ಜಲಾಶಯಕ್ಕೆ ಬಾಗಿನ ಅರ್ಪಣೆ ನನ್ನ ಸೌಭಾಗ್ಯ: ಮುಖ್ಯಮಂತ್ರಿ
Team Udayavani, Nov 3, 2021, 2:54 PM IST
ಶ್ರೀರಂಗಪಟ್ಟಣ: ಪ್ರಸಿದ್ಧ ಕೃಷ್ಣರಾಜ ಸಾಗರ ಅಣೆಕಟ್ಟೆ ತುಂಬಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರು ಮೊದಲ ಬಾರಿಗೆ ಬಾಗಿನ ಅರ್ಪಿಸಿ, ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು. ವೇದ ಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಮಂಗಳವಾರ ವೈದಿಕರ ತಂಡದಿಂದ ಪೂಜಾ ವಿಧಿವಿಧಾನಗಳು ನೆರವೇರಿತು. ನಂತರ ಮುಖ್ಯಮಂತ್ರಿಗಳು ಅಣೆಕಟ್ಟೆಗೆ ಬಾಗಿನ ಅರ್ಪಿಸಿ ಸಂತೋಷ ವ್ಯಕ್ತಪಡಿಸಿದರು.
ನಕ್ಷೆ ತಯಾರಿಗೆ ಸೂಚನೆ: ಈ ಹಿಂದೆ 2008 ರಲ್ಲಿ ನೀರಾವರಿ ಸಚಿವನಾಗಿದ್ದಾಗ ಇಲ್ಲಿಗೆ ಬಂದು ಜಲಾಶಯದ ಗೇಟ್ಗಳನ್ನು ನೋಡಿದೆ. ಗೇಟ್ನಲ್ಲಿ ಭಾರೀ ರಂಧ್ರಗಳಿದ್ದವು. ಇಲ್ಲಿನ ನೀರಾವರಿ ಅಧಿಕಾರಿಗಳು ಮರಳು ಮೂಟೆಗಳನ್ನು ಜೋಡಿಸಿದ್ದರು. ನಾನು ಅವರನ್ನು ಪ್ರಶ್ನಿಸಿ ಜಲಾಶಯಕ್ಕೆ 75 ವರ್ಷವಾಗಿದೆ. ಗೇಟ್ ಬದಲಾವಣೆ ಮಾಡಿಲ್ಲ, ಆಗ ಅಳವಡಿಸಿರುವ ಗೇಟ್ಗಳ ಸ್ಥಿತಿ 35 ವರ್ಷಗಳು ಮಾತ್ರ ಬಾಳಿಕೆ ಇರುತ್ತವೆ ಎಂದು ತಿಳಿಸಿದರು. ನಂತರ ಎರಡು ದಿನ ನನಗೆ ನೀರೆ ಬರಲಿಲ್ಲ, ಒಂದು ದಿನ ಮತ್ತೆ ಬಂದು ಜಲಾಶಯದ ಎಲ್ಲಾ ನಕ್ಷೆ ತಯಾರು ಮಾಡಿ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಗೇಟ್ಗಳ ಸುರಕ್ಷತೆ ಅಗತ್ಯ: 2012ರಲ್ಲಿ ಹಣ ಬಿಡುಗಡೆ ಮಾಡಿಸಿ ಕಾಮಗಾರಿ ನಡೆಸಲು ಸೂಚನೆ ನೀಡಿದೆ. ಯಾವಾಗಲೂ ಅಣೆಕಟ್ಟೆ ಸುರಕ್ಷತೆಯಿಂದ ಇರಬೇಕಾದರೆ ಮೊದಲು ಗೇಟ್ ಸುರಕ್ಷತೆ ಮಾಡಬೇಕು. ಈಗಾಗಲೇ ಗೇಟ್ ಗಳನ್ನು ಸರಿಪಡಿಸಿದ್ದು, ಇನ್ನು ಕೆಲವು ಗೇಟ್ಗಳ ಕಾಮಗಾರಿ ನಡೆಯುತ್ತಿದೆ. 2022ಕ್ಕೆ ಕಾಮಗಾರಿ ಸಂಪೂರ್ಣ ಮುಗಿಯುವ ಹಂತ ತಲುಪಲಿದೆ ಎಂದರು.
