ಬಿಟ್ ಕಾಯಿನ್: ತನಿಖೆ ಚುರುಕಾದ್ರೆ ಸಿಎಂ ಬದಲಾವಣೆ; ಪ್ರಿಯಾಂಕ್ ಖರ್ಗೆ
ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ಕಾಂಗ್ರೆಸ್ ವರಿಷ್ಠ ಮಂಡಳಿ ತೀರ್ಮಾನ ಮಾಡಲಿದೆ
Team Udayavani, May 3, 2022, 5:51 PM IST
ಕೆ.ಆರ್.ನಗರ: ಬಿಜೆಪಿ ಸರ್ಕಾರ ಅರ್ಧಕ್ಕೆ ನಿಲ್ಲಿಸಿರುವ ಬಿಟ್ ಕಾಯಿನ್ ತನಿಖೆಯನ್ನು ಮುಂದುವರಿಸಿದರೆ ಮುಖ್ಯಮಂತ್ರಿ ಬದಲಾವಣೆ ಖಚಿತ ಎಂದು ಚಿತ್ತಾ ಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಬಳಿ ಮಾತನಾಡಿದ ಅವರು, ಪಿಎಸ್ಐ ಹಗರಣವನ್ನು ಬಯಲಿಗೆ ತಂದ ನನಗೆ ನೋಟಿಸ್ ನೀಡಿದ್ದು, ಅದಕ್ಕೆ ಉತ್ತರ ಕೊಡುವ ಅಗತ್ಯವಿಲ್ಲ ಎಂದರು.
57 ಸಾವಿರ ಮಂದಿ ಪಿಎಸ್ಐ ಪರೀಕ್ಷೆ ಬರೆದಿದ್ದು, ಬಿಜೆಪಿ ಸರ್ಕಾರ ಅವರ ಜೀವನದ ಜತೆ ಚೆಲ್ಲಾಟ ವಾಡುತ್ತಿದೆ ಎಂದು ದೂರಿದ ಶಾಸಕರು, ಕಾಂಗ್ರೆಸ್ ಪಕ್ಷ ಯುವಕರಿಗೆ ನ್ಯಾಯ ಕೊಡಿಸುವ ದೃಷ್ಟಿಯಿಂದ ಹೋರಾಟ ಮಾಡುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ದಲಿತ ಮುಖ್ಯಮಂತ್ರಿ ಆಗ ಬೇಕೆಂಬ ಕೂಗು ಇದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ಖರ್ಗೆ, ಮುಂದಿನ ಚುನಾವಣೆಯಲ್ಲಿ ಪಕ್ಷ 150 ಸ್ಥಾನಗಳಲ್ಲಿ ಜಯಗಳಿಸಬೇಕು. ಆ ನಂತರ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ಕಾಂಗ್ರೆಸ್ ವರಿಷ್ಠ ಮಂಡಳಿ ತೀರ್ಮಾನ ಮಾಡಲಿದೆ ಎಂದು ಮಾಹಿತಿ ನೀಡಿದರು.
ಕೆ.ಆರ್.ನಗರದಿಂದ ಕಳೆದ ಬಾರಿ ಅಲ್ಪ ಮತಗಳಿಂದ ಸೋಲು ಕಂಡ ಡಿ.ರವಿಶಂಕರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಲಿದ್ದು, ಅವರ ಗೆಲುವಿಗೆ ದುಡಿಯಬೇಕು ಎಂದು ಮನವಿ ಮಾಡಿದರಲ್ಲದೆ ಪ್ರಚಾರಕ್ಕಾಗಿ ತಾವೂ ಸೇರಿದಂತೆ ಪಕ್ಷದ ಇತರ ಹಿರಿಯ ನಾಯಕರು ಆಗಮಿಸಲಿದ್ದಾರೆ ಎಂದು ಪ್ರಕಟಿಸಿದರು.
ಡಿ.ರವಿಶಂಕರ್ ನೇತೃತ್ವದಲ್ಲಿ ಪಟ್ಟಣದ ಆದಿಶಕ್ತಿ ತೋಪಮ್ಮ ದೇವಾಲಯದ ಶಾಸಕ ಬಳಿ ಪ್ರಿಯಾಂಕ್ ಖರ್ಗೆ ಅವರಿಗೆ ಅದ್ಧೂರಿ ಸ್ವಾಗತ ಕೋರಿದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಮೈಸೂರು- ಹಾಸನ ರಸ್ತೆಯಲ್ಲಿ ಪುರಸಭೆ ವೃತ್ತದವರೆಗೆ ಬೈಕ್ ರ್ಯಾಲಿ ಮತ್ತು ಕಲಾ ತಂಡದೊಂದಿಗೆ ಮೆರವಣಿಗೆ ಮಾಡಲಾಯಿತು.
ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇ ಗೌಡ, ಪುರಸಭೆ ಅಧ್ಯಕ್ಷ ಕೋಳಿಪ್ರಕಾಶ್, ಉಪಾಧ್ಯಕ್ಷೆ ಸೌಮ್ಯಲೋಕೇಶ್, ಸದಸ್ಯರಾದ ಕೆ.ಜಿ. ಸುಬ್ರಹ್ಮಣ್ಯ, ಶಂಕರ್, ನಟರಾಜ್, ಸೈಯದ್ಸಿದ್ದಿಕ್, ಜಾವೀದ್ ಪಾಷಾ, ವಕ್ತಾರ ಸೈಯದ್ಜಾಬೀರ್, ಕಾನೂನು ಸಲಹಾ ಸಮಿತಿ ಸದಸ್ಯ ಬಿ.ಎಂ.ಮೂರ್ತಿ, ಮುಖಂಡ ರಾದ ಜೆ.ಶಿವಣ್ಣ, ಮಿರ್ಲೆನಾಗರಾಜು, ಹೊಸೂರು ಕಲ್ಲಹಳ್ಳಿ ಶ್ರೀನಿವಾಸ್, ಹರಂಬಳ್ಳಿನವೀನ್, ಸರಿತಾಜ ವರಪ್ಪ, ಕೆ.ವಿನಯ್, ಕೆ.ಎಲ್.ಕೃಷ್ಣಯ್ಯ ಮತ್ತಿತರರು ಇದ್ದರು.