Censor: ಸೆನ್ಸಾರ್ ಮಂಡಳಿ ವಿರುದ್ಧ ಭ್ರಷ್ಟಾಚಾರ ಆರೋಪ: ತನಿಖೆಗೆ ಕೇಂದ್ರದ ಆದೇಶ
- ಪ್ರಮಾಣಪತ್ರಕ್ಕೆ 6.5 ಲಕ್ಷ ಲಂಚ ಕೇಳಿದ್ದಾರೆಂದು ನಟ ವಿಶಾಲ್ ಆರೋಪ
Team Udayavani, Sep 29, 2023, 9:57 PM IST
ನವದೆಹಲಿ: ಕೇಂದ್ರಿಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ)ಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ತಮಿಳು ನಟ ವಿಶಾಲ್ ಆರೋಪದ ಬೆನ್ನಲ್ಲೇ, ಈ ಸಂಬಂಧಿಸಿದಂತೆ ತಕ್ಷಣದ ತನಿಖೆಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೇ, ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ಅಧಿಕಾರಿಯೊಬ್ಬರನ್ನು ಮುಂಬೈನ ಸಿಬಿಎಫ್ಸಿ ಕಚೇರಿಗೆ ಕಳುಹಿಸಿ, ವಿಚಾರಣೆ ನಡೆಸಲು ಸೂಚಿಸಿರುವುದಾಗಿಯೂ ಸರ್ಕಾರ ಹೇಳಿದೆ.
ಈ ಕುರಿತು ಸಚಿವಾಲಯ ಟ್ವೀಟ್ ಮಾಡಿದ್ದು, ಕೇಂದ್ರ ಸರ್ಕಾರವು ಭ್ರಷ್ಟಾಚಾರದ ವಿಚಾರವನ್ನು ಸಹಿಸುವುದಿಲ್ಲ, ಸಿಬಿಎಫ್ಸಿಯಲ್ಲಿನ ಭ್ರಷ್ಟಾಚಾರದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಿಬಿಎಫ್ಸಿಯಿಂದ ಯಾವುದೇ ಸಮಸ್ಯೆ ಎದುರಾಗಿದ್ದರೆ ಅಂಥವರು ಮಾಹಿತಿ ನೀಡಿ, ತನಿಖೆಗೆ ಸಹಕರಿಸಬೇಕೆಂದು ತಿಳಿಸಿದೆ.
ವಿಶಾಲ್ ಆರೋಪವೇನು?
ತಾವು ಅಭಿನಯಿಸಿರುವ “ಮಾರ್ಕ್ ಆ್ಯಂಟನಿ’ ಸಿನಿಮಾದ ಹಿಂದಿ ಆವೃತ್ತಿ ಬಿಡುಗಡೆಗಾಗಿ ಪ್ರಮಾಣೀಕರಣ ಪತ್ರ ಕೋರಿ ಆನ್ಲೈನ್ ಮೂಲಕ ಸಿಬಿಎಫ್ಸಿಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಸಿಬಿಎಫ್ಸಿ ಅಧಿಕಾರಿಗಳು ತಾಂತ್ರಿಕ ದೋಷದ ಕಾರಣ ನೀಡಿ ಸಿನಿಮಾ ತಂಡದ ಸದಸ್ಯರನ್ನು ಕಚೇರಿಗೆ ಕರೆಸಿ, ಪ್ರಮಾಣ ಪತ್ರ ಬೇಕಾದರೆ 6.5 ಲಕ್ಷ ಲಂಚ ಕೊಡಬೇಕೆಂದು ಕೇಳಿದ್ದಾರೆ. ಬಳಿಕ ಬೇರೆ ಆಯ್ಕೆ ಇಲ್ಲದೇ 6.5 ಲಕ್ಷ ರೂ. ಲಂಚ ನೀಡಬೇಕಾಯಿತು ಎಂದು ವಿಶಾಲ್ ಆರೋಪಿಸಿದ್ದರು. ಈ ಆರೋಪವು ಸಿನಿ ಕ್ಷೇತ್ರದಲ್ಲಿ ಭಾರೀ ಸಂಚಲನ ಮೂಡಿಸಿತ್ತು.