ರಾಜ್ಯದಲ್ಲಿ 3.30 ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯ; ಸಚಿವ ಜೆ.ಸಿ.ಮಾಧುಸ್ವಾಮಿ
ಕಂದಾಯ ಇಲಾಖೆಗೆ ಬಂದ ಜಮೀನನ್ನು ಸಣ್ಣ ರೈತರಿಗೆ ನೀಡಲಾಗುತ್ತಿದೆ.
Team Udayavani, Dec 30, 2022, 3:55 PM IST
ಸುವರ್ಣ ವಿಧಾನಸೌಧ: ರಾಜ್ಯದಲ್ಲಿ ಒಟ್ಟಾರೆ 3.30 ಲಕ್ಷ ಹೆಕ್ಟೇರ್ ಮಾತ್ರ ಡೀಮ್ಡ್ ಅರಣ್ಯ ಪ್ರದೇಶ ಉಳಿದುಕೊಂಡಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ವಿಧಾನ ಪರಿಷತ್ತಿನಲ್ಲಿ ಗುರುವಾರ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ನ ಕೆ.ಹರೀಶ್ ಕುಮಾರ್ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲಾಮಟ್ಟದ ತಜ್ಞರ ಪುನರ್ರಚನಾ ಸಮಿತಿ-1 (ಆರ್ ಇಸಿ) ನೀಡಿದ ವರದಿ ಅನ್ವಯ 9.94 ಲಕ್ಷ ಡೀಮ್ಡ್ ಅರಣ್ಯ ಪ್ರದೇಶ ಇತ್ತು. ಈಗ ಡೀಮ್ಡ್ ಅರಣ್ಯ ಪ್ರದೇಶದ ಪಟ್ಟಿಯಲ್ಲಿ ಕೇವಲ 3.30 ಲಕ್ಷ ಮಾತ್ರ ಇದೆ ಎಂದು ಹೇಳಿದರು.
ಇದಕ್ಕೆ ದನಿಗೂಡಿಸಿದ ಕಂದಾಯ ಸಚಿವ ಆರ್. ಅಶೋಕ್, ರಾಜ್ಯದಲ್ಲಿ ಈ ಮೊದಲು ಒಟ್ಟಾರೆ 11 ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯವಿತ್ತು. ಅದು ನಂತರದಲ್ಲಿ 9.94 ಲಕ್ಷ ಹೆಕ್ಟೇರ್ ಆಯಿತು. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಸುಪ್ರೀಂಕೋರ್ಟ್ ಮುಂದೆ ಅಫಿಡವಿಟ್ ಸಲ್ಲಿಸಿ ಅರಣ್ಯ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತಂದು ಡೀಮ್ಡ್ ಅರಣ್ಯ ಪ್ರದೇಶ ಪರಿಷ್ಕರಿಸಬೇಕೆಂದು ಸೇರಿಸಲಾಯಿತು. ಹಾಗಾಗಿ, ಅಫಿಡವಿಟ್ ಸಲ್ಲಿಸಬೇಕಾಯಿತು ಎಂದು ಹೇಳಿದರು.
ಕಂದಾಯ ಇಲಾಖೆಗೆ ಬಂದ ಜಮೀನನ್ನು ಸಣ್ಣ ರೈತರಿಗೆ ನೀಡಲಾಗುತ್ತಿದೆ. ಇದುವರೆಗೆ ನೂರಾರು ರೈತರಿಗೆ ಸಾವಿರಾರು ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದ ಅವರು, 50 ಮರಗಳಿಗಿಂತ ಹೆಚ್ಚು ಇರುವುದನ್ನು ಡೀಮ್ಡ್ ಅರಣ್ಯ ಎಂದು ವಿಶ್ಲೇಷಿಸಲಾಗುತ್ತಿತ್ತು. ಈಗ ಅದರ ಪ್ರಮಾಣವನ್ನೂ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.