JDS: ನಾನು ಸ್ಪರ್ಧಿಸುವುದಿಲ್ಲ, ಪ್ರಜ್ವಲ್ ಸ್ಪರ್ಧೆ ಖಚಿತ: ದೇವೇಗೌಡ
ಕುಮಾರಸ್ವಾಮಿ ಕೇಂದ್ರ ಸಚಿವರಾಗುವ ವಿಚಾರ ನನಗೆ ಗೊತ್ತಿಲ್ಲ
Team Udayavani, Jan 14, 2024, 12:03 AM IST
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು, ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವುದನ್ನೂ ಖಚಿತಪಡಿಸಿದ್ದಾರೆ.
ಅಷ್ಟೇ ಅಲ್ಲದೆ, ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾಗುವ ವಿಚಾರ ನನಗೆ ಗೊತ್ತಿಲ್ಲ. ನನ್ನ ಮುಂದೆ ಚರ್ಚೆ ಆಗಿಲ್ಲ. ಆದರೆ ಪ್ರಧಾನಿ ಮೋದಿ ಹೃದಯದಲ್ಲಿ ಏನಿದೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.
ಜೆ.ಪಿ. ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೀಗ 92 ವರ್ಷ ಪ್ರಾಯ. ರಾಜ್ಯಸಭೆಯಲ್ಲಿ ಇನ್ನೂ ಎರಡೂವರೆ ವರ್ಷ ಸದಸ್ಯನಾಗಿರುತ್ತೇನೆ. ಲೋಕಸಭೆಗೆ ನಾನಂತೂ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮೋದಿ ಯೋಜನೆ ಯಾರಿಗೂ ತಿಳಿಯದು
ಜ.17ರಂದು ದಿಲ್ಲಿಯಲ್ಲಿ ಸಭೆ ನಿಗದಿಯಾದರೆ, ಜ.16ರಂದೇ ನಾವಿಲ್ಲಿ ಸಭೆ ನಡೆಸುತ್ತೇವೆ. ಕ್ಷೇತ್ರಗಳ ಹಂಚಿಕೆ, ಕುಮಾರಸ್ವಾಮಿ ಸ್ಪರ್ಧೆ ಇತ್ಯಾದಿ ವಿಚಾರವಾಗಿ ಚರ್ಚಿಸುತ್ತೇವೆ. ಪ್ರಧಾನಿ ಮೋದಿಯವರ ಕ್ರಿಯಾಯೋಜನೆ ಹೇಗಿರುತ್ತದೆ ಎಂಬುದು ಅವರ ಸಹೋದ್ಯೋಗಿಗಳು ಸಹಿತ ಯಾರಿಗೂ ತಿಳಿಯುವುದಿಲ್ಲ. ಮೊದಲ ಬಾರಿ ಶಾಸಕರಾದವರನ್ನೇ ಮುಖ್ಯಮಂತ್ರಿ ಮಾಡಿದವರು ಅವರು ಎಂದು ಹೇಳಿದರು.
ಬಿಜೆಪಿ ಪರ ಪ್ರಚಾರ
ಪ್ರಜ್ವಲ್ ಸ್ಪರ್ಧೆ ವಿಚಾರವಾಗಿ ಅನುಮಾನ ಬೇಡ. ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಮೋದಿ ಕೂಡ ಆಶೀರ್ವಾದ ಮಾಡುತ್ತಾರೆ. ನನ್ನ ಆಶೀರ್ವಾದವೂ ಇದೆ. ಕುಮಾರಸ್ವಾಮಿ ಆಶೀರ್ವಾದವೂ ಇರಲಿದೆ. ನನಗೂ ವಯಸ್ಸಾಗಿದೆ. ಆದರೂ ಮಾತನಾಡುವ ಶಕ್ತಿ ಇದೆ, ನೆನಪಿನ ಶಕ್ತಿ ಇದೆ. ಪ್ರವಾಸ ಮಾಡುತ್ತೇನೆ. ಎಲ್ಲೆಲ್ಲಿ ಅಗತ್ಯ ಇದೆಯೋ ಅಲ್ಲೆಲ್ಲ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಮೋದಿಗೆ ಪೂರ್ವಜನ್ಮದ ಪುಣ್ಯವಿದೆ
