ಅಂತಾರಾಷ್ಟ್ರೀಯ ರಾಜತಾಂತ್ರಿಕತೆಗೆ ಬೇಕಿದೆ ದೇಶೀ ಚಿಂತನೆ: ಜೈಶಂಕರ್
Team Udayavani, Nov 26, 2023, 7:55 PM IST
ಪುಣೆ: ಅಂತಾರಾಷ್ಟ್ರೀಯ ರಾಜತಾಂತ್ರಿಕ ಬಾಂಧವ್ಯಗಳಲ್ಲಿ ಪಾಶ್ಚಿಮಾತ್ಯ ಚಿಂತನೆಗಿಂತ ದೇಶೀಯ ವಿಚಾರ, ಭಾವನೆಯನ್ನೇ ಮುಂದಿಟ್ಟುಕೊಂಡು ವ್ಯವಹರಿಸಬೇಕು ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ಪುಣೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದುವರೆಗೆ ನಮ್ಮ ದೇಶ ಹೊಂದಿರುವ ಅಂತಾರಾಷ್ಟ್ರೀಯ ಬಾಂಧವ್ಯದ ಯೋಚನೆಗಳೆಲ್ಲವೂ ಪಾಶ್ಚಾತ್ಯ ರಾಷ್ಟ್ರಗಳನ್ನು ಕೇಂದ್ರೀಕರಿಸಿ ನಡೆಸಲಾಗುತ್ತಿತ್ತು. ಮುಂದಿನ ದಿನಗಳಿಗೆ ಅನ್ವಯವಾಗುವಂತೆ ಅದನ್ನು ದೇಶದ ಸಂಸ್ಕೃತಿ, ವಿಚಾರಧಾರೆಗಳ ಮೂಲಕ ಅಂತಾರಾಷ್ಟ್ರೀಯ ಬಾಂಧವ್ಯ ಮತ್ತು ರಾಜತಾಂತ್ರಿಕ ನಡೆಗಳನ್ನು ಪುನರ್ ರೂಪಿಸುವ ಅಗತ್ಯವಿದೆ ಎಂದರು.
ಹಲವು ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಸ್ಥಿತ್ಯಂತರಗಳಾಗುತ್ತಿವೆ. ಇತರ ದೇಶದ ಮುಖಂಡರೆಲ್ಲ ಯಾರು, ಯಾವ ಅಂಶಗಳನ್ನಿಟ್ಟುಕೊಂಡು ಮಾತನಾಡುತ್ತಾರೆ, ಅವರ ಉದ್ದೇಶಗಳೇನು ಎನ್ನುವುದು ಪ್ರಮುಖವಾಗುತ್ತದೆ. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಇಂಥ ನಿರೂಪಣೆಯನ್ನು ರೂಡಿಸಿಕೊಳ್ಳುವಲ್ಲಿ ನಾವು ಯಶಸ್ವಿಯಾಗಿಲ್ಲ. ಅಮೆರಿಕದ ಜತೆಗೆ ಚೀನಾ ತನ್ನ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಮಾತುಕತೆ ನಡೆಸಿದಂತೆ, ಭಾರತ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ನಿರೂಪರಣೆ ರೂಢಿಸಿಕೊಳ್ಳಬೇಕಾಗಿದೆ ಎಂದು ಸಚಿವ ಜೈಶಂಕರ್.