ಪದೋನ್ನತಿಯಲ್ಲಿ ಮೀಸಲು ರದ್ದು ಮಾಡುವುದು ಕಷ್ಟ
Team Udayavani, Apr 2, 2022, 7:20 AM IST
ಹೊಸದಿಲ್ಲಿ: ಸರಕಾರಿ ಉದ್ಯೋಗದಲ್ಲಿ ಎಸ್ಸಿ/ಎಸ್ಟಿಗಳಿಗೆ ಪದೋನ್ನತಿ ನೀಡಲು ಇರುವ ಮೀಸಲು ವ್ಯವಸ್ಥೆ ರದ್ದು ಮಾಡಲು ಮುಂದಾದರೆ ಪ್ರತಿಕೂಲ ಪರಿಣಾಮ ಉಂಟಾದೀತು. ಜತೆಗೆ ಉದ್ಯೋಗಿಗಳಲ್ಲಿ ತಳಮಳ, ಅಶಾಂತಿ ಮತ್ತು ಹೆಚ್ಚಿನ ರೀತಿಯ ಕಾನೂನು ಹೋರಾಟಕ್ಕೆ ದಾರಿ ಮಾಡಿ ಕೊಟ್ಟಂತೆ ಆದೀತು ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ಗೆ ಶುಕ್ರವಾರ ಅರಿಕೆ ಮಾಡಿಕೊಂಡಿದೆ.
ನ್ಯಾ| ಎಲ್. ನಾಗೇಶ್ವರ ರಾವ್ ಮತ್ತು ನ್ಯಾ| ಬಿ.ಆರ್.ಗವಾಯಿ ಅವರ ನ್ನೊಳಗೊಂಡ ನ್ಯಾಯಪೀಠದ ಮುಂದೆ ಕೇಂದ್ರ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಅಂಶವನ್ನು ಪ್ರಸ್ತಾವಿಸಲಾಗಿದೆ. ಸುಪ್ರೀಂ ಕೋರ್ಟ್ ನೀಡಿದ ಸೂಚನೆ ಮತ್ತು ಸಂವಿಧಾನದ ವ್ಯಾಪ್ತಿಗೆ ಒಳಪಟ್ಟು ಮೀಸಲು ವ್ಯವಸ್ಥೆ ಇದೆ. ಪದೋನ್ನತಿಯಲ್ಲಿ ಇರುವ ಮೀಸಲು ವ್ಯಸ್ಥೆಯನ್ನು ತೆಗೆದು ಹಾಕಿದರೆ ವಿನಾಕರಣ ಕಾನೂನು ಖಟ್ಲೆಗಳು ಹೆಚ್ಚಲಿವೆ.
ಈಗಾಗಲೇ ನಿವೃತ್ತರಾದವರಿಗೆ ಪಾವತಿ ಮಾಡುತ್ತಿರುವ ಪಿಂಚಣಿ, ಹಾಲಿ ಇರುವವರ ವೇತನ ಪುನರ್ ನಿಗದಿ ಸೇರಿದಂತೆ ಹಲವು ಅಂಶಗಳ ಇತ್ಯರ್ಥಕ್ಕೆ ಸಂಕಷ್ಟಮಯ ಸನ್ನಿವೇಶಕ್ಕೆ ಕಾರಣವಾಗುತ್ತದೆ ಎಂದು ಕೇಂದ್ರ ಸರಕಾರ ಅರಿಕೆ ಮಾಡಿಕೊಂಡಿದೆ. ಮೀಸಲು ನೀಡುವುದರಿಂದ ಆಡಳಿತ ವ್ಯವಸ್ಥೆಗೆ ಧಕ್ಕೆಯಾಗುವುದಿಲ್ಲ.
ಸರಕಾರಿ ಉದ್ಯೋಗದ ವ್ಯವಸ್ಥೆಯಲ್ಲಿ ಎಸ್ಸಿ/ಎಸ್ಟಿ ಸಮುದಾಯಕ್ಕೆ ಸೇರಿದವರ ಪ್ರಾತಿನಿಧ್ಯ ಅಸಮರ್ಪಕವಾಗಿದೆ ಎಂದೂ ಸರಕಾರ ಹೇಳಿಕೊಂಡಿದೆ.