Politics: ಮಹುವಾ ಪರ ವಕೀಲರಿಗೆ ತರಾಟೆ
Team Udayavani, Oct 21, 2023, 1:01 AM IST
ಹೊಸದಿಲ್ಲಿ: ಅದಾನಿ ಗ್ರೂಪ್ ವಿರುದ್ಧ ಸಂಸತ್ನಲ್ಲಿ ಪ್ರಶ್ನೆ ಕೇಳಲು ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಹೈಕೋರ್ಟ್ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಪರ ವಕೀಲರನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ. ಸಂಸದರ ವಕೀಲ ಗೋಪಾಲ ಶಂಕರನಾರಾಯಣನ್ ಅವರು ಸುಪ್ರೀಂ ಕೋರ್ಟ್ ವಕೀಲ ಜೈ ಅನಂತ್ ದೇಹದ್ರಾಯ್ ಜತೆಗೆ ಸಂಧಾನ ಮಾಡಲು ಮುಂದಾಗಿದ್ದರು ಎಂಬ ಅಂಶಕ್ಕೆ ಸಂಬಂಧಿಸಿದಂತೆ ನ್ಯಾಯಪೀಠ ಕಟುವಾಗಿ ಟೀಕೆ ಮಾಡಿತು.
ಇದಾದ ಬಳಿಕ ಗೋಪಾಲ್ ಶಂಕರ ನಾರಾಯಣನ್ ಸಂಸದರ ಪರ ವಾದ ಮಂಡಿಸುವುದಿಲ್ಲ ಎಂದರು. “ಈ ಘಟನೆಯಿಂದ ನಿಜಕ್ಕೂ ನಮಗೆ ಆಘಾತವಾಗಿದೆ. ಪ್ರಸಿದ್ಧ ನ್ಯಾಯ ವಾದಿಯಾಗಿ ನೀವು ವೃತ್ತಿಯ ಘನತೆಯನ್ನು ಎತ್ತಿ ಹಿಡಿಯಬೇಕಾಗಿತ್ತು. ನೀವು 2ನೇ ಪ್ರತಿವಾದಿಯನ್ನು ಸಂಪರ್ಕಿಸಿದ್ದೀರಿ ಎಂಬ ವಿಚಾರವೇ ಅಚ್ಚರಿ ತರುವಂಥದ್ದು’ ಎಂದು ನ್ಯಾ| ಸಚಿನ್ ದತ್ತಾ ನೇತೃತ್ವದ ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿತು. ಪೀಠ ತರಾಟೆಗೆ ತೆಗೆದುಕೊಂಡ ಕೂಡಲೇ ಮಹುವಾ ಪರ ವಕೀಲರು ಪ್ರಕರಣದಿಂದ ಹಿಂದೆ ಸರಿಯುವುದಾಗಿ ಅರಿಕೆ ಮಾಡಿದರು.