iPhone: ಹ್ಯಾಕ್ ವಿವಾದ- ಆ್ಯಪಲ್ಗೆ ಸಂಸದೀಯ ಸಮಿತಿ ಸಮನ್ಸ್?
ಸಂಸತ್ನ ಸ್ಥಾಯಿ ಸಮಿತಿ ಮುಖ್ಯಸ್ಥರ ಸುಳಿವು
Team Udayavani, Nov 1, 2023, 8:53 PM IST
ನವದೆಹಲಿ: ಪ್ರತಿಪಕ್ಷಗಳ ಮುಖಂಡ ಪೈಕಿ ಕೆಲವರ ಆ್ಯಪಲ್ಫೋನ್ಗಳ ಮೇಲೆ ಕೇಂದ್ರ ಸರ್ಕಾರ ನಿಗಾ ವಹಿಸಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಆ್ಯಪಲ್ಗೆ ಸಮನ್ಸ್ ನೀಡುವ ಸಾಧ್ಯತೆಗಳು ಇವೆ. ಈ ಬಗ್ಗೆ “ನ್ಯೂಸ್18 ಚಾನೆಲ್ ಜತೆಗೆ ಮಾತನಾಡಿದ ಮಾಹಿತಿ ತಂತ್ರಜ್ಞಾನಕ್ಕಾಗಿನ ಸಂಸದೀಯ ಸ್ಥಾಯಿ ಸಮಿತಿ ಮುಖ್ಯಸ್ಥ ಪ್ರತಾಪ್ರಾವ್ ಜಾಧವ್ ಎಚ್ಚರಿಕೆ ಸಂದೇಶಗಳ ವಾಸ್ತವಂಶ ತಿಳಿದುಕೊಳ್ಳಲು ಆ್ಯಪಲ್ ಪ್ರತಿನಿಧಿಗಳನ್ನೇ ಪ್ರಶ್ನಿಸುವುದಕ್ಕಾಗಿ ಸಂಸ್ಥೆಗೆ ನೋಟಿಸ್ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಆದರೆ ಇನ್ನೂ ಯಾವುದೇ ನಿರ್ಣಯ ತೆಗೆದುಕೊಳ್ಳಲಾಗಿಲ್ಲ ಎಂದಿದ್ದಾರೆ.
ಸಂಸದ ಕಾರ್ತಿ ಚಿದಂಬರಂ ಸಂಸದೀಯ ಸ್ಥಾಯಿ ಸಮಿತಿಗೆ ಪತ್ರ ಬರೆದು ಎಚ್ಚರಿಕೆ ಬಂದಿರುವವರೆಲ್ಲರನ್ನೂ ಒಗ್ಗೂಡಿಸಿ ಸಭೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಇತ್ತ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಲೋಕಸಭೆ ಸ್ಪೀಕರ್ಗೆ ಪತ್ರ ಬರೆದು ಇದು ಸರ್ಕಾರವು ವಿಪಕ್ಷನಾಯಕರ ಮೇಲೆ ನಡೆಸಿರುವ ರಹಸ್ಯ ಕಣ್ಗಾವಲಿನ ದುಷ್ಪರಿಣಾಮ. ಹೀಗಾಗಿ, ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ಶಶಿತರೂರ್, ಕೆ.ಸಿ.ವೇಣುಗೋಪಾಲ್ ಸೇರಿದಂತೆ ಹಲವು ನಾಯಕರ ಆ್ಯಪಲ್ಫೋನ್ಗಳಿಗೆ ಎಚ್ಚರಿಕೆ ಸಂದೇಶ ರವಾನೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಕೇಂದ್ರಸರ್ಕಾರ ತನಿಖೆಗೆ ಆದೇಶ ನೀಡಿತ್ತು.