Belthangady ವಿಧಾನಸಭಾ ಕ್ಷೇತ್ರಕ್ಕೆ JDSನಿಂದ ಅಚ್ಚರಿ ಆಯ್ಕೆ
ಪತ್ರಕರ್ತ ಅಶ್ರಫ್ ಆಲಿಕುಂಞಿಯವರಿಗೆ ಬಿ ಫಾರ್ಮ್ ನೀಡಿದ ಎಚ್.ಡಿ.ಕೆ.
Team Udayavani, Apr 20, 2023, 2:26 PM IST
ಬೆಳ್ತಂಗಡಿ: 2023 ರ ಕರ್ನಾಟಕ ವಿಧಾನ ಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಜನತಾದಳ ಜಾತ್ಯತೀತ ಪಕ್ಷದ ವತಿಯಿಂದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಾಲೂಕಿನ ಗ್ರಾಮೀಣ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರಿಗೆ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಅವಕಾಶ ಒದಗಿಸಿಕೊಟ್ಟಿದ್ದಾರೆ.
ಎ.20 ರಂದು ಪಕ್ಷದ ಹಿರಿಯರ ಸಮ್ಮುಖ ಅವರಿಗೆ ಅಧಿಕೃರ ‘ಬಿ ಫಾರ್ಮ್’ ಹಸ್ತಾಂತರಿಸಲಾಯಿತು.
ಅಶ್ರಫ್ ಆಲಿಕುಂಞಿ ಮುಂಡಾಜೆ ಅವರು 1998 ರಿಂದ ಜೈ ಕನ್ನಡಮ್ಮ ವಾರಪತ್ರಿಕೆ, ಕರಾವಳಿ ಅಲೆ ದಿನ ಪತ್ರಿಕೆ, ಸುದ್ದಿ ಬಿಡುಗಡೆ ವಾರಪತ್ರಿಕೆಯಲ್ಲಿ ವರದಿಗಾರರಾಗಿ, ಪ್ರಸ್ತುತ ಜಯಕಿರಣ ಕನ್ನಡ ಬೆಳಗ್ಗಿನ ದೈನಿಕ ಪತ್ರಿಕೆಯಲ್ಲಿ ಹವ್ಯಾಸಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮುಂಡಾಜೆ ಗ್ರಾಮದ ದಿ. ಆಲಿಕುಂಞಿ ಮತ್ತು ಕೆ ನೆಫೀಸಾ ದಂಪತಿ ಪುತ್ರರಾಗಿ ಜನಿಸಿದ ಅವರು ಅತ್ಯಂತ ಬಡತನದ ಹಿನ್ನೆಲೆಯಿಂದ ಬಂದವರು. ಕಳೆದ 23 ವರ್ಷಗಳಿಂದ ಗ್ರಾಮೀಣ ಪತ್ರಕರ್ತರಾಗಿ ಗುರುತಿಸಿಕೊಂಡವರು.
ಈ ಮೂಲಕ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಬಹಳಷ್ಟು ಕುತೂಹಲದ ಕಣವಾಗಿ ಮೂಡಿಬಂದಿದೆ. ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕ ಹರೀಶ್ ಪೂಂಜ, ಕಾಂಗ್ರೆಸ್ ಪಕ್ಷದಿಂದ ರಕ್ಷಿತ್ ಶಿವರಾಂ, ಎಸ್.ಡಿ.ಪಿ.ಐ ನಿಂದ ಅಕ್ಬರ್ ಬೆಳ್ತಂಗಡಿ, ಸರ್ವೋದಯ ಕರ್ನಾಟಕ ಪಕ್ಷದಿಂದ ಆದಿತ್ಯ ನಾತಾಯಣ ಕೊಲ್ಲಾಜೆ, ತುಲುವೆರೆ ಪಕ್ಷದಿಂದ ಶೈಲೇಶ್ ಆರ್.ಜೆ. ಸಹಿತ ಪಕ್ಷೇತರ ಅಭ್ಯರ್ತಿಯಾಗಿ ಕೊಯ್ಯೂರಿನ ಮಹೇಶ್ ನಾಮಪತ್ರ ಸಲ್ಲಿಸಿದ್ದರು.
ಇದೀಗ ಜೆ.ಡಿ.ಎಸ್. ಪಕ್ಷದಿಂದ ಮಂಗಳೂರಿನಲ್ಲಿ ಮೊಯ್ದಿನ್ ಬಾವ ಸ್ಪರ್ಧೆಗೆ ಅಚ್ಚರಿ ಆಯ್ಕೆಯಾದಂತೆ ಬೆಳ್ತಂಗಡಿಯಲ್ಲೂ ಅಚ್ಚರಿ ಆಯ್ಕೆ ನಡೆದಿದೆ. ಇದೀಗ 2.15 ಕ್ಕೆ ಅಶ್ರಫ್ ಆಲಿಕುಂಞ ನಾಮಪತ್ರ ಸಲ್ಲಿಸಲಿರುವರು.