‘ಪುನೀತ ಪರ್ವ’ ನೋಡುತ್ತಿದ್ದಾಗಲೇ ಯುವ ಅಭಿಮಾನಿ ಕೊನೆಯುಸಿರು
Team Udayavani, Oct 22, 2022, 4:09 PM IST
ಬೆಂಗಳೂರು : ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಪುನೀತ್ ರಾಜ್ ಕುಮಾರ್ ಅವರ ಸ್ಮರಣೆಯ ‘ಪುನೀತ ಪರ್ವ’ ಕಾರ್ಯಕ್ರಮ ಟಿವಿಯಲ್ಲಿ ವೀಕ್ಷಿಸುತ್ತಿದ್ದಾಗ ಅಭಿಮಾನಿಯೊಬ್ಬ ಹೃದಯಾಘಾತದಿಂದ ಕೊನೆಯುಸಿರೆಳೆದ ಘಟನೆ ನಡೆದಿದೆ.
ಮಲ್ಲೇಶ್ವರದ ಲಿಂಕ್ ರೋಡ್ ಬಳಿಯ ನಿವಾಸಿ ಗಿರಿರಾಜ್ ಅವರು ಸಾವನ್ನಪ್ಪಿದ್ದು, ಟಿವಿ ಯಲ್ಲಿ ಕಾರ್ಯಕ್ರಮ ನೋಡುತ್ತಾ ಇರುವಾಗ ರಾತ್ರಿ 10.30 ರ ವೇಳೆಗೆ ಸ್ನಾನಗ್ರಹಕ್ಕೆ ಹೋಗಿದ್ದು ಅಲ್ಲಿಯೇ ಕುಸಿದು ಬಿದ್ದಿದ್ದಾರೆ.
ಮನೆಯವರು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ವೈದ್ಯರು ತಿಳಿಸಿರುವುದಾಗಿ ಕುಟುಂಬ ಸದಸ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಾರ್ಯಕ್ರಮ ನೋಡುತ್ತಿರುವಾಗಲೇ ಭಾವುಕರಾಗಿ ಕಣ್ಣೀರು ಹಾಕಿದ್ದರು ಎಂದು ಹೇಳಲಾಗಿದೆ.
ಗಿರಿರಾಜ್ ಪುನೀತ್ ರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಮನೆಯಲ್ಲಿ ಫೋಟೋ ಇಟ್ಟುಕೊಂಡು ಪೂಜೆ ಸಲ್ಲಿಸುತ್ತಿದ್ದರು ಎಂದು ತಿಳಿದು ಬಂದಿದೆ.