಾರಣೆಗೆ ನರೇಗಾ ಸಹಕಾರಿಯಾಗಿದೆ. ಅವಿಭಜಿತ ಕುಂದಾಪುರ ತಾಲೂಕಿನಲ್ಲಿ ಕಳೆದೊಂದು ವರ್ಷದಿಂದ 82 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಗ್ರಾಮೀಣ ಜನರ ಜೀವನೋಪಾಯಕ್ಕಾಗಿವರದಾನವಾಗಿರುವ ನರೇಗಾ ಯೋಜನೆಯು ಜಲಮೂಲಗಳ ಪುನಶ್ಚೇತನದತ್ತಲೂ ಮಹತ್ತರ ಹೆಜ್ಜೆಯಾಗಿದೆ. ಕಳೆದ ವರ್ಷದ ಏಪ್ರಿಲ್ನಿಂದ ಈ ವರ್ಷದ ಜನವರಿಯವರೆಗೆ ಕುಂದಾಪುರ ತಾಲೂಕಿನಲ್ಲಿ 68 ಹಾಗೂ ಬೈಂದೂರು ತಾಲೂಕಿನಲ್ಲಿ 14 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಹಕ್ಲಾಡಿ ಗರಿಷ್ಠ
ಕುಂದಾಪುರ ತಾಲೂಕಿನ ಕೆರೆ ಅಭಿವೃದ್ಧಿಯ ಪೈಕಿ ಹಕ್ಲಾಡಿ ಪಂ.ನದ್ದು ಸಿಂಹಪಾಲು. ಈ ವರ್ಷದಲ್ಲಿ ಹಕ್ಲಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಬರೋಬ್ಬರಿ 12 ಕೆರೆಗಳು ಅಭಿವೃದ್ಧಿಯಾಗಿವೆ. ಇನ್ನು ಈ ಯಾದಿಯಲ್ಲಿ ಎರಡನೇ ಸ್ಥಾನ ಆಲೂರಿನದ್ದಾಗಿದೆ. ಈ ಸಾಲಿನಲ್ಲಿ ಆಲೂರು ಗ್ರಾ.ಪಂ.ವ್ಯಾಪ್ತಿಯಲ್ಲಿ 9,ಬೈಂದೂರು ತಾಲೂಕಿನ ನಾಡದಲ್ಲಿ ಗರಿಷ್ಠ 4 ಹಾಗೂ ಹೇರೂರಲ್ಲಿ 3 ಕೆರೆಗಳು ಅಭಿವೃದ್ಧಿಯಾಗಿದೆ.
ಕುಂದಾಪುರ ತಾ|: 29 ಗ್ರಾ.ಪಂ.
ಕುಂದಾಪುರ ತಾಲೂಕಿನ 45 ಗ್ರಾ.ಪಂ.ಗಳ ಪೈಕಿ 29 ಗ್ರಾ.ಪಂ.ವ್ಯಾಪ್ತಿಯಲ್ಲಿ ಕೆರೆ ಅಭಿವೃದ್ಧಿಯಾಗಿದೆ. ಕಟ್ಬೆಲೂ¤ರು -5, ಬೀಜಾಡಿ – 4, ಕಂದಾವರ, ಬಸೂÅರು ತಲಾ 3, ಹಂಗಳೂರು, ಹೊಸಾಡು, ಕಾಳಾವರ, ವಂಡ್ಸೆ, ತ್ರಾಸಿ ತಲಾ 2, ಆನಗಳ್ಳಿ, ಉಳ್ಳೂರು, ಬಳ್ಕೂರು, ಗಂಗೊಳ್ಳಿ, ಗೋಪಾಡಿ, ಗುಜ್ಜಾಡಿ, ಗುಲ್ವಾಡಿ, ಹಾರ್ದಳ್ಳಿ – ಮಂಡಳ್ಳಿ, ಹಟ್ಟಿಯಂಗಡಿ, ಹೆಮ್ಮಾಡಿ, ಹೆಂಗವಳ್ಳಿ, ಇಡೂರು- ಕುಂಜ್ಞಾಡಿ, ಕೆದೂರು, ಕೆರಾಡಿ, ಕೋಣಿ, ಕೊರ್ಗಿ, ಕುಂಭಾಶಿ, ಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯಲ್ಲಿ ತಲಾ ಒಂದೊಂದು ಕೆರೆ ಅಭಿವೃದ್ಧಿಪಡಿಸಲಾಗಿದೆ.
