Website,OTP: ಕೊಂಚ ಎಚ್ಚರ ತಪ್ಪಿದರೂ ಅಪಾಯ- ತಾಯ್ನಾಡಿಗೆ ಮರಳಿದ ಚಂದ್ರಶೇಖರ್ ಅಭಿಪ್ರಾಯ
Team Udayavani, Nov 24, 2023, 1:02 AM IST
ಮಂಗಳೂರು: ಸಾಮಾಜಿಕ ಜಾಲತಾಣ, ಬ್ಯಾಂಕ್ ಅಕೌಂಟ್, ಒಟಿಪಿ ಸಂಖ್ಯೆ ಸಹಿತ ವಿವಿಧ ಸಂದರ್ಭದಲ್ಲಿ ನಾವು ಬಹಳಷ್ಟು ಸೂಕ್ಷ್ಮವಾಗಿ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಕೊಂಚ ಎಡವಿದರೂ ನಮಗೆ ಅಪಾಯ ಎದುರಾಗುತ್ತದೆ… ಇದು ಕಳೆದ ಒಂದು ವರ್ಷ ಕಾಲ ತನ್ನದಲ್ಲದ ತಪ್ಪಿಗೆ ರಿಯಾದ್ನ ಜೈಲಿನಲ್ಲಿದ್ದು ಬಿಡುಗಡೆಯಾಗಿ ತಾಯ್ನಾಡಿಗೆ ಮರಳಿದ ದ.ಕ. ಜಿಲ್ಲೆಯ ಕಡಬ ತಾಲೂಕಿನ ಐತ್ತೂರಿನ ಚಂದ್ರಶೇಖರ್ ಅವರ ಅನಿಸಿಕೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಳೆದ ನವೆಂಬರ್ನಲ್ಲಿ ನನ್ನ ಬ್ಯಾಂಕ್ ಖಾತೆಯನ್ನು ಹ್ಯಾಕರ್ಗಳು ಹ್ಯಾಕ್ ಮಾಡಿ ಅದಕ್ಕೆ ಸೌದಿಯ ಮಹಿಳೆಯೊಬ್ಬರ ಖಾತೆಯಿಂದ ಹಣವನ್ನು ಜಮೆ ಮಾಡಲಾಗಿತ್ತು. ಈ ಬಗ್ಗೆ ಮಹಿಳೆ ನನ್ನ ವಿರುದ್ಧ ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದರು. ನನ್ನ ಖಾತೆ ಹ್ಯಾಕ್ ಆದ ಮಾಹಿತಿ ಇಲ್ಲದ ಕಾರಣದಿಂದ ನಾನು ವಂಚನೆ
ಆರೋಪದಲ್ಲಿ ಜೈಲು ಸೇರುವಂತಾ ಗಿತ್ತು. ಕೊನೆಗೆ ರಿಯಾದ್ನಲ್ಲಿರುವ ಸ್ನೇಹಿತರ ನೆರವಿನಲ್ಲಿ ಮಹಿಳೆಯ ಹಣವನ್ನು ಪಾವತಿಸಿ, ದೂರನ್ನು ವಾಪಸ್ ಪಡೆದು ಕೇಸು ಮುಗಿದು ಈಗ ಮರಳುವಂತಾಗಿದೆ. ಕರಾವಳಿ ಮೂಲದ ನನ್ನ ಸ್ನೇಹಿತರಾದ ಅರುಣ್ ಕುಮಾರ್, ಪ್ರಕಾಶ್ ಅಮೀನ್, ಫ್ರಾನ್ಸಿಸ್ ಹಾಗೂ ರಾಘವ್ ಮತ್ತಿತರರು ಸಾಕಷ್ಟು ಪ್ರಯತ್ನಿಸಿ ನೆರವಾಗಿದ್ದಾರೆ ಎಂದರು.
ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಕೆಂಗುಡೇಲು ಮಾತನಾಡಿ, ಚಂದ್ರಶೇಖರ್ ಬಿಡುಗಡೆಗೆ ಒತ್ತಾ ಯಿಸಿ ನಾವು ಇಲ್ಲಿನ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾರೂ ಮನಸ್ಸು ಮಾಡಲಿಲ್ಲ. ಭಾರತೀಯ ವಿದೇಶಾಂಗ ಇಲಾಖೆಗೆ ಪತ್ರ ಬರೆದರೆ, ಅವರು ರಿಯಾದ್ ಬದಲು ಬೇರೆ ರಾಷ್ಟ್ರಕ್ಕೆ ಪತ್ರ ಕಳುಹಿಸಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.
ಚಂದ್ರಶೇಖರ್ ಸಹೋದರ ಹರೀಶ್ ಕಡಬ, ಮುಖಂಡ ಬಾಲಕೃಷ್ಣ ಬಳಕ ಪತ್ರಿಕಾಗೋಷ್ಠಿಯಲ್ಲಿದ್ದರು.