ಕಳೆ ಕೀಳಲು ಸಿಗುತ್ತಿಲ್ಲ ಕೂಲಿಯಾಳು! ಹತ್ತಿ-ತೊಗರಿ ಬೆಳೆಗಾರರು ಕಂಗಾಲು
Team Udayavani, Sep 3, 2020, 4:32 PM IST
ರಾಯಚೂರು: ಈ ಬಾರಿ ಅಗತ್ಯಕ್ಕಿಂತ ಹೆಚ್ಚು ಮಳೆಯಾಗಿರುವುದು ರೈತಾಪಿ ವರ್ಗವನ್ನು ಕಂಗೆಡಿಸಿದರೆ ಕೂಲಿ ಕಾರ್ಮಿಕರಿಗೆ ಶುಕ್ರದೆಸೆ ತಿರುಗುವಂತೆ ಮಾಡಿದೆ. ಲಾಕ್ಡೌನ್ನಿಂದ ಎಲ್ಲೆಡೆ ಕೆಲಸವಿಲ್ಲದೇ ಪರದಾಟ ಎದುರಾದರೆ; ಹೊಲದಲ್ಲಿ ಬೆಳೆದ ಕಳೆ ಕೀಳಲು ಕೂಲಿಯಾಳುಗಳೇ ಸಿಗದ ಸ್ಥಿತಿ ನಿರ್ಮಾಣವಾಗಿದೆ.
ಈ ಬಾರಿ ವಾಡಿಕೆಗಿಂತ ಶೇ.30 ಮಳೆ ಹೆಚ್ಚಾಗಿದೆ. ಇದರಿಂದ ಬೆಳೆ ಜತೆಗೆ ಹೊಲಗಳಲ್ಲಿ ಕಳೆ ಕೂಡ ಅಷ್ಟೇ ಪ್ರಮಾಣದಲ್ಲಿ ಬಂದಿದೆ. ಕಳೆ ಕೀಳಲು ಸಕಾಲಕ್ಕೆ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಇದೇ ಕಾರಣಕ್ಕೆ ಕೆಲ ರೈತರು ಬಿತ್ತನೆ ಮಾಡಿದ ಬೆಳೆಯನ್ನೇ ನಾಶ ಮಾಡುತ್ತಿದ್ದಾರೆ. ಈ ಬಾರಿ ಮುಂಗಾರು ಪ್ರವೇಶ ನಿರೀಕ್ಷೆಗಿಂತ ಮುಂಚಿತವಾಗಿಯೇ ಆಯಿತು. ಇದರಿಂದ ರೈತರು ತರಾತುರಿಯಲ್ಲಿ ಹತ್ತಿ, ತೊಗರಿ ಬಿತ್ತನೆ ಮಾಡಿದ್ದಾರೆ.
ಖುಷ್ಕಿ ಪ್ರದೇಶದಲ್ಲಿ ಈ ಬಾರಿ ಶೇ.115 ಬಿತ್ತನೆ ಮಾಡಲಾಗಿದೆ. 1,74,064 ಹೆಕ್ಟೇರ್ ಖುಷ್ಕಿ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, 2,06,215 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. 85,259 ಹೆಕ್ಟೇರ್ ಖುಷ್ಕಿ, 40,906 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಿದ್ದರೆ, 75,496 ಹೆಕ್ಟೇರ್ ಖುಷ್ಕಿ, 5,951 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ.
ಕಾಲಕಾಲಕ್ಕೆ ಕಳೆ ಕೀಳದಿದ್ದಲ್ಲಿ ಫಸಲು ಉತ್ತಮವಾಗಿ ಬರುವುದಿಲ್ಲ. ಇದರಿಂದ ಇಳುವರಿ ಕುಂಠಿತವಾಗುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ರೈತರು ಕೂಲಿ ಕಾರ್ಮಿಕರು ಕೇಳಿದಷ್ಟು ಹಣ ನೀಡಲು ಮುಂದಾಗುತ್ತಿದ್ದಾರೆ.
ಈ ಬಾರಿ 250 ರೂ.: ಈ ಬಾರಿ ಮಹಿಳೆಯರಿಗೆ ದಿನಕ್ಕೆ 250 ರೂ. ಕೂಲಿ ನೀಡಲಾಗುತ್ತಿದೆ. ನಮ್ಮ ಕೃಷಿ ಬದುಕಿನ ಅನುಭವದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದುಬಾರಿ ಕೂಲಿ ನೀಡುತ್ತಿರುವುದು ಎನ್ನುತ್ತಾರೆ ರೈತಾಪಿ ವರ್ಗದವರು. ಕಳೆದ ವರ್ಷ 200 ರೂ. ನೀಡಿದ್ದೇ ಹೆಚ್ಚಾಗಿತ್ತು. ಆದರೆ, ಈ ವರ್ಷ ಹಣ ನೀಡಲು ಮುಂದಾದರೂ ಕೂಲಿಯಾಳುಗಳು ಸಿಗುತ್ತಿಲ್ಲ. ಹೀಗಾಗಿ ಹಣದ ಮುಖ ನೋಡುವಂತಿಲ್ಲ. ಕಾಲಕ್ಷೇಪ ಮಾಡಿದರೆ ಕಣ್ಣೆದುರೇ ಬೆಳೆ ಹಾಳಾಗುತ್ತಲ್ಲ ಎಂದು ಕೊರಗುತ್ತಾರೆ ರೈತರು.
ಅದಲು-ಬದಲು: ಕೃತಕ ರಸಗೊಬ್ಬರ ಅಭಾವ ಸೃಷ್ಟಿಯಾದಂತೆ ಕೃತಕ ಸಂಪನ್ಮೂಲ ಕೊರತೆ ಕೂಡ ಸೃಷ್ಟಿಯಾಗುತ್ತಿದೆ. ಅದೇ ಗ್ರಾಮದ ಕೂಲಿ ಕಾರ್ಮಿಕರು ಊರಿನವರ ಹೊಲಗಳಿಗೆ ಬರುತ್ತಿಲ್ಲ. ನಾವು ಬೇರೆ ಊರುಗಳಿಗೆ ಕೂಲಿಗೆ ಹೋಗುತ್ತೇವೆ ಎನ್ನುತ್ತಿದ್ದಾರೆ. ಬೇರೆ ಭಾಗದವರು ವಾಹನಗಳನ್ನು ತಂದು ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಈ
ಗ್ರಾಮಸ್ಥರು ವಿ ಇಲ್ಲದೇ ಬೇರೆ ಭಾಗದವರನ್ನು ಕರೆಸಿಕೊಳ್ಳುವಂತಾಗಿದೆ. ಇದರಿಂದ ಕೂಲಿ ಕಾರ್ಮಿಕರ ಕೃತಕ ಅಭಾವ ಸೃಷ್ಟಿಯಾಗುತ್ತಿದೆ. ಅಲ್ಲದೇ, ಕಾರ್ಮಿಕರು ಸುಮಾರು 30-50 ದೂರದವರೆಗೂ ಕೆಲಸಕ್ಕೆ ಹೋಗಿ ಬರುತ್ತಿದ್ದಾರೆ. ಟಂಟಂ ಗಾಡಿಗಳು, ಪಿಕಪ್ ವಾಹನಗಳಲ್ಲೇ ಕೂಲಿ ಕಾರ್ಮಿಕರನ್ನು ಕರೆ ತರಬೇಕಿದೆ.