Parliament: ಅರೆಕ್ಷಣ ಎಲ್ಲರೂ ಗಲಿಬಿಲಿಗೊಂಡೆವು- ನಳಿನ್ ಕುಮಾರ್
Team Udayavani, Dec 14, 2023, 12:13 AM IST
ಮಂಗಳೂರು: ಕಲಾಪ ನಡೆಯುತ್ತಿದ್ದಾಗಲೇ ಪ್ರೇಕ್ಷಕರ ಗ್ಯಾಲರಿಯಿಂದ ಒಮ್ಮಿಂದೊಮ್ಮೆಲೆ ಇಬ್ಬರು ಸದನಕ್ಕೆ ನುಗ್ಗಿದರು. ವ್ಯಕ್ತಿಯೊಬ್ಬ ಟೇಬಲ್ ಮೇಲಿನಿಂದ ಹಾರುತ್ತಾ ಬಂದಾಗ ನಾವು ಒಮ್ಮೆಗೆ ಗಲಿಬಿಲಿಗೊಂಡೆವು. ಅವರು ಏಕೆ ಹಾಗೆ ಮಾಡುತ್ತಿದ್ದಾರೆ ಎಂಬುದು ತತ್ಕ್ಷಣಕ್ಕೆ ಗೊತ್ತಾಗಲಿಲ್ಲ. ಆದರೆ ನಾವು ಯಾರೂ ಭಯ ಬೀಳಲಿಲ್ಲ. ಸಂಸದರೋರ್ವರು ಆತನನ್ನು ಹಿಡಿದುಕೊಂಡ ಕೂಡಲೇ ನಾನೂ ಸೇರಿಕೊಂಡೆ ಎಂದು ಸಂಸತ್ಗೆ ಆಗಂತುಕರು ನುಗ್ಗಿದಾಗ ಅವರನ್ನು ಹಿಡಿದ ಸಂಸದರ ಗುಂಪಿನಲ್ಲಿದ್ದ ದ.ಕ. ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು.
ಯುವಕನನ್ನು ಹಿಡಿದ ಕೂಡಲೇ ಕೆಲವು ಸಂಸದರು ಆತನಿಗೆ ನಾಲ್ಕೇಟು ಬಿಗಿದರು. ಅನಂತರ ಭದ್ರತಾ ಪಡೆಗಳಿಗೆ ಆತನನ್ನು ಒಪ್ಪಿ ಸಲಾಯಿತು ಎಂದು ನಳಿನ್ ಉದಯವಾಣಿಗೆ ತಿಳಿಸಿದರು.
ಆ ಗಲಾಟೆಯಲ್ಲಿ ಅವರು ಏನು ಬೊಬ್ಬೆ ಹಾಕುತ್ತಿದ್ದರೋ ತಿಳಿಯಲಿಲ್ಲ, ಮಾಹಿತಿ ಪ್ರಕಾರ ಅವರು ಸಿಆರ್ಪಿಸಿ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ್ದು, ಅದನ್ನು ಹಿಂಪಡೆಯಲು ಒತ್ತಾಯಿಸುತ್ತಿದ್ದ ಎಂದು ತಿಳಿದುಬಂದಿದೆ, ಮುಂದೆ ತನಿಖೆಯಲ್ಲಿ ಕಾರಣ ತಿಳಿಯಬಹುದು, ಸಂಸತ್ತಿನ ಒಳಗೆ ಇಬ್ಬರು ದುಷ್ಕರ್ಮಿ ಗಳು ಪ್ರವೇಶಿಸಿದ್ದರು ಎಂದು ತಿಳಿಸಿದರು.
ಒಬ್ಬ ಮೈಸೂರಿನವನು, ಸಹಜವಾಗಿ ಊರಿನವರು ಆಗ್ರಹಿಸಿದ ಹಿನ್ನೆಲೆಯಲ್ಲಿ ಪ್ರತಾಪ್ಸಿಂಹ ಅವರು ಆತನಿಗೆ ಪಾಸ್ ನೀಡಿರಬಹುದು ಎಂದು ನಳಿನ್ ತಿಳಿಸಿದರು.
ಕಲರ್ ಸ್ಪ್ರೆ ತಂದಿದ್ದು ಹೇಗೆ?
ಒಳಗೆ ದುಷ್ಕರ್ಮಿಗಳು ಧುಮುಕುತ್ತಿದ್ದಂತೆಯೇ ಶೂನಿಂದ ತೆಗೆದ ಕಲರ್ ಸ್ಪ್ರೆ ಬಿಟ್ಟರು, ಇದರಿಂದ ಅಲ್ಲಿ ಒಂದು ರೀತಿಯ ಘಾಟು ಆವರಿಸಿತು. ಹಿಂದೆ ಸಂಸತ್ತಿನಲ್ಲಿ ಶೂಗಳನ್ನೂ ತಪಾಸಣೆ ಮಾಡುತ್ತಿದ್ದರು, ಕೆಲವು ಸಮಯದಿಂದ ಸಂಸದರು ಕಿರಿಕಿರಿ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಶೂ ತಪಾಸಣೆ ಮಾಡುತ್ತಿರಲಿಲ್ಲ, ಇದೇ ಅವಕಾಶವನ್ನು ದುಷ್ಕರ್ಮಿಗಳು ಬಳಸಿಕೊಂಡಿರುವ ಸಾಧ್ಯತೆ ಇದೆ ಎನ್ನುತ್ತಾರೆ ನಳಿನ್.