Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ
ಬಾಲಕ ರಾಮನ ದರ್ಶನ ಪಡೆದ 3 ಲಕ್ಷ ಮಂದಿ - ಭಕ್ತರ ಅನುಕೂಲಕ್ಕೆ ಅವಧಿ ಹೆಚ್ಚಿಸಿದ ಟ್ರಸ್ಟ್
Team Udayavani, Jan 25, 2024, 1:01 AM IST
ಅಯೋಧ್ಯೆ: ಜ.22ರಂದು ಉದ್ಘಾಟನೆಯಾದ ನೂತನ ಶ್ರೀರಾಮಮಂದಿರದಲ್ಲಿ ಭಕ್ತರ ಪ್ರವಾಹ ಇನ್ನಷ್ಟು ಏರಿದೆ. ಅಕ್ಷರಶಃ ಪ್ರವಾಹದೋಪಾದಿಯಲ್ಲಿ ಜನ ನುಗ್ಗುತ್ತಿದ್ದಾರೆ. ಮಂಗಳವಾರ 5 ಲಕ್ಷ ಮಂದಿ ದೇಗುಲದ ಆವರಣವನ್ನು ಪ್ರವೇಶಿಸಿದ್ದರು. ಅದರಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ಹಗಲಲ್ಲೇ ದರ್ಶನ ಪೂರೈಸಲು ಯಶಸ್ವಿಯಾದರು. ಉಳಿದವರು ಸರತಿಯಲ್ಲಿ ತಾಳ್ಮೆಯಿಂದ ಕಾದರು. 3 ಲಕ್ಷ ಮಂದಿ ದರ್ಶನ ಮಾಡಿದ ಪರಿಣಾಮ, ಜನಜಾತ್ರೆಯಾಗಿತ್ತು. ಈ ಹಿನ್ನೆಲೆಯಲ್ಲಿ ದರ್ಶನದ ಸಮಯವನ್ನು ಬೆಳಗ್ಗೆ 7ರಿಂದ ರಾತ್ರಿ 10ರವರೆಗೂ ವಿಸ್ತರಿಸಲಾಗಿದೆ. ಇದಕ್ಕೂ ಮುನ್ನ ರಾತ್ರಿ 7ರವರೆಗೆ ಮಾತ್ರ ಅವಕಾಶವಿತ್ತು.
ಜ.22ರಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗಿತ್ತು. ಆ ದಿನ ಆಹ್ವಾನಿತ ಗಣ್ಯರಿಗೆ ಹೊರತುಪಡಿಸಿದರೆ ಇತರೆ ಭಕ್ತರಿಗೆ ಪ್ರವೇಶ ನೀಡಿರಲಿಲ್ಲ. ಮಂಗಳವಾರದಿಂದ ಎಲ್ಲರಿಗೂ ದೇಗುಲದ ಬಾಗಿಲು ತೆರೆದಿತ್ತು. ದೇಶಾದ್ಯಂತ ಹಲವು ದಿನಗಳ ಮುನ್ನವೇ ಅಯೋಧ್ಯೆಗೆ ಭಕ್ತರ ಪ್ರವೇಶ ಆರಂಭವಾಗಿತ್ತು. ಮಂಗಳವಾರವೇ ಮೊದಲ ಬಾರಿಗೆ ದರ್ಶನಕ್ಕೆ ಅವಕಾಶ ನೀಡಿದ್ದರಿಂದ, ಜನರ ಪ್ರಮಾಣ ತೀವ್ರವಾಗಿದ್ದು ಸಹಜವೂ ಆಗಿತ್ತು. ಜನರನ್ನು ನಿಯಂತ್ರಿಸಲು, ಸುಗಮವಾಗಿ ಎಲ್ಲರೂ ಸಂಚರಿಸುವಂತಾಗಲು 8000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮಾಧ್ಯಮಗಳಿಗೂ ನಿರ್ಬಂಧ: ಭಕ್ತರು ಸುಲಭವಾಗಿ ಆವರಣದೊಳಗೆ ಪ್ರವೇಶಿಸುವಂತಾಗಲಿ ಎಂಬ ಕಾರಣಕ್ಕೆ ಮಾಧ್ಯಮಗಳಿಗೂ ಒಂದು ದಿನದ ಮಟ್ಟಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.