ಬೈಂದೂರು ತಾ| : 8 ಗ್ರಾ.ಪಂ.
ಬೈಂದೂರು ತಾಲೂಕಿನ 13 ಗ್ರಾ.ಪಂ.ಗಳ ಪೈಕಿ 8 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಕೆರೆ ಅಭಿವೃದ್ಧಿಪಡಿಸಲಾಗಿದೆ. ನಾಡ- 4, ಹೇರೂರು – 3, ಶಿರೂರು -2, ನಾವುಂದ, ಮರವಂತೆ, ಕೊಲ್ಲೂರು, ಬಿಜೂರು, ಕೆರ್ಗಾಲ್ ಗ್ರಾ.ಪಂ. ವ್ಯಾಪ್ತಿಯಲ್ಲಿ ತಲಾ ಒಂದೊಂದು ಕೆರೆಗೆ ಉದ್ಯೋಗ ಖಾತರಿ ಯೋಜನೆಯಡಿ ಮರುಜೀವ ನೀಡಲಾಗಿದೆ.
14 ಅಭಿವೃದ್ಧಿ
ನರೇಗಾದಡಿ ಬೈಂದೂರು ತಾಲೂಕಿನಲ್ಲಿ ಈ ವರ್ಷದಲ್ಲಿ 14 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೆರೆ ಮಾತ್ರವಲ್ಲದೆ ನದಿ ಹೂಳೆತ್ತುವ ಕಾರ್ಯ, ಮಳೆ ನೀರು ಕೊಯ್ಲುಗಳನ್ನು ಅಳವಡಿಸಲಾಗಿದೆ. ವೈಯಕ್ತಿಕ ಕೂಲಿ ಜತೆಗೆ, ಕೆರೆ, ನದಿ ಸ್ವತ್ಛತೆ ಇನ್ನಿತರ ಸಾಮುದಾಯಿಕ ಕಾರ್ಯಗಳಿಗೂ ಸಾಕಷ್ಟು ಪ್ರಯೋಜನವಾಗುತ್ತಿದೆ. ಗ್ರಾಮೀಣ ಭಾಗದ ಇನ್ನಷ್ಟು ಮಂದಿ ಇದರ ಪ್ರಯೋಜನವನ್ನು
ಪಡೆದುಕೊಳ್ಳಬಹುದು.
-ಭಾರತಿ,
ಕಾರ್ಯನಿರ್ವಾಹಣಾಧಿಕಾರಿ, ಬೈಂದೂರು ತಾ.ಪಂ.
ಕೆರೆ ಪುನಶ್ಚೇತನ
ನರೇಗಾದಡಿ ಕುಂದಾಪುರ ತಾಲೂಕಿನಲ್ಲಿ 68 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಗ್ರಾಮೀಣ ಭಾಗದ ಜನರಿಗೆ ವೈಯಕ್ತಿಕ ಮಾತ್ರವಲ್ಲದೆ ಸಾಮುದಾಯಿಕವಾಗಿಯೂ ಸಾಕಷ್ಟು ಪ್ರಯೋಜನವಾಗುತ್ತಿದೆ. ಮಾರ್ಚ್ವರೆಗೆ ಇನ್ನಷ್ಟು ಕೆರೆ, ನದಿ ಹೂಳೆತ್ತುವ ಕಾರ್ಯ ಆಗಲಿದೆ.
-ಶ್ವೇತಾ ಎನ್,
ಕಾರ್ಯನಿರ್ವಾಹಣಾಧಿಕಾರಿ
ಕುಂದಾಪುರ ತಾ.ಪಂ.
– ಪ್ರಶಾಂತ್ ಪಾದೆ