ಅಕ್ರಮ-ಸಕ್ರಮ ನಮೂನೆ- 57 ಅರ್ಜಿ ವಿಲೇವಾರಿ ವಿಳಂಬ !
Team Udayavani, Jun 20, 2020, 10:24 AM IST
ಸಾಂದರ್ಭಿಕ ಚಿತ್ರ
ಪುತ್ತೂರು: ಅನಧಿಕೃತ ಸಾಗುವಳಿ ಸಕ್ರಮಕ್ಕೆ ನಮೂನೆ-57ರಲ್ಲಿ ಸಲ್ಲಿಸಿರುವ ಅರ್ಜಿಗಳ ವಿಲೇವಾರಿ ಮಾಡಲು ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ಅವಧಿ ಅಪೂರ್ಣಗೊಂಡಿರುವುದು ತೊಡಕಾಗಿದ್ದು, ಸಮಸ್ಯೆ ಪರಿಹರಿಸುವಲ್ಲಿ ಸರಕಾರ ಮೀನ-ಮೇಷ ಎಣಿಸುತ್ತಿರುವ ಕಾರಣ ಅರ್ಜಿ ವಿಲೇವಾರಿ ಪ್ರಕ್ರಿಯೆ ವಿಳಂಬವಾಗಿದೆ..!
ಅವಧಿ ಅಪೂರ್ಣ ಕಾರಣ
2019ರ ಮಾ. 16ಕ್ಕೆ ಅರ್ಜಿ ಸಲ್ಲಿಕೆಗೆ ಕೊನೆ ದಿನ ನಿಗದಿಪಡಿಸಿ ಸರಕಾರ ಸುತ್ತೋಲೆ ಹೊರಡಿಸಿತ್ತು. ಮಾ. 10ರಿಂದ ಲೋಕಸಭಾ ಚುನಾವಣ ನೀತಿ ಸಂಹಿತೆ ಜಾರಿಗೊಂಡ ಕಾರಣ ಕೊನೆಯ 6 ದಿನ ಅರ್ಜಿ ಸಲ್ಲಿಸಲು ಅಡ್ಡಿಯಾಗಿತ್ತು. ಇದರಿಂದ ಮಾ. 16 ಕೊನೆಯ ದಿನಾಂಕವೆಂದು ಪರಿಗಣಿಸಲು ಸಾಧ್ಯವಾಗದೆ ಇಡೀ ಪ್ರಕ್ರಿಯೆಯೆ ಅರ್ಧಕ್ಕೆ ನಿಂತುಬಿಟ್ಟಿತ್ತು. ಸರಕಾರ ಕಾಯ್ದೆಗೆ ತಿದ್ದುಪಡಿ ತಂದು, ಹೊಸ ಅಂತಿಮ ದಿನಾಂಕ ನಿಗದಿಪಡಿಸಿದ ಬಳಿಕವೇ ಸಮಿತಿ ಅರ್ಜಿ ವಿಲೇ ಮಾಡಲು ಸಾಧ್ಯ ಎನ್ನುತ್ತಾರೆ ಅಧಿಕಾರಿಗಳು. ಆದರೆ ಆರು ತಿಂಗಳ ಹಿಂದೆಯೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದ ಸರಕಾರ ಕಾಯ್ದೆ ತಿದ್ದುಪಡಿ ಪ್ರಯತ್ನ ಮಾಡಿಲ್ಲ.
ಸಕ್ರಮಕ್ಕೆ 2.34 ಲಕ್ಷ ಎಕರೆ
ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ 2.34 ಲಕ್ಷ ಎಕರೆ ಅನಧಿಕೃತ ಸಾಗುವಳಿ ಸಕ್ರಮಕ್ಕೆ 1,26,576 ಅರ್ಜಿ ಸಲ್ಲಿಕೆಯಾಗಿವೆ. ದ.ಕ. ಜಿಲ್ಲೆಯಲ್ಲಿ 1,58,816.89 ಎಕರೆ ಸಾಗುವಳಿ ಸಕ್ರಮಕ್ಕೆ 88,549 ಅರ್ಜಿ ಮತ್ತು ಉಡುಪಿ ಜಿಲ್ಲೆಯಲ್ಲಿ 76,013.36 ಎಕರೆ ಸಕ್ರಮಕ್ಕೆ 38,027 ಅರ್ಜಿ ಸಲ್ಲಿಸಲಾಗಿದೆ.
ಸರಕಾರ ಕ್ರಮ
ನಮೂನೆ-57ರಲ್ಲಿ ಅರ್ಜಿ ಸಲ್ಲಿಕೆ ಸಂದರ್ಭ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಆದ ಕಾರಣ ಅರ್ಜಿ ಸಲ್ಲಿಕೆಯ ಕೊನೆಯ ಅವಧಿ ಪೂರ್ಣಗೊಂಡಿರಲಿಲ್ಲ. ಕಾಯ್ದೆಗೆ ತಿದ್ದುಪಡಿ ತಂದು ಅರ್ಜಿ ಮರು ಸ್ವೀಕಾರದ ಬಳಿಕ ವಿಲೇ ಪ್ರಕ್ರಿಯೆ ನಡೆಸಲು ಸರಕಾರ ಕ್ರಮ ಕೈಗೊಳ್ಳಲಿದೆ.
-ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ, ದ.ಕ.