Ram Mandir: ಹೂವುಗಳ ತ್ಯಾಜ್ಯವು ಗಂಧದಕಡ್ಡಿಯಾಗಿ ಬದಲಾಗುತ್ತೆ!
Team Udayavani, Jan 23, 2024, 12:27 AM IST
ಅಯೋಧ್ಯಾ: ಅಯೋಧ್ಯಾಧಾಮದಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠೆ ವೇಳೆ ಬಳಸಲಾದ ಭಾರೀ ಪ್ರಮಾಣದ ಹೂವುಗಳು ಒಂದೆರಡು ದಿನಗಳಲ್ಲೇ ಒಣಗಿ ಹೋಗಿ, ವ್ಯರ್ಥವಾಗುತ್ತವೆ ಎಂದು ಭಾವಿಸಿದ್ದೀರಾ? ಖಂಡಿತಾ ಇಲ್ಲ.
ಈ ಎಲ್ಲ ಹೂವುಗಳು ಕೆಲವೇ ದಿನಗಳಲ್ಲಿ ಸುಗಂಧ ಬೀರುವ ಗಂಧದ ಕಡ್ಡಿಗಳಾಗಿ ಬದಲಾಗಲಿವೆ. ಹೌದು, ಅಯೋಧ್ಯೆ ನಗರ ಪಾಲಿಕೆಯು ಹೂವುಗಳ ತ್ಯಾಜ್ಯಗಳನ್ನು ಸಂಸ್ಕರಿಸಿ, ಅವುಗಳಿಂದ ಅಗರಬತ್ತಿಗಳನ್ನು ತಯಾರಿಸುವ ಪ್ರಕ್ರಿಯೆ ಆರಂಭಿಸಿದೆ. ಅಂದಾಜಿನ ಪ್ರಕಾರ, ಅಯೋಧ್ಯಾಧಾಮದ ಎಲ್ಲ ದೇಗುಲಗಳಲ್ಲಿ 9 ಮೆಟ್ರಿಕ್ ಟನ್ನಷ್ಟು ಹೂವುಗಳ ತ್ಯಾಜ್ಯ ಸಂಗ್ರಹವಾಗುವ ನಿರೀಕ್ಷೆಯಿದೆ. ಈ ಪ್ರಕ್ರಿಯೆಯಿಂದ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಜತೆಗೆ, ಹೂವುಗಳ ಸಮರ್ಪಕ ಪುನರ್ಬಳಕೆಯೂ ಸಾಧ್ಯವಾಗಲಿದೆ.