Lok Sabha Election 2024; ಕಾಗೇರಿ, ಕಾರಜೋಳ, ಡಾ| ಸುಧಾಕರ್ ಕಣಕ್ಕೆ?
ಜೆಡಿಎಸ್ಗೆ ಬಿಟ್ಟುಕೊಡುವ 3 ಕ್ಷೇತ್ರದ ಬಗ್ಗೆಯೂ ಚರ್ಚೆ
Team Udayavani, Mar 21, 2024, 7:30 AM IST
ಬೆಂಗಳೂರು: ಬಾಕಿ ಉಳಿದಿರುವ 5 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಗೆ ಸಂಬಂಧಪಟ್ಟಂತೆ ರಾಷ್ಟ್ರೀಯ ನಾಯಕರ ಜತೆಗೆ ರಾಜ್ಯದ ಪ್ರಮುಖರು ಮಂಗಳವಾರ ರಾತ್ರಿ ಮಹತ್ವದ ಸಭೆ ನಡೆಸಿದ್ದು ಶುಕ್ರವಾರ ಟಿಕೆಟ್ ಘೋಷಣೆ ಯಾಗಲಿದೆ.
ಬೆಳಗಾವಿ, ಉತ್ತರ ಕನ್ನಡ, ರಾಯಚೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ ಕ್ಷೇತ್ರಗಳ ಜತೆಗೆ ಜೆಡಿಎಸ್ಗೆ ಬಿಟ್ಟುಕೊಡಬೇಕಾದ 3 ಕ್ಷೇತ್ರಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆಯಾಗಿದ್ದು, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಎಲ್ಲ ಕ್ಷೇತ್ರಗಳ ಸ್ಥಿತಿಗತಿ ಬಗ್ಗೆ ಬಿ.ಎಸ್. ಯಡಿಯೂರಪ್ಪ, ವಿಜಯೇಂದ್ರ ಹಾಗೂ ಆರ್.ಅಶೋಕ ಮನದಟ್ಟು ಮಾಡಿಕೊಟ್ಟಿದ್ದಾರೆ.
ಬುಧವಾರ ಬೆಳಗ್ಗೆ ದೆಹಲಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಾಕಿ ಉಳಿದಿರುವ 5 ಕ್ಷೇತ್ರಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜತೆ ಚರ್ಚೆ ನಡೆಸುವುದು ಮಾತ್ರ ಬಾಕಿ ಇದೆ. ಮಾ.22ರಂದು ಟಿಕೆಟ್ ಘೋಷಣೆಯಾಗಲಿದೆ ಎಂದು ಹೇಳಿದ್ದಾರೆ.
ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಯಿಂದ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸುವುದು ನಿಶ್ಚಿತ. ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಜತೆಗೆ ನಿರಂತರ ಸಂಪರ್ಕದಲ್ಲಿ ಇದ್ದಾರೆ. ಪಟ್ಟಿ ಬಿಡುಗಡೆಯಾದ ತಕ್ಷಣವೇ ರಾಜ್ಯಾದ್ಯಂತ ಪ್ರವಾಸ ಪ್ರಾರಂಭಿಸುತ್ತೇವೆ ಎಂದು ಹೇಳಿದರು.
ಅನಂತ್ಗೆ ಕೊಕ್?
ಮಂಗಳವಾರ ನಡೆದ ಸಭೆಯ ಬಳಿಕ ಉತ್ತರ ಕನ್ನಡ ಜಿಲ್ಲೆಯ ಹಾಲಿ ಸಂಸದ ಅನಂತಕುಮಾರ್ ಹೆಗಡೆಯವರಿಗೆ ಈ ಬಾರಿ ಟಿಕೆಟ್ ತಪ್ಪುವುದು ಬಹುತೇಕ ದೃಢವಾಗುತ್ತಿದೆ. ಹೆಗಡೆ ಬಗ್ಗೆ ರಾಷ್ಟ್ರ ನಾಯಕರ ಅಸಮಾ ಧಾನ ಹಿನ್ನೆಲೆಯಲ್ಲಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಈ ಬಾರಿ ಕೆನರಾ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲು ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ.
ಅದೇ ರೀತಿ ರಾಯಚೂರಿನಿಂದ ಬಿ.ವಿ. ನಾಯಕ್, ಚಿತ್ರದುರ್ಗದಿಂದ ಗೋವಿಂದ ಕಾರಜೋಳ, ಚಿಕ್ಕಬಳ್ಳಾಪುರದಿಂದ ಡಾ| ಕೆ.ಸುಧಾಕರ್ ಹೆಸರು ಬಹುತೇಕ ಅಂತಿಮ ಗೊಂಡಿದೆ. ಆದರೆ ಬೆಳಗಾವಿ ವಿಚಾರದಲ್ಲಿ ಮಾತ್ರ ಇನ್ನೂ ಗೊಂದಲಗಳಿವೆ ಎಂದು ಹೇಳಲಾಗುತ್ತಿದೆ.
ಸಂಭಾವ್ಯ ಅಭ್ಯರ್ಥಿಗಳು
ಉತ್ತರ ಕನ್ನಡ:
ವಿಶ್ವೇಶ್ವರ ಹೆಗಡೆ ಕಾಗೇರಿ
ರಾಯಚೂರು: ಬಿ.ವಿ.ನಾಯಕ್
ಚಿತ್ರದುರ್ಗ:
ಗೋವಿಂದ ಕಾರಜೋಳ
ಚಿಕ್ಕಬಳ್ಳಾಪುರ: ಡಾ|ಕೆ.ಸುಧಾಕರ್
ಬೆಳಗಾವಿ: ಅಭ್ಯರ್ಥಿ ಆಯ್ಕೆ ಗೊಂದಲ