Census: ಜಾತಿಗಣತಿ ಸ್ಲೋಗನ್ನಿಂದ ಹಿಂದೆಸರಿಯಿತೇ ಕಾಂಗ್ರೆಸ್?
Team Udayavani, Oct 24, 2023, 11:00 PM IST
ಬಿಹಾರದಲ್ಲಿ ಜಾತಿ ಗಣತಿ ವರದಿ ಬಿಡುಗಡೆಯಾದ ಬಳಿಕ ಪಂಚರಾಜ್ಯ ಚುನಾವಣೆಗಳು ಹಾಗೂ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇದನ್ನೇ “ಅಸ್ತ್ರ’ವಾಗಿ ಬಳಸಿಕೊಂಡು ಬಿಜೆಪಿಯನ್ನು ಎದುರಿಸಲು ಮುಂದಾಗಿದ್ದ ಕಾಂಗ್ರೆಸ್, ಈಗ ತನ್ನ ನಡೆಗೆ ತಾನೇ “ಬ್ರೇಕ್” ಹಾಕಿಕೊಂಡಿದೆ. ಅ.9ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಕಾಂಗ್ರೆಸ್ ನಾಯಕರು “ಜಾತಿಗಣತಿ” ಅಸ್ತ್ರದ ಪ್ರಯೋಗವನ್ನು ಕಡಿಮೆ ಮಾಡಿದ್ದಾರೆ.
ಬಿಹಾರ ಗಣತಿ ವರದಿ ಬಿಡುಗಡೆಯಾಗುತ್ತಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು “ಜಿತ್ನಾ ಆಬಾದಿ, ಉತ್ನಾ ಹಕ್” (ಜನಸಂಖ್ಯೆಗೆ ಅನುಗುಣವಾಗಿ ಹಕ್ಕುಗಳು) ಎಂಬ ಉದ್ಘೋಷ ಹೊರಡಿಸಿದ್ದರು. ಅಲ್ಲದೆ ಅನಂತರ ತಾವು ಹೋದ ಕಡೆಯಲ್ಲೆಲ್ಲ ಅವರು ಇದೇ ಸ್ಲೋಗನ್ ಪುನರುಚ್ಚರಿಸುತ್ತಾ, ದೇಶಾದ್ಯಂತ ಜಾತಿಗಣತಿ ನಡೆಸುವ ವಾಗ್ಧಾನವನ್ನೂ ನೀಡುತ್ತಿದ್ದರು. ಆದರೆ “ಜಾತಿಗಣತಿ” ಅಸ್ತ್ರವು ತಮಗೇ ತಿರುಗುಬಾಣವಾಗುವ ಲಕ್ಷಣಗಳು ಗೋಚರಿಸುತ್ತಿದ್ದಂತೆ ಕಾಂಗ್ರೆಸ್ ಉಲ್ಟಾ ಹೊಡೆದಿದೆ. ಅ.9ರ ಸಿಡಬ್ಲ್ಯುಸಿ ಸಭೆಯಲ್ಲಿ ಪಕ್ಷದ ಅನೇಕರು ಈ ಸ್ಲೋಗನ್ ಬಗ್ಗೆ ಆಕ್ಷೇಪವೆತ್ತಿದ್ದಾರೆ ಎನ್ನಲಾಗಿದೆ. ಈ ನಡೆಯು ದಕ್ಷಿಣದ ರಾಜ್ಯಗಳಲ್ಲಿ ಕಾಂಗ್ರೆಸ್ಗೆ ಹೊಡೆತ ನೀಡಬಹುದು ಎಂದು ಕೆಲವು ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೇ ಕಾಂಗ್ರೆಸ್ ಈಗ ಜಾತಿಯ ವಿಚಾರವಿಟ್ಟುಕೊಂಡು ಹೋರಾಟ ಆರಂಭಿಸಿದರೆ, ಬಿಜೆಪಿಯು ಧರ್ಮದ ಮಾನದಂಡದಲ್ಲಿ ಹೋರಾಟ ಶುರುವಿಟ್ಟುಕೊಂಡರೆ ಏನು ಮಾಡುವುದು ಎಂಬ ಪ್ರಶ್ನೆಯನ್ನೂ ಕೆಲವರು ಹಾಕಿದ್ದಾರೆ. ಆರಂಭದಲ್ಲೇ ಕಾಂಗ್ರೆಸ್ ಹಿರಿಯ ನಾಯಕ ಅಭಿಷೇಕ್ ಮನು ಸಿಂ Ì ಅವರು ಟ್ವೀಟ್(ಎಕ್ಸ್) ಮಾಡಿ, ಜಾತಿಗಣತಿಯ ಪ್ರತಿಕೂಲ ಪರಿಣಾಮಗಳ ಬಗ್ಗೆ ಎಚ್ಚರಿಸಿ, ಅನಂತರ ಟ್ವೀಟ್ ಡಿಲೀಟ್ ಮಾಡಿದ್ದರು. ಈ ಎಲ್ಲ ಬೆಳವಣಿಗೆಗಳ ಬಳಿಕ ಈ ವಿಚಾರದಲ್ಲಿ ತತ್ಕ್ಷಣ ಮುಂದಡಿ ಇಡದಂತೆ ಹಾಗೂ ಸ್ಲೋಗನ್ ಬಳಕೆ ಕಡಿಮೆಮಾಡುವಂತೆ ಪಕ್ಷದ ನಾಯಕರಿಗೆ ಹೈಕಮಾಂಡ್ನಿಂದ ಸೂಚನೆ ರವಾನೆಯಾಗಿದೆ ಎಂದು ಹೇಳಲಾಗಿದೆ.