ಅಮೃತ ಮಹೋತ್ಸವ ಜನರ ಆಂದೋಲನ- ಪ್ರಧಾನಿ ನರೇಂದ್ರ ಮೋದಿ
Team Udayavani, Nov 1, 2023, 1:10 AM IST
ಹೊಸದಿಲ್ಲಿ: ಅಜಾದಿ ಕಾ ಅಮೃತ ಮಹೋ ತ್ಸವದ 1000 ದಿನಗಳ ಸುದೀರ್ಘ ಆಚರಣೆಯಲ್ಲಿ ಭಾರತವು ವಿಶ್ವದ ಐದನೇ ಅತೀದೊಡ್ಡ ಆರ್ಥಿಕತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗುವುದರ ಜತೆಗೆ ಮಹಿಳಾ ಮೀಸಲು ಮಸೂದೆ ಅಂಗೀಕಾರದಂಥ ಮಹತ್ವದ ಘಳಿಗೆಗೆ ಸಾಕ್ಷಿಯಾಗಿದೆ. ಈ ಮೂಲಕ ಅಮೃತ ಮಹೋತ್ಸವವು ಜನರ ಆಂದೋಲನವೇ ಆಗಿ ಪರಿವರ್ತಿತಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹೊಸದಿಲ್ಲಿಯ ಕರ್ತವ್ಯಪಥದಲ್ಲಿ ನಡೆದ “ನನ್ನ ದೇಶ ನನ್ನ ಮಣ್ಣು (“ಮೇರಿ ಮಾಟಿ, ಮೇರಾ ದೇಶ್ ಅಭಿಯಾನದ ಮತ್ತು ಅಜಾದಿ ಕಾ ಅಮೃತ ಮಹೋ ತ್ಸವದ ಸಮಾರೋಪದಲ್ಲಿ ಪ್ರಧಾನಿ ಪಾಲ್ಗೊಂಡು ಮಾತನಾಡಿದರು. ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಿ ತಂದಿದ್ದ ಮಣ್ಣನ್ನು ಸಮರ್ಪಿಸಿ, ಮಣ್ಣಿನ ತಿಲಕವನ್ನು ಧರಿಸಿದರು.
ಬಳಿಕ ಮಾತನಾಡಿ, ದಂಡಿ ಯಾತ್ರೆಯು ದೇಶದ ಜನರನ್ನು ಒಗ್ಗೂಡಿಸಿತ್ತು ಅದೇ ರೀತಿ ಅಮೃತ ಮಹೋತ್ಸವವು ಜನರನ್ನು ಸಂಭ್ರಮದಲ್ಲಿ ಭಾಗಿಯಾಗಿಸಿ ಇತಿಹಾಸ ಸೃಷ್ಟಿಸಿತು ಎಂದರು. ಇದೇ ವೇಳೆ ಕೊರೊನಾ ವಿರುದ್ಧದ ಹೋರಾಟ, ಏಷ್ಯನ್ ಗೇಮ್ಸ್ನ ಗೆಲುವು, ಚಂದ್ರಯಾನ-3ರ ಯಶಸ್ಸು, ನೂತನ ಸಂಸತ್ ಭವನದಂಥ ಸಾಧನೆಗಳನ್ನೂ ಸ್ಮರಿಸಿದರು.
ಅಲ್ಲದೇ, ರಾಜಪಥದಿಂದ ಕರ್ತವ್ಯಪಥದವರೆಗಿನ ನಡೆಯಲ್ಲಿ ಗುಲಾಮಗಿರಿಯ ಹಲವು ಸಂಕೋಲೆಗಳನ್ನು ಕಳಚಿರುವುದಾಗಿ ಪ್ರತಿಪಾದಿಸಿ, 2047ರ ವೇಳೆಗೆ ಭಾರತ ವನ್ನು ಅಭಿವೃದ್ಧಿಹೊಂದಿದ ರಾಷ್ಟ್ರವನ್ನಾಗಿ ಸಲು ಶ್ರಮಿಸುವಂತೆ ಯುವಜನತೆಗೆ ಕರೆ ನೀಡಿದರು.
ಶಿಲಾನ್ಯಾಸ: ಅಮೃತ ಮಹೋತ್ಸವ ಸ್ಮಾರಕ ಮತ್ತು ಅಮೃತ ವಾಟಿಕ ಸ್ಥಾಪನೆಗೆ ಮೋದಿ ಶಿಲಾನ್ಯಾಸವನ್ನೂ ಅವರು ಇದೇ ಸಂದರ್ಭದಲ್ಲಿ ನೆರವೇರಿಸಿದರು.