ಸರಕಾರಿ ವೈದ್ಯನ ವಿರುದ್ಧ ಲೋಕಾಯುಕ್ತಕ್ಕೆ ದೂರು
Team Udayavani, Mar 6, 2024, 1:06 AM IST
ಕುಂದಾಪುರ: ಮಾಸ್ಕ್ ಧರಿಸಲಿಲ್ಲ ಎಂದು ಉರಗ ರಕ್ಷಕರೊಬ್ಬರ ಮೇಲೆ ರೇಗಾಡಿದ ಪ್ರಕರಣಕ್ಕೆ ಸರಕಾರಿ ವೈದ್ಯರ ಮೇಲೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಉಪ್ಪುಂದ ಅಂಬಾಗಿಲು ಜನತಾ ಕಾಲನಿಯ ಥಾಮಸ್ ರಾಡ್ರಿಗಸ್ ಅವರು ಬಿಜೂರು ಗ್ರಾಮದ ಬುಡುR ದ್ಯಾವಪ್ಪ ಮೊಗವೀರ ಅವರ ಮನೆಗೆ ಉರಗ ರಕ್ಷಣೆಗೆ ಹೋಗಿದ್ದಾಗ ನಾಗರ ಹಾವು ಕಡಿದಿದ್ದು, ಅವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನ ಬಂದ ವೈದ್ಯರೊಬ್ಬರು ಥಾಮಸ್ ಅವರು ಮಾಸ್ಕ್ ಧರಿಸಿಲ್ಲ ಎಂಬ ನೆವದಿಂದ ಜಗಳ ಮಾಡಿದ್ದಲ್ಲದೇ, ಸಿಸಿ ಕೆಮರಾದಲ್ಲಿ ಸೆರೆಯಾಗದಂತೆ ಬೆಡ್ ಸ್ಥಳಾಂತರ ಮಾಡಿ ಅವಾಚ್ಯವಾಗಿ ಮಾತನಾಡಿ ಚಿಕಿತ್ಸೆ ನೀಡಲು ನಿರಾಕರಿಸಿದರು ಎನ್ನಲಾಗಿದೆ.
ಬಳಿಕ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಈ ವಿಚಾರವನ್ನು ಎಸ್ಪಿ ಅವರ ಗಮನಕ್ಕೆ ತಂದರು. ಆದರೆ ಕುಂದಾಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಲಿಲ್ಲ ಎಂದು ಥಾಮಸ್ ಅವರು ಈ ಘಟನೆ ಬಗ್ಗೆ ವೈದ್ಯರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿಗಳು ಘಟನೆ ಕುರಿತು ತನಿಖೆಗೆ ಸಮಿತಿ ರಚಿಸಿದ್ದು, ಇಬ್ಬರು ವೈದ್ಯರನ್ನು, ಕಚೇರಿ ಅಧೀಕ್ಷಕರನ್ನು ಸಮಿತಿಯಲ್ಲಿ ನೇಮಕ ಮಾಡಿದ್ದಾರೆ.