ಪೊಲೀಸರ ಕ್ರಮಗಳಿಂದ ರೈತರ ಸಾವಾಗಿಲ್ಲ
ರಾಜ್ಯಸಭೆಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ವಿವರಣೆ
Team Udayavani, Dec 11, 2021, 7:15 AM IST
ಹೊಸದಿಲ್ಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ನಾನಾ ಭಾಗಗಳಲ್ಲಿ ನಡೆದಿದ್ದ ರೈತರ ಪ್ರತಿಭಟನೆ ವೇಳೆ, ಪೊಲೀಸರು ಜಾರಿಗೊಳಿಸಿದ ಕ್ರಮಗಳಲ್ಲಿ ಯಾವುದೇ ರೈತರು ಸಾವಿಗೀಡಾಗಿಲ್ಲ ಎಂದು ಕೇಂದ್ರ ಸರಕಾರ ಸಂಸತ್ತಿಗೆ ತಿಳಿಸಿದೆ.
ಶುಕ್ರವಾರದ ರಾಜ್ಯಸಭಾ ಕಲಾಪದಲ್ಲಿ, ಕಾಂಗ್ರೆಸ್ನ ಧೀರಜ್ ಪ್ರಸಾದ್ ಸಾಹು ಹಾಗೂ ಆಮ್ ಆದ್ಮಿ ಸಂಸದ ಸಂಜಯ್ ಸಿಂಗ್ ಅವರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈತರ ಪ್ರತಿಭಟನೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರು ಕೈಗೊಂಡಿದ್ದ ಕ್ರಮಗಳಲ್ಲಿ ಯಾವುದೇ ರೈತರು ಸಾವಿಗೀಡಾಗಿಲ್ಲ. ಇದರ ಹೊರತಾಗಿಯೂ ನಡೆದಿರುವ ಪ್ರತಿಭಟನ ಸಂಬಂಧಿತ ಘಟನೆಗಳಲ್ಲಿ ರೈತರು ಸಾವಿಗೀಡಾಗಿದ್ದರೆ ಅವರಿಗೆ ಆರ್ಥಿಕ ಪರಿಹಾರ ಕೊಡುವ ಜವಾಬ್ದಾರಿ ಆಯಾ ರಾಜ್ಯ ಸರಕಾರಗಳದ್ದೇ ಆಗಿರುತ್ತದೆ’ ಎಂದು ತಿಳಿಸಿದರು.
ರೈಲುಗಳಲ್ಲಿ ಶಯನ ವ್ಯವಸ್ಥೆ ಪರಿಶೀಲನೆಯಲ್ಲಿ: ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ರೈಲು ಟಿಕೆಟ್ ಶುಲ್ಕ ವಿನಾಯಿತಿ ಸೌಲಭ್ಯವನ್ನು ಮತ್ತೆ ಜಾರಿಗೊಳಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್, ರಾಜ್ಯಸಭೆಗೆ ತಿಳಿಸಿದ್ದಾರೆ. ಇತ್ತೀಚೆಗೆ ರೈಲುಗಳಲ್ಲಿ ಆಹಾರ ಸರಬರಾಜಿಗೆ ಅವಕಾಶ ಕಲ್ಪಿಸಲಾಗಿದೆ. ಸದ್ಯದಲ್ಲೇ ಹಿರಿಯ ನಾಗರಿಕರಿಗೆ ಟಿಕೆಟ್ ಶುಲ್ಕ ರಿಯಾಯಿತಿ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಜತೆಗೆ ಸ್ಲಿàಪರ್ ಕೋಚ್ಗಳಲ್ಲಿ ಈ ಹಿಂದೆ ಜಾರಿಯಲ್ಲಿದ್ದ ಹಾಸಿಗೆ, ದಿಂಬು ನೀಡುವಿಕೆಯನ್ನೂ ಪುನಃ ಜಾರಿಗೊಳಿಸುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಕೊರೊನಾದಿಂದಾಗಿ ಸ್ಲಿàಪರ್ ಕೋಚ್ಗಳಲ್ಲಿ ಹಾಸಿಗೆ, ದಿಂಬು ನೀಡುವಿಕೆಯನ್ನು ನಿಲ್ಲಿಸಲಾಗಿತ್ತು.
ಇದನ್ನೂ ಓದಿ:ಚಿಕ್ಕಮಗಳೂರು: ಪ್ರವಾಸಿ ತಾಣಗಳಿಗೆ ನಿರ್ಬಂಧ
ಅಭಿಯಾನಕ್ಕೆ 446 ಕೋಟಿ ರೂ. ಖರ್ಚು!
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಬೇಟಿ ಪಢಾವೊ, ಬೇಟಿ ಬಚಾವೊ’ ಗಾಗಿ ಮೀಸಲಿರಿಸಿದ್ದ ಹಣದಲ್ಲಿ ಶೇ. 80ರಷ್ಟು ಹಣವನ್ನು ಮಾಧ್ಯಮಗಳ ಜಾಹೀರಾತಿಗೆ ಖರ್ಚು ಮಾಡಲಾಗಿದೆ ಎಂದು ಮಹಿಳಾ ಸಶಕ್ತೀಕರಣ ಕುರಿತಾದ ಸಂಸದೀಯ ಸ್ಥಾಯಿ ಸಮಿತಿ ತಿಳಿಸಿದೆ. ಜನಜಾಗೃತಿ ಮೂಡಿಸುವ ಉದ್ದೇಶದಿಂದ ಮಾಧ್ಯಮಗಳ ಮೂಲಕ ಚಾಲನೆ ನೀಡಲಾಗಿದ್ದ ಅಭಿಯಾನಕ್ಕೆ ಬರೋಬ್ಬರಿ 446.72 ಕೋಟಿ ರೂ.ಗಳಷ್ಟು ಹಣ ಖರ್ಚು ಮಾಡಲಾಗಿದೆ. ಇದು ಈ ಯೋಜನೆಗಾಗಿ ಮೀಸರಿಸಿದ ಒಟ್ಟಾರೆ ಹಣದ ಶೇ. 80ರಷ್ಟು ಹಣವಾಗಿದ್ದು, ಇನ್ನು ಮುಂದೆ, ಯೋಜನೆಯ ಹಣವನ್ನು ಹೆಣ್ಣುಮಕ್ಕಳ ವಿದ್ಯಾಭ್ಯಾಸ ಹಾಗೂ ಆರೋಗ್ಯ ಕುರಿತಾದ ಯೋಜನೆಗಳಿಗೆ ವ್ಯಯಿಸಬೇಕು ಎಂದು ಸಮಿತಿ ಕೇಂದ್ರಕ್ಕೆ ಕಿವಿಮಾತು ಹೇಳಿದೆ.