BPL Card ವಿತರಣೆ ಪುನರಾರಂಭ: ಆಹಾರ ಸಚಿವ ಕೆ.ಎಚ್.ಮುನಿಯಪ್ಪ
ನ್ಯಾ| ಸದಾಶಿವ ಆಯೋಗ ವರದಿ ಜಾರಿಗೆ ಸಿದ್ಧ
Team Udayavani, Nov 3, 2023, 9:39 PM IST
ಹುಬ್ಬಳ್ಳಿ: ವಿವಿಧ ಕಾರಣಗಳಿಂದ ಹಿಂದಿನ ಸರಕಾರ ಸ್ಥಗಿತಗೊಳಿಸಿದ್ದ ಬಿಪಿಎಲ್ ಕಾರ್ಡ್ ವಿತರಣೆ ಕಾರ್ಯ ನ.3ರಿಂದ ಪುನರಾರಂಭವಾಗಿದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರಕಾರ ಚುನಾವಣೆ ಸಹಿತ ಇತರ ಕಾರಣಗಳಿಂದ ಹೊಸ ಬಿಪಿಎಲ್ ಕಾರ್ಡ್ಗಳ ವಿತರಣೆಯನ್ನು ಸ್ಥಗಿತಗೊಳಿಸಿತ್ತು. ನಮ್ಮ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಇದನ್ನು ಗಂಭೀರವಾಗಿ ಪರಿಗಣಿಸಿ ಪುನರಾರಂಭಿಸಲಾಗಿದೆ. ಇದುವರೆಗೆ ಬಿಪಿಎಲ್ ಕಾರ್ಡ್ಗಳಿಗೆ ಸುಮಾರು 2.95 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳನ್ನು ಪರಿಶೀಲಿಸಿ ಅರ್ಹರಿಗೆ ವಿತರಿಸಲಾಗುವುದು. ಬಡತನ ರೇಖೆಗಿಂತ ಕೆಳಗಿರುವವರಿಗೆ ಕಾರ್ಡ್ಗಳು ದೊರೆಯಬೇಕಾಗಿದೆ. ನಕಲಿ ಕಾರ್ಡ್ಗಳ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
ವರದಿ ಜಾರಿಗೆ ಸಿದ್ಧ
ನ್ಯಾ| ಸದಾಶಿವ ಆಯೋಗ ವರದಿ ಜಾರಿ ಕುರಿತು ಹಿಂದೆ ಏಕತಾ ಸಮಾವೇಶ ಸಹಿತ ಹಲವು ಕಡೆ ಭರವಸೆಯನ್ನು ನೀಡಿದ್ದು, ಈ ಬಗ್ಗೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಬೇಕು. ವಿವರವಾಗಿ ಹೇಳುವುದು ಸರಿಯಲ್ಲ. ಆದರೆ ವರದಿ ಜಾರಿ ಬಗ್ಗೆ ನೀಡಿದ ಭರವಸೆಯನ್ನು ನಾವು ಉಳಿಸಿಕೊಳ್ಳುತ್ತೇವೆ ಎಂದರು.