ಡಬಲ್ ಡೆಕ್ಕರ್ ಬಸ್ ಸಂಚಾರ ಪುನಾರಂಭ; 11 ಮಂದಿ ಪ್ರಯಾಣ
ಮೊದಲ ದಿನ ವೀಕ್ಷಕರಿಂದ ನೀರಸ ಪ್ರತಿಕ್ರಿಯೆ ; ಅಂಬಾರಿ ಬಸ್ 3 ಟ್ರಿಪ್ ಸಂಚಾರ
Team Udayavani, Sep 5, 2021, 3:01 PM IST
ಮೈಸೂರು: ಕೋವಿಡ್ ಸೋಂಕು ಹಿನ್ನೆಲೆ 5 ತಿಂಗಳ ಹಿಂದೆ ಸ್ಥಗಿತಗೊಂಡಿದ್ದ ಅಂಬಾರಿ ಬಸ್(ಡಬಲ್ ಡೆಕ್ಕರ್) ಸಂಚಾರ ಶನಿವಾರ ಹೋಟೆಲ್ ಮಯೂರ ಹೊಯ್ಸಳ ಕೇಂದ್ರದ ಆವರಣದಲ್ಲಿ ಪುನಾರಂಭಗೊಂಡಿತು.
ಕೋವಿಡ್ ಹಿನ್ನೆಲೆ 5 ತಿಂಗಳ ನಂತರ ಮತ್ತೆ ಸಂಚಾರ ಆರಂಭಿಸಿದ ಡಬಲ್ ಡೆಕ್ಕರ್ ಬಸ್ಗೆ ಪ್ರವಾಸಿಗರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಮರು ಚಾಲನೆ ದೊರೆತ, ಮೊದಲ ದಿನವಾದ ಶನಿವಾರ ಒಂದು ಅಂಬಾರಿ ಬಸ್ 3 ಟ್ರಿಪ್ ಸಂಚಾರ ನಡೆಸಿದ್ದು, ಕೇವಲ 11ಮಂದಿ ಪ್ರಯಾಣಿಕರು ಮಾತ್ರ ಬಸ್ನಲ್ಲಿ ಸಂಚಾರ ನಡೆಸಿದರು.
ಮೈಸೂರು ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜನ ನೀಡುವ ಸಲುವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ವತಿಯಿಂದ ಅಂಬಾರಿಹೆಸರಿನ ಡಬಲ್ ಡೆಕ್ಕರ್ ಬಸ್ಗಳನ್ನು ಪರಿಚಯಿಸಲಾಗಿತ್ತು.
ಇದನ್ನೂ ಓದಿ:ಸಾರ್ವಜನಿಕ ಗಣೇಶ ಹಬ್ಬಕ್ಕೆ ಗ್ರೀನ್ ಸಿಗ್ನಲ್ ನೀಡಿದ ಸರ್ಕಾರ; ಷರತ್ತುಗಳು ಅನ್ವಯ
ಕಳೆದ ಮಾ.12 ರಂದು ಅಂದಿನ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್04 ಅಂಬಾರಿ ಬಸ್ ಸಂಚಾರಕ್ಕೆ ಚಾಲನೆ ನೀಡಿದ್ದರು. ಬಳಿಕ ಒಂದೇ ತಿಂಗಳಲ್ಲಿ ಕೋವಿಡ್ ಸೋಂಕು ಉಲ್ಬಣಗೊಂಡ ಹಿನ್ನೆಲೆ ಡಬಲ್ ಡೆಕ್ಕರ್ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಪ್ರಚಾರದ ಕೊರತೆ: 11 ಮಂದಿ ಪ್ರಯಾಣ
ಶನಿವಾರ ಬೆಳಗ್ಗೆ8.30ರಲ್ಲಿ ನಗರದ ಜೆಎಲ್ಬಿ ರಸ್ತೆಯಲ್ಲಿನ ರಾಜ್ಯ ಪ್ರವಾಸೊದ್ಯಮ ಅಭಿವೃದ್ಧಿ ಇಲಾಖೆಯ ಮಯೂರ ಹೋಟೆಲ್ನಲ್ಲಿ ಸಂಚಾರ ಪುನಾರಂಭಿಸಿದ ಅಂಬಾರಿ ಬಸ್ (ಡಬಲ್ ಡೆಕ್ಕರ್) ನಗರದ ಪ್ರಮುಖ ಸ್ಥಳಗಳಾದ ಡಿ.ಸಿ.ಕಚೇರಿ,ಕುಕ್ಕರಹಳ್ಳಿಕೆರೆ, ಮೈಸೂರು ವಿಶ್ವವಿದ್ಯಾಲಯ, ರಾಮಸ್ವಾಮಿ ಸರ್ಕಲ್, ಸಂಸ್ಕೃತ ಪಾಠಶಾಲೆ,ಕೆ.ಆರ್. ಸರ್ಕಲ್, ದೊಡ್ಡ ಗಡಿಯಾರ, ಅರಮನೆ ದಕ್ಷಿಣ ದ್ವಾರ, ಹಾರ್ಡಿಂಜ್ ಸರ್ಕಲ್, ಮೃಗಾಲಯ,ಕಾರಂಜಿ ಕೆರೆ, ಸರ್ಕಾರಿ ಅತಿಥಿ ಗೃಹ, ಸಂತ ಫಿಲೋಮಿನಾ ಚರ್ಚ್, ಬನ್ನಿಮಂಟಪ, ಆಯುರ್ವೆದಿಕ್ ಆಸ್ಪತ್ರೆ ಸರ್ಕಲ್, ರೈಲ್ವೆ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಯಲ್ಲಿ ಮೂರು ಟ್ರಿಪ್ ಸಂಚಾರ ನಡೆಸಿತು. ದಿನದ ಮೊದಲ ಸುತ್ತಿನಲ್ಲಿ07ಮಂದಿ, 2ನೇ ಸುತ್ತಿನಲ್ಲಿ 04 ಮಂದಿ ಹಾಗೂ 3ನೇ ಸುತ್ತಿನಲ್ಲಿ ಖಾಲಿ ಬಸ್ ಸಂಚರಿಸಿದೆ. ಪ್ರಚಾರದ ಕೊರತೆ ಹಿನ್ನೆಲೆ ಹಾಗೂ ಪ್ರಾರಂಭದ ದಿನವಾಗಿದ್ದರಿಂದ ಪ್ರಯಾಣಿಕರ ಸಂಖ್ಯೆಕ್ಷೀಣಿಸಿದ್ದು, ಮುಂದಿನ ದಿನಗಳಲ್ಲಿ ಸಹಜ ಸಂಚಾರ ಆಗುವ ನಿರೀಕ್ಷೆ ಇದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.