RBI: ಏರುಗತಿಯಲ್ಲೇ ಇರಲಿದೆ ಬಡ್ಡಿದರ: ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುಳಿವು
Team Udayavani, Oct 20, 2023, 10:08 PM IST
ನವದೆಹಲಿ: ಬ್ಯಾಂಕ್ನ ಬಡ್ಡಿ ದರಗಳು ಮುಂದಿನ ಕೆಲವು ಸಮಯದ ವರೆಗೆ ಏರುಗತಿಯಲ್ಲಿಯೇ ಮುಂದುವರಿಯುವ ಸಾಧ್ಯತೆಯನ್ನು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೀಡಿದ್ದಾರೆ. ಹಣದುಬ್ಬರ ನಿಯಂತ್ರಣದಲ್ಲಿಯೇ ಇರಿಸುವ ನಿಟ್ಟಿನಲ್ಲಿ ಆರ್ಬಿಐ ಅದರತ್ತ “ಅರ್ಜುನನ ಕಣ್ಣಿನ’ ದೃಷ್ಟಿಯನ್ನೇ ಇರಿಸಿದೆ ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಆರ್ಬಿಐ ಗವರ್ನರ್ “ಶೇ.4ರ ಬಡ್ಡಿದರದಲ್ಲಿ ಹಣದುಬ್ಬರ ಇರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದೇವೆ. ಇದರ ಜತೆಗೆ ಅದನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಿದ್ಧರಾಗಿದ್ದೇವೆ’ ಎಂದರು. “ಏರಿಕೆ ಹಂತದಲ್ಲಿಯೇ ಬಡ್ಡಿದರ ಮುಂದುವರಿಯಲಿದೆ. ಅದು ಎಲ್ಲಿಯ ವರೆಗೆ ಮುಂದುವರಿಯಲಿದೆ ಎಂದು ಸಮಯವೇ ನಿರ್ಧರಿಸಲಿದೆ’ ಎಂದರು ಶಕ್ತಿಕಾಂತ ದಾಸ್.
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಿಂದಾಗಿ ಜಗತ್ತಿನ ಪ್ರಮುಖ ಅರ್ಥ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ. ಕಚ್ಚಾ ತೈಲದ ಬೆಲೆಯೂ ಏರಿಕೆಯಾಗಿದೆ. ದೇಶದ ಅರ್ಥ ವ್ಯವಸ್ಥೆಯ ತಳಹದಿ ಭದ್ರವಾಗಿದೆ ಎಂದು ಶಕ್ತಿಕಾಂತ ದಾಸ್ ಅವರು ಹೇಳಿದ್ದಾರೆ. ಇದರ ಹೊರತಾಗಿಯೂ ಪ್ರತಿಕೂಲ ಪರಿಸ್ಥಿತಿ ಎದುರಿಸಲು ಸಿದ್ಧತೆ ಮಾಡಿಕೊಳ್ಳಲೇಬೇಕಾಗುತ್ತದೆ ಎಂದರು.