14 ಅಣೆಕಟ್ಟೆ ನೆಲಸಮ: ಈ ಹಿಂದೆ ಮಹಾರಾಜರ ಕಾಲದಲ್ಲಿ ಕಟ್ಟಿದ ಅಣೆಕಟ್ಟೆಗಳಲ್ಲಿ 14 ನೆಲಸಮವಾಗಿವೆ. 11 ಅಣೆಕಟ್ಟುಗಳನ್ನು ಆಧುನೀಕರಣ ಮಾಡಲಾಗಿದೆ. ಕಾವೇರಿ ಪೂಜೆ ಮಾಡುವಾಗ 2 ಜಿಲ್ಲೆಯ ಎಲ್ಲ ಶಾಸಕರು, ಸಚಿವರು ಉಪಸ್ಥಿತರಿದ್ದು, ಹಲವು ಯೋಜನೆಗಳನ್ನ ಪೂರ್ಣಗೊಳಿಸಲು ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತೇವೆ ಎಂದು ಹೇಳಿದರು.
ಪೂಜೆ ಸಲ್ಲಿಸಿದ ಬಳಿಕ ಅರ್ಧ ಅಡಿ ನೀರು ಬಂತು
ದಸರಾ ಸಂದರ್ಭದಲ್ಲಿ ಜಲಾಶಯಕ್ಕೆ ನೀರು ಬಂದಿರಲಿಲ್ಲ. ಸ್ವಲ್ಪ ಆತಂಕ ಆಗಿತ್ತು. ಆಗ ಬಸವರಾಜ ಬೊಮ್ಮಾಯಿ ದಂಪತಿ ಪೂಜೆ ಸಲ್ಲಿಸಿದ 24 ಗಂಟೆ ಅವಧಿಯÇÉೇ ಅರ್ಧ ಅಡಿ ನೀರು ಬಂತು. ಸುಮಾರು 60 ಕೋಟಿ ವೆಚ್ಚದಲ್ಲಿ 136 ಗೇಟುಗಳನ್ನು ಆಧುನೀಕರಣಗೊಳಿಸಲಾಗುತ್ತಿದೆ. ಪ್ರತಿ ವರ್ಷ ಒಂದು ಕೋಟಿಗೂ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಿಪಿಪಿ ಮಾದರಿಯಲ್ಲಿನ ಬೃಂದಾವನ ಗಾರ್ಡನ್ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಕ್ರೀಡಾ ಸಚಿವ ನಾರಾಯಣಸ್ವಾಮಿ ತಿಳಿಸಿದರು.
“ಕುಡಿಯುವ ನೀರಿನ ಸಮಸ್ಯೆಗಳ ಬಗೆಹರಿಸಲು ಮೇಕೆದಾಟು ಯೋಜನೆ ಕೈಗೆತ್ತಿಕೊಂಡಿದ್ದೇವೆ. ತಮಿಳುನಾಡಿನವರು ಕ್ಯಾತೆ ತೆಗೆದಿದ್ದು, ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ನ್ಯಾಯ ಸಮ್ಮತ್ತ ಯೋಜನೆಯನ್ನು ಪೂರ್ಣಗೊಳಿಸಲು ಬದ್ಧರಾಗಿದ್ದೇವೆ. ಎರಡೂ ರಾಜ್ಯಗಳ ಮಧ್ಯೆ ಸಂಕಷ್ಟದ ಸಮಯದಲ್ಲಿ ಬಳಸಿಕೊಳ್ಳಲು ಈ ಯೋಜನೆಯನ್ನ ಪೂರ್ಣಗೊಳಿಸುತ್ತೇವೆ.”
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