U.P: ಕೇಂದ್ರದ ಭರವಸೆ: ಪ್ರತಿಭಟನೆ ಹಿಂಪಡೆದ ಉ.ಪ್ರ. ರೈತರು
ಪ್ರತಿಭಟನೆ ಹಿನ್ನೆಲೆಯಲ್ಲಿ ಬ್ಯಾರಿಕೇಡ್ ಅಳವಡಿಸಿ, ದೆಹಲಿ-ನೊಯ್ಡಾ ಗಡಿ ಬಂದ್
Team Udayavani, Feb 8, 2024, 8:04 PM IST
ನವದೆಹಲಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಉತ್ತರಪ್ರದೇಶ ರೈತರು ಗುರುವಾರ ದೆಹಲಿ ಚಲೋಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರೈತರು ದೆಹಲಿಗೆ ಬಾರದಂತೆ, ಅವರನ್ನು ಅಲ್ಲಿಯೇ ತಡೆಯಲು ಬ್ಯಾರಿಕೇಡ್ಗಳನ್ನು ಅಳವಡಿಸಿ, ದೆಹಲಿ-ನೊಯ್ಡಾ ಗಡಿಯನ್ನು ಪೊಲೀಸರು ಗಡಿ ಬಂದ್ ಮಾಡಿದ್ದರು. ಇದರಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. ಪ್ರತಿಭಟನಾನಿರತ ರೈತ ಪ್ರತಿನಿಧಿಗಳನ್ನು ಗುರುವಾರ ಸಂಜೆ ಹೊತ್ತಿಗೆ ಕೇಂದ್ರ ಸರ್ಕಾರದ ನಿಯೋಗ ಭೇಟಿ ಮಾಡಿ, ಮಾತುಕತೆ ನಡೆಸಿತು. ಬೇಡಿಕೆ ಈಡೇರಿಸುವ ಭರವಸೆ ದೊರೆತ ನಂತರ ರೈತರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.
ಗುರುವಾರ ಸುಮಾರು 6 ಗಂಟೆಗಳ ಕಾಲ ಬಂದ್ ಆಗಿದ್ದ ದೆಹಲಿ-ನೊಯ್ಡಾ ಎಕ್ಸ್ಪ್ರೆಸ್ವೇ ಸಂಜೆ ನಂತರ ಸಹಜ ಸ್ಥಿತಿಗೆ ಮರಳಿತು. ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ಪ್ರದೇಶದಲ್ಲಿ ಭೂಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ಹೆಚ್ಚಿಸಬೇಕೆಂದು ಒತ್ತಾಯಿಸಿ ಕಿಸಾನ್ ಮಹಾಪಂಚಾಯತ್ ದೆಹಲಿ ಚಲೋಗೆ ಕರೆ ನೀಡಿತ್ತು. ಇನ್ನೊಂದೆಡೆ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ, ರೈತರಿಗೆ ಪಿಂಚಣಿ, ಬೆಳೆ ವಿಮೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಂಜಾಬ್ ರೈತರು ಮಂಗಳವಾರ “ದೆಹಲಿಗೆ ಟ್ರ್ಯಾಕ್ಟರ್ ಚಲೋ’ ಹಮ್ಮಿಕೊಂಡಿದ್ದಾರೆ.
ಚಂಡೀಗಢದಲ್ಲಿ ಪ್ರತಿಭಟನಾನಿರತ ರೈತ ಪ್ರತಿನಿಧಿಗಳನ್ನು ಗುರುವಾರ ಸಂಜೆ ಕೇಂದ್ರ ಕೃಷಿ ಖಾತೆ ಸಹಾಯಕ ಸಚಿವ ಅರ್ಜುನ್ ಮುಂಡಾ, ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರೈ, ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಮತ್ತು ಕೇಂದ್ರ ಸರ್ಕಾರದ ನಿಯೋಗ ಭೇಟಿ ಮಾಡಿ, ಮಾತುಕತೆ ನಡೆಸಿದೆ.