ಖೇಲ್ ರತ್ನಕ್ಕೆ ಶ್ರೀಜೇಶ್, ದೀಪಿಕಾ ಹೆಸರು ಶಿಫಾರಸು
Team Udayavani, Jun 26, 2021, 11:41 PM IST
ಹೊಸದಿಲ್ಲಿ: ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಾಗಿ “ಹಾಕಿ ಇಂಡಿಯಾ’ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ಮತ್ತು ಮಾಜಿ ಆಟಗಾರ್ತಿ ದೀಪಿಕಾ ಹೆಸರನ್ನು ಶಿಫಾರಸು ಮಾಡಿದೆ.
ಮೂವರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಇವರೆಂದರೆ ಹರ್ಮನ್ಪ್ರೀತ್ ಸಿಂಗ್, ವಂದನಾ ಕಟಾರಿಯಾ ಮತ್ತು ನವಜೋತ್ ಕೌರ್. ಜೀವಮಾನದ ಸಾಧನೆಗಾಗಿ ನೀಡಲಾಗುವ ಮೇಜರ್ ಧ್ಯಾನ್ಚಂದ್ ಪ್ರಶಸ್ತಿಗೆ ಡಾ| ಆರ್.ಪಿ. ಸಿಂಗ್ ಮತ್ತು ಮೆಕ್ ಸಂಗಾಯ್ ಇಬೆಮಾಲ್ ಅವರ ಹೆಸರನ್ನು ಶಿಫಾರಸು ಮಾಡಿದೆ. ಕೋಚ್ಗಳಾದ ಬಿ.ಜೆ. ಕಾರ್ಯಪ್ಪ ಮತ್ತು ಸಿ.ಆರ್. ಕುಮಾರ್ ಅವರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಸೂಚಿಸಲಾಗಿದೆ.
ಖೇಲ್ ರತ್ನ ಪ್ರಶಸ್ತಿಗಾಗಿ 2017ರ ಜನವರಿ ಒಂದರಿಂದ 2020ರ ಡಿಸೆಂಬರ್ 31ರ ವರೆಗಿನ ಸಾಧನೆಗಳನ್ನು ಪರಿಗಣಿಸಲಾಗುತ್ತದೆ.
ಶ್ರೀಜೇಶ್ಗೆ ಈಗಾಗಲೇ ಅರ್ಜುನ (2015) ಮತ್ತು ಪದ್ಮಶ್ರೀ (2017) ಪ್ರಶಸ್ತಿ ಒಲಿದು ಬಂದಿದೆ. ದೀಪಿಕಾ 2018ರ ಏಶ್ಯಾಡ್ ಮತ್ತು ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಕೂಟದಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದೊಪ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.