ಅಯೋಧ್ಯೆಯಲ್ಲಿ ದೇವಸ್ಥಾನ ಒಡೆದು ಹೋಗಿ ಬಹಳ ವರ್ಷವಾಗಿದೆ. ಈಗ ದೇವಸ್ಥಾನ ಆಗಿದೆ. ಐದೂವರೆ ಅಡಿ ಎತ್ತರದ ರಾಮಲಲ್ಲಾ ಪ್ರತಿಮೆ ಸ್ಥಾಪನೆಗಾಗಿ 11 ದಿನಗಳ ಉಪವಾಸವನ್ನು ಪ್ರಧಾನಿ ಮೋದಿ ಕೈಗೊಂಡಿದ್ದಾರೆ. ರಾಜಕೀಯವಾಗಿ ನಾನೂ 9 ದಿನ ಉಪವಾಸ ಮಾಡಿದ್ದೆ. ಅದು ಬೇರೆ. ಆದರೆ, ದೇವರ ಪೂಜೆ ವೇಳೆ 1 ದಿನ ಉಪವಾಸ ಮಾಡಿದ್ದೆನಷ್ಟೆ. ಮೋದಿ ಬಗ್ಗೆ ಉತ್ಪ್ರೇಕ್ಷೆ ಮಾಡುವುದಿಲ್ಲ. ಆದರೆ ಇಷ್ಟು ಕಟ್ಟುನಿಟ್ಟಾಗಿ, ನಿಯಮಬದ್ಧವಾಗಿ, ಶಾಸ್ತ್ರಬದ್ಧವಾಗಿ ವ್ರತ ಕೈಗೊಂಡಿರುವ ಅವರದ್ದು ಪೂರ್ವ ಜನ್ಮದ ಪುಣ್ಯ. ಕೇದಾರನಾಥದಲ್ಲಿ ತಪಸ್ಸು ಕೈಗೊಂಡಿದ್ದರು. ಇವೆಲ್ಲ ದೈವ ನಿಯಾಮಕ ಎಂದು ಹೊಗಳಿದರು.
ನಾನೂ ಅಯೋಧ್ಯೆಗೆ ಹೋಗುತ್ತೇನೆ
ನನಗೆ ಆರೋಗ್ಯ ಕೆಟ್ಟಾಗ ಮಗಳು ಅನಸೂಯಾ ಪ್ರತಿ ಶನಿವಾರಗಳಂದು ಆಂಜನೇಯ ಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಿಸುತ್ತಿದ್ದಳು. ನನಗೆ ನಂಬಿಕೆ ಇದೆ. ಜ.22ರಂದು ಶೇ.99ರಷ್ಟು ನಾನು ಅಯೋಧ್ಯೆಗೆ ಹೋಗುತ್ತೇನೆ. ನನ್ನ ಪತ್ನಿಯನ್ನೂ ಕರೆದುಕೊಂಡು ಹೋಗಬೇಕೆಂದಿದ್ದೇನೆ. ಸಿಎಂ ಸಿದ್ದರಾಮಯ್ಯ ಕೂಡ ಅಯೋಧ್ಯೆಗೆ ಹೋಗುತ್ತೇನೆ ಎಂದಿದ್ದಾರೆ. ಆದರೆ ಅವರ ಪಕ್ಷ ತೀರ್ಮಾನ ಮಾಡಿರುವುದರಿಂದ ಆ ದಿನವೇ ಹೋಗುವುದಿಲ್ಲ ಎಂದಿದ್ದಾರೆ. ಅವರ ಸರಕಾರ ಕರ್ನಾಟಕದ ಎಲ್ಲ ಮುಜರಾಯಿ ದೇವಸ್ಥಾನಗಳಲ್ಲೂ ಅಂದು ವಿಶೇಷ ಪೂಜೆಗೆ ಆದೇಶಿಸಿದ್ದು, ಇದನ್ನು ಶ್ಲಾ ಸುತ್ತೇನೆ. ಮೃದು ಹಿಂದುತ್ವ, ಕಠಿನ ಹಿಂದುತ್ವ ಅಂತೆಲ್ಲ ಏನಿಲ್ಲ. ಗುಣಕ್ಕೆ ನನ್ನಲ್ಲಿ ಮತ್ಸರವಿಲ್ಲ. ಇತ್ತೀಚೆಗೆ ಅವರ ಸರಕಾರ ಯುವನಿಧಿಗೆ ಚಾಲನೆ ನೀಡಿದೆ. ಆದಷ್ಟು ಬೇಗ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲಿ. ಮೊದಲ ಕಂತಿನ ಹಣದಲ್ಲಿ ಈ ಯುವಕರು ಅಯೋಧ್ಯೆಗೆ ಹೋಗಿ ಬರಲಿ ಎಂದು ಆಶಿಸಿದರು.