ಉಡುಪಿ ಜಿಲ್ಲೆಯಲ್ಲಿ ವ್ಯಾಪಾರ ಬಿರುಸು; ವಾಣಿಜ್ಯ ವಹಿವಾಟು ಸಮಯ ವಿಸ್ತರಣೆ
Team Udayavani, May 6, 2020, 6:21 AM IST
ಉಡುಪಿ: ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲೆಯಲ್ಲಿ ಅವಧಿ ವಿಸ್ತರಿಸಿರುವುದರಿಂದ ಮಂಗಳವಾರ ನಗರದಲ್ಲಿ ಜನಸಂಚಾರ ಮತ್ತು ವಾಹನಗಳ ಓಡಾಟ ಹೆಚ್ಚಿತ್ತು. ಜನರು ಅಧಿಕ ಸಂಖ್ಯೆಯಲ್ಲಿ ಪೇಟೆಗೆ ಆಗಮಿಸಿ ವಾಣಿಜ್ಯ ವ್ಯವಹಾರಗಳಲ್ಲಿ ತೊಡಗಿಕೊಂಡರು.
ಮಂಗಳವಾರದಿಂದ ಖರೀದಿಗೆ ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಅವಕಾಶ ಕಲ್ಪಿಸಿದ್ದರಿಂದ ಒಮ್ಮೆಲೇ ರಶ್ ಆಗುವುದು ತಪ್ಪಿತು. ಸಾರಿಗೆ ಸಂಚಾರ, ಕ್ಷೌರ ದಂಗಡಿಗಳು, ಬ್ಯೂಟಿ ಪಾರ್ಲರ್ಗಳು, ಶಾಲಾ-ಕಾಲೇಜುಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಆರಂಭವಾಗಿದ್ದು, ಅಗತ್ಯ ವಸ್ತುಗಳ ಜತೆಗೆ ಬಟ್ಟೆಬರೆಗಳು, ಚಪ್ಪಲಿ, ಬೇಕರಿ ತಿನಿಸುಗಳು, ಆಭರಣಗಳ ಖರೀದಿಗೆ ಗ್ರಾಹಕರು ಆಗಮಿಸಿದರು. ಮಲ್ಟಿಬ್ರ್ಯಾಂಡ್ ಎಲೆಕ್ಟ್ರಾನಿಕ್ಸ್ ಮಳಿಗೆಗಳಿಗೆ ಎಸಿ ಚಾಲೂ ಮಾಡದೆ ಕಾರ್ಯಾಚರಿಸಲು ಅವಕಾಶ ನೀಡಿದ್ದರಿಂದ ಹಲವು ಅಂಗಡಿಗಳು ತೆರೆದಿದ್ದವು. ಪ್ಲಂಬರ್, ಎಲೆಕ್ಟ್ರೀಶಿಯನ್, ಇನ್ವರ್ಟರ್ ಸಹಿತ ವಿವಿಧ ವ್ಯವಹಾರಗಳವರೂ ಸೇವೆ ಒದಗಿಸಲಾರಂಭಿಸಿದ್ದಾರೆ.
ಕಿಕ್ಕಿರಿದ ವಾಹನಗಳು
ಬಸ್ ಸಂಚಾರಕ್ಕೆ ಅವಕಾಶ ಇಲ್ಲದಿದ್ದರೂ ನಗರದೆಲ್ಲೆಡೆ ದ್ವಿಚಕ್ರ ಮತ್ತು ಚತುಶ್ಚಕ್ರ ವಾಹನಗಳು ಅಧಿಕ ಸಂಖ್ಯೆ ಯಲ್ಲಿ ಕಂಡು ಬಂದವು. ಕೆಲವು ಪ್ರಮುಖ ಅಂಗಡಿ, ಬೇಕರಿಗಳ ಎದುರು ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದವು. ಹಲವೆಡೆ ಜನರು ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧಾರಣೆಯನ್ನು ಮರೆತಂತಿತ್ತು. ಮದ್ಯ ದಂಗಡಿಗಳಲ್ಲಿ ಉದ್ದನೆಯ ಸಾಲು ಮಂಗಳವಾರವೂ ಕಂಡುಬಂತು.
ಬಸ್ ಸಂಚಾರ:ಇಂದು ನಿರ್ಧಾರ
ಹಸುರು ವಲಯದಲ್ಲಿ ಬಸ್ಗಳ ಓಡಾಟಕ್ಕೆ ಸರಕಾರ ಈಗಾಗಲೇ ಅನುಮತಿ ನೀಡಿದೆ. ಜಿಲ್ಲೆಯಲ್ಲಿ ಇದನ್ನು ಆರಂಭಿಸುವ ಬಗ್ಗೆ ಬುಧವಾರ ಜಿಲ್ಲಾಧಿಕಾರಿಗಳು ಬಸ್ ಮಾಲಕರೊಂದಿಗೆ ಸಭೆ ನಡೆಸಿ ತೀರ್ಮಾನಿಸುವರು. ಈಗಾಗಲೇ ಕೆಎಸ್ಸಾರ್ಟಿಸಿ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿ ಯಾವ ರೂಟ್ ಗಳಲ್ಲಿ ಬಸ್ಸುಗಳ ಅಗತ್ಯವಿದೆ ಎನ್ನು ವುದರ ಬಗ್ಗೆ ಸರ್ವೆ ನಡೆಸಿ ವರದಿ ನೀಡುವಂತೆ ಆದೇಶಿಸಲಾಗಿದೆ.