ಮಾನವ-ವನ್ಯಜೀವಿ ಸಂಘರ್ಷ: 9 ಜಿಲ್ಲೆಗಳಿಗೆ ನೋಡಲ್ ಅಧಿಕಾರಿ ನೇಮಕ
Team Udayavani, Nov 25, 2023, 11:39 PM IST
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿ ರುವ ಮಾನವ ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷ ವನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ, ಕೊಡಗು, ಚಿಕ್ಕಮಗಳೂರು ಸಹಿತ 9 ಜಿಲ್ಲೆಗಳಿಗೆ ನೋಡಲ್ ಅಧಿಕಾರಿ ಗಳನ್ನು ನೇಮಿಸಿ ಆದೇಶಿಸಿದೆ. ವನ್ಯ ಜೀವಿಗಳು ಹಾಗೂ ಮಾನವನ ನಡುವಿನ ಸಂಘರ್ಷಗಳು ಇತ್ತೀಚೆಗೆ ವಿಕೋಪಕ್ಕೆ ಹೋಗಿ ಸಾಕಷ್ಟು ಮಂದಿ ಮೃತಪಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸರಕಾರ, ನೋಡಲ್ ಅಧಿಕಾರಿಗಳನ್ನು ನೇಮಿಸಿ ಅವರಿಗೆ ಕೆಲವು ಜವಾಬ್ದಾರಿಗಳನ್ನು ಕೊಟ್ಟಿದೆ.
ಅಧಿಕಾರಿಗಳ ಜತೆ ಸಮಾಲೋಚನೆ
ಜಿಲ್ಲೆಯಲ್ಲಿ ವನ್ಯ ಜೀವಿಗಳ ಹಾಗೂ ಮಾನವ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಡೀಸಿ, ಎಸ್ಪಿ ಇತರ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಸಮಾಲೋಚಿಸಿ ಯೋಜನಾ ವರದಿ ತಯಾರಿಸಬೇಕು, ನೋಡಲ್ ಅಧಿಕಾರಿಗಳು ಕ್ಷೇತ್ರ ಭೇಟಿಯ ವರದಿಯನ್ನು ಕಡ್ಡಾಯವಾಗಿ ಪ್ರಧಾನ ಅರಣ್ಯ ಸಂರಕ್ಷಣಾ ಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು) ಮತ್ತು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸಲ್ಲಿಸಬೇಕೆಂದು ಸರಕಾರ ಸೂಚಿಸಿದೆ.
ಯೋಜನಾ ವರದಿ ಸಲ್ಲಿಸಬೇಕು
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಜಿಲ್ಲೆಗಳ ವರದಿಗಳನ್ನು ಅವಲೋಕಿಸಿ ರಾಜ್ಯ ಮಟ್ಟದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಗ್ರ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸುವಂತೆ ಅರಣ್ಯ ಜೀವಿ ಪರಿಸ್ಥಿತಿ ಹಾಗೂ ಪರಿಸರ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿಗಳು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ವಾರದಲ್ಲಿ 3 ದಿನ ಕ್ಷೇತ್ರ ಭೇಟಿ
ನೋಡಲ್ ಅಧಿಕಾರಿಗಳು ತಮಗೆ ಜವಾಬ್ದಾರಿ ವಹಿಸಿದ ಜಿಲ್ಲೆಗಳಿಗೆ ವಾರದಲ್ಲಿ ಮೂರು ದಿನ ಭೇಟಿ ನೀಡಬೇಕೆಂದು ಸರಕಾರ ತನ್ನ ಆದೇಶದಲ್ಲಿ ಸೂಚಿಸಿದೆ. ಕ್ಷೇತ್ರ ಭೇಟಿ ವೇಳೆ ಮಾನವ-ವನ್ಯ ಪ್ರಾಣಿ ಸಂಘರ್ಷ ಕುರಿತಂತೆ ಪರಿಶೀಲನೆ ಸಭೆ ನಡೆಸಬೇಕು, ಜಿಲ್ಲೆಯಲ್ಲಿ ಬಾಕಿ ಇರುವ ವಿವಿಧ ಪರಿಹಾರಾತ್ಮಕ ಧನ ಪಾವತಿಸುವ ಪ್ರಕರಣಗಳ ಕುರಿತು ವಿಶೇಷವಾಗಿ ಪರಿಶೀಲಿಸಬೇಕು ಎಂದೂ ಸರಕಾರ ತಿಳಿಸಿದೆ.